'ಸ್ಕೂಲ್ ಹೆಡ್ ಮಾಸ್ಟರ್' ಅನೀಶ್ 'ಕಾಮಿಡಿ ಕಿಲಾಡಿ' ಆದ ಇಂಟ್ರೆಸ್ಟಿಂಗ್ ಕಥೆ
ಕನಸು ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತೆ. ಆದ್ರೆ, ಎಲ್ಲರ ಕನಸು ಈಡೇರುವುದಿಲ್ಲ. ಅವಕಾಶ ಎನ್ನುವುದು ಎಲ್ಲರಿಗೂ ಬರುತ್ತೆ, ಆದ್ರೆ ಬಂದ ಅವಕಾಶಗಳನ್ನ ಸದ್ಬಳಕೆ ಮಾಡಿಕೊಂಡವರು ಮಾತ್ರ ಕೆಲವರು.
ಕೆಲವರು ಯಶಸ್ಸಿಗಾಗಿ ಹುಡುಕಿಕೊಂಡು ಹೋಗ್ತಾರೆ. ಮತ್ತೆ ಕೆಲವರಿಗೆ ಯಶಸ್ಸು ಅರಿಸಿಕೊಂಡು ಬರುತ್ತೆ. ಈ ಎಲ್ಲ ಉದಾಹರಣೆಗಳು ಈ ಕಲಾವಿದನಿಗೆ ಒಂದು ರೀತಿಯಾಗಿ ಹೋಲುತ್ತೆ.
ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅನೀಶ್ ವಿಶೇಷ. ಹೆಣ್ಣು ಪಾತ್ರಗಳ ಮೂಲಕವೇ ಕಲಾಭಿಮಾನಿಗಳ ಮನಸ್ಸು ಮುಟ್ಟಿದ ಕಲಾ ಚತುರ. ಅಂದ್ಹಾಗೆ, ಅನೀಶ್ 'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದಿದ್ದೆ ಒಂದು ಆಕಸ್ಮಿಕ. ಆ ಕಥೆಯನ್ನ ಮುಂದೆ ಓದಿ....
ಸಂದರ್ಶನ-ಭರತ್ ಕುಮಾರ್

'ಕಾಮಿಡಿ ಕಿಲಾಡಿ' ಅನೀಶ್ ಬಗ್ಗೆ.....
ಅನಿಶ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೊಕಿನ ವೇಲೂರಿನವರು. ತಂದೆ ಕೋಟ್ಯಪ್ಪ ಪೂಜಾರಿ ಮತ್ತು ತಾಯಿ ವಿಜಯಲಕ್ಷ್ಮಿ. ನಾಲ್ಕು ಜನ ಮಕ್ಕಳಲ್ಲಿ, ಅನೀಶ್ ಮೂರನೇಯವರು.

ನಟನೆ ಮೇಲೆ ಆಸಕ್ತಿ ಮೂಡಿದ್ದು ಹೇಗೆ?
ಪ್ರಾಥಮಿಕ ಶಿಕ್ಷಣ ಓದುವಾಗ ಶಶಿಪ್ರಭಾ ಎಂಬ ಟೀಚರ್ ಮೊದಲ ಬಾರಿಗೆ 'ಚದ್ಮವೇಷ' ಹೇಳಿಕೊಟ್ಟರು. ಅವರು ಹೇಳಿಕೊಟ್ಟಂತೆ ಮಾಡಿದೆ. ಅದಕ್ಕೆ ನನಗೆ ಮೊದಲ ಬಹುಮಾನ ಸಿಕ್ಕಿತ್ತು. ಅಲ್ಲಿಂದ ನಟನೆ ಮೇಲೆ ಆಸಕ್ತಿ ಬೆಳೆಯಿತು. ಅದರ ಜೊತೆಗೆ ಸಂಗೀತದ ಬಗ್ಗೆ ಒಲವು ಕೂಡ ಮೂಡಿತ್ತು.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಬಂದಿದ್ದು ಹೇಗೆ?
ಪ್ಯಾಕ್ ಪ್ಯಾಕ್ ಹಿತೇಶ್ ಮತ್ತು ನಾನು ಸ್ನೇಹಿತರು. ಅವರು ಆಡಿಷಿನ್ ಕೊಟ್ಟಿದ್ದರು. ಆಗ ನನ್ನ ಕೂಡ ಕರೆದರು, ನಾನು ಬೇರೆ ಕೆಲಸದಲ್ಲಿ ಬ್ಯುಸಿಯಿದ್ದ ಕಾರಣ ಹೋಗೋದಕ್ಕೆ ಆಗಿರಲಿಲ್ಲ. ಆದ್ರೆ, ಮತ್ತೊಂದು ದಿನ ಹಿತೇಶ್ ಬಂದು, ನನಗೆ ಗ್ರೂಪ್ ಆಕ್ಟ್ ಮಾಡಿ ತೋರಿಸು ಅಂತ ಹೇಳಿದ್ದಾರೆ. ಬಾ ನನ್ನ ಜೊತೆಯಲ್ಲಿ ಅಭಿನಯಿಸು ಎಂದು ಕರೆದುಕೊಂಡು ಹೋದ. ಹಿತೇಶ್ ಗಾಗಿ ನಾನು ಆಕ್ಟ್ ಮಾಡಿದೆ. ಆದ್ರೆ, ಅದೃಷ್ಟವಶಾತ್ ಒಂದು ವಾರದ ನಂತರ ನನಗೆ ಜೀ ಕನ್ನಡದಿಂದ ಕಾಲ್ ಬಂತು. ನೀವು ಕಾಮಿಡಿ ಕಿಲಾಡಿಗಳಿಗೆ ಆಯ್ಕೆ ಆಗಿದ್ದರು ಎಂದರು.

