ನಟಿ ಮೇಲೆ ಅತ್ಯಾಚಾರ ಯತ್ನ: ನಟ ದಿಲೀಪ್ ಜಾಮೀನು ರದ್ದು ಸಾಧ್ಯತೆ
ದೇಶದ ಗಮನ ಸೆಳೆದಿದ್ದ 2017 ರ ಮಲಯಾಳಂ ನಟಿಯ ಮೇಲಿನ ಅತ್ಯಾಚಾರ ಯತ್ನ ಹಾಗೂ ಹಿಂಸೆ ಪ್ರಕರಣದಲ್ಲಿ ಇದೀಗ ನಟ ದಿಲೀಪ್ಗೆ ನೀಡಲಾಗಿರುವ ಜಾಮೀನು ರದ್ದಾಗುವ ಸಾಧ್ಯತೆ ಎದುರಾಗಿದೆ.
ಪ್ರಕರಣದ ಎಂಟನೇ ಆರೋಪಿಯಾಗಿರುವ ನಟ ದಿಲೀಪ್ಗೆ ಕೇರಳ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ನಟ ದಿಲೀಪ್, ಜಾಮೀನು ನೀಡಬೇಕಾದರೆ ವಿಧಿಸಲಾಗಿದ್ದ ಷರತ್ತುಗಳಂತೆ ನಡೆದುಕೊಂಡಿಲ್ಲ, ನಿಯಮಗಳನ್ನು ಮೀರಿದ್ದಾರೆ ಹಾಗಾಗಿ ಅವರ ಜಾಮೀನು ರದ್ದು ಮಾಡಬೇಕೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸ್ ಇಲಾಖೆಯ ಅಪರಾಧ ತನಿಖಾ ವಿಭಾಗವು ಅರ್ಜಿ ಸಲ್ಲಿಸಿತ್ತು.
ಅರ್ಜಿಯನ್ನು ಪರಾಮರ್ಶಿಸಿರುವ ಕೇರಳ ಹೈಕೋರ್ಟ್, ನಟ ದಿಲೀಪ್ಗೆ ನೊಟೀಸ್ ಜಾರಿ ಮಾಡಿದ್ದು, ಸ್ಪಷ್ಟನೆ ನೀಡುವಂತೆ ಕೋರಿದೆ. ಒಂದೊಮ್ಮೆ ಜಾಮೀನಿ ಷರತ್ತುಗಳನ್ನು ದಿಲೀಪ್ ಮುರಿದಿದ್ದರೆ ನಿಯಮಬಾಹಿರವಾಗಿ ವರ್ತಿಸಿ, ಅದಕ್ಕೆ ಸಮಂಜಸ ಕಾರಣವನ್ನು ನೀಡಲು ದಿಲೀಪ್ ವಿಫಲವಾಗಿದ್ದರೆ ದಿಲೀಪ್ರ ಜಾಮೀನು ರದ್ದಾಗುವ ಸರ್ವ ಸಾಧ್ಯತೆ ಇದೆ.

2017 ರಲ್ಲಿ ನಡೆದಿದ್ದ ಭಯಾನಕ ಘಟನೆ
2017 ರಲ್ಲಿ ಮಲಯಾಳಂ ಮೂಲದ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಶೂಟಿಂಗ್ ಮುಗಿಸಿ ತಮ್ಮ ಕಾರಿನಲ್ಲಿ ಮನೆಗೆ ಹೋಗುವಾಗ ಕಾರನ್ನು ಅಡ್ಡಗಟ್ಟಿದ್ದ ಕೆಲವು ಕಿಡಿಗೇಡಿಗಳು ಆಕೆಯ ಕಾರು ಏರಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಆಕೆಯ ಮಾನಭಂಗಕ್ಕೂ ಯತ್ನ ನಡೆದಿತ್ತು. ಅದನ್ನೆಲ್ಲ ವಿಡಿಯೋ ರೆಕಾರ್ಡ್ ಸಹ ಮಾಡಲಾಗಿತ್ತು. ನಟಿ ದೂರು ನೀಡಿದ ಒಂದು ತಿಂಗಳ ಬಳಿಕ ಏಳು ಮಂದಿ ಆರೋಪಿಗಳ ಬಂಧನವಾಗಿತ್ತು. ಅದರಲ್ಲಿ ಪ್ರಮುಖ ಆರೋಪಿ ಪಲ್ಸರ್ ಸುನಿ ಆಗಿದ್ದ.