ಹೆಡ್ ಮಾಸ್ಟರ್ ವೃತ್ತಿ ಬಟ್ಟು ಕಾಮಿಡಿ ಕಿಲಾಡಿ ಆಯ್ಕೆ ಮಾಡಿಕೊಂಡಿದ್ದು ಯಾಕೆ?
''ನಾನು ಬಿ.ಎ ಮುಗಿಸಿದ್ದೀನಿ. ಕನ್ನಡದಲ್ಲಿ ಎಂ.ಎ ಪದವೀಧರ. ಶಾಲೆಯೊಂದರಲ್ಲಿ ಹೆಡ್ ಮಾಸ್ಟರ್ ಕೆಲಸ ಮಾಡ್ತಿದ್ದೆ. ನನಗೆ ಕಾಮಿಡಿ ಕಿಲಾಡಿಗಳು ಸಿಕ್ಕಿದ್ಮೇಲೆ, ಏನ್ ಮಾಡುವುದು ಅಂತ ಯೋಚನೆ ಆಯ್ತು. ಆಮೇಲೆ, ನಮ್ಮ ಸ್ಕೂಲ್ ಸಂಚಾಲಕರಿಗೆ ಹೇಳಿದೆ. ಅವರು ಖುಷಿಯಿಂದ, ರಜೆ ತಗೊಂಡು ಹೋಗಿ ಎಂದರು. ಸೋ ಅವರೆಲ್ಲರ ಪ್ರೋತ್ಸಾಹ ಇಲ್ಲಿಗೆ ಬಂದೆ''

'ಕಾಮಿಡಿ ಕಿಲಾಡಿಗಳು' ಜರ್ನಿ ಹೇಗಿತ್ತು?
''ನಾನು ಯಾವತ್ತು ಲೇಡಿ ಪಾತ್ರ ಮಾಡಿದವನಲ್ಲ. ಆದ್ರೆ, ಇಲ್ಲಿ ಮೊದಲ ಪಾತ್ರವೇ 'ದ್ರೌಪದಿ' ಕೊಟ್ಟರು. ಭಯ ಆಗಿತ್ತು. ಆಮೇಲೆ ಹೇಗೋ ಮಾಡ್ಬಿಟ್ಟೆ. ಆದ್ರೂ ಚೆನ್ನಾಗಿ ಬಂತು. ಅಲ್ಲಿಂದ 'ರುಕ್ಕು' ಅಂತ ಮತ್ತೊಂದು ಪಾತ್ರ ಮಾಡಿದೆ ಅದು ಕೂಡ ಎಲ್ಲರಿಗೂ ಇಷ್ಟವಾಯಿತು.ಆಮೇಲೆ ಕೆಲವೊಂದು ಪಾತ್ರಗಳು ಸರಿಯಾಗಿ ಮಾಡೋಕೆ ಆಗಲಿಲ್ಲ. ಡೇಂಜರ್ ಜೋನ್ ಗೆ ಹೋದೆ. ಮತ್ತೆ ಚಾಲೆಂಜ್ ಆಗಿ ಎಲ್ಲ ಪಾತ್ರಗಳನ್ನ ಮಾಡಿದೆ. ಮಧ್ಯೆದಲ್ಲೆ ಹೋಗ್ತಿನಿ ಅಂದುಕೊಂಡಿದ್ದೆ, ಆದ್ರೆ, ಫೈನಲ್ ವರೆಗೂ ಬಂದೆ''

ಮಹಿಳೆ ಮಾತ್ರಗಳಲ್ಲಿ ಹೆಚ್ಚು ಯಶಸ್ಸು ಸಿಕ್ತು? ಅದು ಹೇಗೆ?
''ನಿಜವಾಗಲೂ ಹೆಣ್ಣು ಪಾತ್ರಗಳು ಚಾಲೆಂಜ್ ಆಗಿತ್ತು. ಸೀರೆ, ಆಭರಣಗಳು, ಎಲ್ಲವೂ ಕಷ್ಟವಾಗುತ್ತಿತ್ತು. ಆದ್ರೆ, ಟಿವಿಯಲ್ಲಿ ನೋಡಿದಾಗ ತುಂಬಾ ಚೆನ್ನಾಗಿ ಬಂದಿತ್ತು. ಭಾವನಾತ್ಮವಾಗಿ, ಬೋಲ್ಡ್ ಪಾತ್ರ, ಎಲ್ಲವೂ ಮಾಡಿದ್ದೀನಿ. ಎಲ್ಲವನ್ನ ಜನ ಇಷ್ಟಪಟ್ಟಿದ್ದಾರೆ. ಖುಷಿಯಾಗುತ್ತೆ''.

ಕಾಮಿಡಿ ಕಿಲಾಡಿಗಳಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು?
''ಕಣ್ಣಪ್ಪ ಎಂಬ ಪಾತ್ರ, ಕುರುಡನಾಗಿ ಅಭಿನಯಿಸಿದ್ದು ತುಂಬಾ ಇಷ್ಟ. 'ಎದ್ದೇಳು ಮಂಜುನಾಥ' ಚಿತ್ರದ ತಬಲ ನಾಣಿ ಅವರನ್ನ ಅನುಕರಣೆ ಮಾಡಿದ್ದೆ. ಅದರ ಜೊತೆಗೆ ಅಜ್ಜ ಮತ್ತು ಅಜ್ಜಿ ಪಾತ್ರ. ನಾನು ಮತ್ತು ನಯನ ಅಭಿನಯಿಸಿದ್ದೀವಿ. ತಂದೆ-ತಾಯಿಯನ್ನ ಜೊತೆಯಲ್ಲಿ ಇಟ್ಕೊಂಡು ಇರಬೇಕು ಎಂಬ ಸಂದೇಶ ಕೊಟ್ಟಿದ್ದು. ಅದು ನನಗೆ ಮರೆಯಲಾಗದ ಪಾತ್ರಗಳು''.

ಕಾಮಿಡಿ ಮಾಡುವುದು ಎಷ್ಟು ಕಷ್ಟ?
''ಕಾಮಿಡಿ ಮಾಡುವುದು ಕಷ್ಟ ಅಂತಲ್ಲ, ಆದ್ರೆ, ಕಾಮಿಡಿ ಮಾಡೋರ ಮನಸ್ಸಲ್ಲಿ ಕಷ್ಟ ಇರುತ್ತೆ. ನನ್ನ ಕುಟುಂಬ ಹಿನ್ನಲೆ ನೋಡಿದ್ರೆ ನನಗೂ ದುಃಖ ಬರುತ್ತೆ. ವೇದಿಕೆ ಬಂದಾಗ, ಎಲ್ಲವನ್ನೂ ಮರೆತಿವಿ''.

ನಿಮ್ಮ ಮುಂದಿನ ಯೋಜನೆಗಳೇನು?
''ಯಶಸ್ಸು ಸಿಕ್ಕಿದೆ. ಜೊತೆಗೆ ಜವಾಬ್ದಾರಿ ಹೆಚ್ಚಿದೆ. ಕಲಾವಿದನಾಗಬೇಕೆಂಬ ಆಸೆಯಿದೆ. ಹಾಗಾಗಿ, ಟೀಚರ್ ಆಗಿದ್ದುಕೊಂಡು, ಕಲಾವಿದನಾಗಬೇಕು ಎಂದು ಕೊಂಡಿದ್ದೀನಿ. ತುಳು, ಮತ್ತು ಕನ್ನಡ ಸಿನಿಮಾಗಳಲ್ಲಿ ಅವಕಾಶ ಸಿಗುವ ಸೂಚನೆಯಿದೆ. ಇನ್ನೂ ಮಾತುಕತೆ ನಡೆದಿಲ್ಲ. ನೋಡೋಣ ಅವಕಾಶ ಸಿಕ್ಕಿದ್ರೆ ಖಂಡಿತಾ ಮಾಡ್ತಿನಿ.


Click it and Unblock the Notifications