ಜೈಲು ಪಾಲಾಗಿದ್ದ ನಟ ದಿಲೀಪ್
ಪಲ್ಸರ್ ಸುನಿಯ ಬಂಧನದ ಬಳಿಕ, ಆತ, ಮಲಯಾಳಂನ ಖ್ಯಾತ ನಟ ದಿಲೀಪ್ನ ಸೂಚನೆ ಮೇರೆಗೆ ನಟಿಯ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಯತ್ನ ಮಾಡಿದ್ದ ಅಂಶ ಬೆಳಕಿಗೆ ಬಂತು. ಬಳಿಕ ವಿಚಾರಣೆ ನಡೆದು ನಟ ದಿಲೀಪ್ ಬಂಧನವಾಗಿ ಸತತ 75 ದಿನಗಳ ಕಾಲ ದಿಲೀಪ್ ಜೈಲಿನಲ್ಲಿ ಕಾಲ ಕಳೆದ. ಪ್ರಕರಣ ವಿಚಾರಣೆ ಈಗಲೂ ನಡೆಯುತ್ತಿದೆ.

ಮಂಜು ವಾರಿಯರ್ ಪರ ನಿಂತಿದ್ದ ನಟಿ
ದಿಲೀಪ್, ನಟಿ ಮಂಜು ವಾರಿಯರ್ ಅನ್ನು ವಿವಾಹವಾಗಿದ್ದರು. ಮಂಜು ವಾರಿಯರ್, ಸಂತ್ರಸ್ತ ನಟಿಗೆ ಆಪ್ತ ಗೆಳತಿಯಾಗಿದ್ದು, ದಿಲೀಪ್ ಹಾಗೂ ನಟಿ ಕಾವ್ಯಾ ನಡುವೆ ಸಂಬಂಧವಿದೆ ಎಂದು ಸಂತ್ರಸ್ತ ನಟಿ ಮಂಜು ವಾರಿಯರ್ಗೆ ತಿಳಿಸಿದ್ದರು. ಇದರಿಂದ ಇಬ್ಬರ ವಿಚ್ಛೇಧನವಾಯ್ತು. ನ್ಯಾಯಾಲಯದಲ್ಲಿಯೂ ಸಂತ್ರಸ್ತ ನಟಿ, ಮಂಜು ವಾರಿಯರ್ ಪರ ನಿಂತಿದ್ದರು. ಇದರಿಂದ ಸಿಟ್ಟಾಗಿದ್ದ ದಿಲೀಪ್, ಪಲ್ಸರ್ ಸುನಿ ಹಾಗೂ ಇತರರಿಗೆ ಸುಫಾರಿ ನೀಡಿ, ನಟಿಯ ಮೇಲೆ ಅತ್ಯಾಚಾರ ಮಾಡಿಸಲು ಯತ್ನಿಸಿದ್ದ. ಅದರ ವಿಡಿಯೋ ಅನ್ನೂ ಸಹ ರೆಕಾರ್ಡ್ ಮಾಡಿಕೊಂಡಿದ್ದ.

ತನಿಖಾಧಿಕಾರಿಯನ್ನು ಕೊಲ್ಲುವ ಯತ್ನ!
ಇದು ಮಾತ್ರವೇ ಅಲ್ಲದೆ, ಪ್ರಕರಣದಲ್ಲಿ ತನ್ನ ಹೆಸರು ಬಂದು, ಬಂಧನವಾದ ಬಳಿಕ ಇನ್ನಷ್ಟು ಸಿಟ್ಟಿಗೆದ್ದ ನಟ ದಿಲೀಪ್, ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಯನ್ನು ಸಹ ಕೊಲ್ಲುವ ಯೋಜನೆ ಹಾಕಿದ್ದ ಎಂಬ ಆರೋಪವೂ ಕೇಳಿ ಬಂತು. ಈ ಬಗ್ಗೆಯೂ ತನಿಖೆ ನಡೆದಿದ್ದು, ಎಫ್ಐಆರ್ ಸಹ ದಾಖಲಾಗಿದೆ. ನಟ ದಿಲೀಪ್ ಇದೀಗ ಜಾಮೀನಿನ ಮೇಲೆ ಹೊರಗಿದ್ದಾನೆ. ಇದೀಗ ಜಾಮೀನು ಷರತ್ತುಗಳನ್ನು ಮುರಿದ ಆರೋಪವನ್ನು ಕೇರಳ ಪೊಲೀಸರು ದಿಲೀಪ್ ಮೇಲೆ ಹೇರಿದ್ದು, ಜಾಮೀನು ರದ್ದಾಗುವ ಸಂಭವ ಇದೆ. ಸಂತ್ರಸ್ತ ನಟಿ ಕೋವಿಡ್ ಸಮಯದಲ್ಲಿ ವಿವಾಹವಾಗಿದ್ದು, ಆರಾಮದ ಜೀವನ ಸಾಗಿಸುತ್ತಿದ್ದಾರೆ. ಸಂತ್ರಸ್ತ ನಟಿ ಕನ್ನಡದಲ್ಲೂ ಕೆಲವು ಸ್ಟಾರ್ ನಟರೊಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











