ಎಂಪುರಾನ್ ಚಿತ್ರಕ್ಕೆ ಬಿಜೆಪಿ ವಿರೋಧ ಬೆನ್ನಲ್ಲೇ, ನಟ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ಗೆ ಐಟಿ ನೋಟಿಸ್..!
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವ ಮಾತು ಇಂದು ನಿನ್ನೆಯದ್ದಲ್ಲ.ಸಾಂವಿಧಾನಿಕ ಸಂಸ್ಥೆಗಳಾದ ಇಡಿ,ಐಟಿ,ಸಿಬಿಐ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಿಸಿಕೊಳ್ಳುತ್ತಿದೆ ಎಂದು ಅನೇಕರು ಈ ಹಿಂದೆಯಿಂದಲೂ ಹೇಳುತ್ತಾನೇ ಬಂದಿದ್ದಾರೆ.ಈಗಲೂ ಹೇಳುತ್ತಲೇ ಇದ್ದಾರೆ.ಇದರ ನಡುವೆ ಈಗ ಮಲಯಾಳಂ ಚಿತ್ರರಂಗ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಸುಳಿಯಲ್ಲಿ ಸಿಲುಕಿದೆ.ವಿಲ ವಿಲ ಒದ್ದಾಡುತ್ತಿದೆ.
ಹೌದು, ಮೋಹನ್ ಲಾಲ್ ಅಭಿನಯಿಸಿರುವ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಲ್ 2 ಎಂಪುರಾನ್ ಚಿತ್ರ ವಿವಾದದ ಅಲೆಯನ್ನು ಎಬ್ಬಿಸಿದೆ. ಬಿಜೆಪಿ ಕೆಂಗಣ್ಣಿಗೆ ಕೂಡ ಗುರಿಯಾಗಿದೆ. 24 ದೃಶ್ಯಗಳಿಗೆ ಕತ್ತರಿ ಹಾಕಿದರು ಕೂಡ ದಿನದಿಂದ ದಿನಕ್ಕೆ ವಿವಾದ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಇದರ ನಡುವೆ ಈಗ ಪೃಥ್ವಿರಾಜ್ ಸುಕುಮಾರನ್ಗೆ ಐಟಿ ನೋಟಿಸ್ ಕಳುಹಿಸಲಾಗಿದೆ.

ಇನ್ನು ನಿನ್ನೆಯಷ್ಟೇ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಚೆನ್ನೈ ಮತ್ತು ಕೊಚ್ಚಿಯಲ್ಲಿರುವ ಶ್ರೀ ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಮಯದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಅನುಮಾನದಡಿ ಗೋಪಾಲನ್ ಅವರ ವಿಚಾರಣೆಯನ್ನು ಮಾಡಿದ್ದರು.
ಈಗ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ಅಂದರೆ ಚಿತ್ರ ಬಿಡುಗಡೆಯಾದ ಎರಡು ಮೂರು ದಿನದಲ್ಲಿಯೇ ಪೃಥ್ವಿರಾಜ್ಗೆ ಐಟಿ ಇಲಾಖೆ ನೋಟಿಸ್ ನೀಡಿದ್ದು ಈ ಹಿಂದೆ ಪೃಥ್ವಿರಾಜ್ ನಿರ್ಮಾಣದ ಚಿತ್ರಗಳ ಆದಾಯದ ಕುರಿತು ಲೆಕ್ಕವನ್ನು ನೀಡುವಂತೆ ಕೇಳಿದೆ. ಏಪ್ರಿಲ್ ಅಂತ್ಯದವರೆಗೆ ಪೃಥ್ವಿರಾಜ್ಗೆ ಗಡುವು ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಂದ್ಹಾಗೇ ಡಿಸೆಂಬರ್ 2022ರಲ್ಲಿ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ, ವಿದೇಶಗಳಲ್ಲಿನ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆಯನ್ನು ಅನೇಕರು ಮಾಡಿದ್ದಾರೆ ಎಂದು ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಪೃಥ್ವಿರಾಜ್ ಸುಕುಮಾರನ್ ಮನೆ ಮತ್ತು ಕಚೇರಿಯನ್ನು ಕೂಡ ಆಗ ಪರಿಶೀಲಿಸಿದ್ದರು. ಆ ತನಿಖೆಯ ಮುಂದುವರೆದ ಭಾಗವಾಗಿ ಈಗ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಐಟಿ ಇಲಾಖೆ ಇನ್ನೊಮ್ಮೆ ನೋಟಿಸ್ ಕಳುಹಿಸಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನುಳಿದಂತೆ ಎಲ್ ಎಂಪುರಾನ್ ಚಿತ್ರ ಬಿಡುಗಡೆಯಾದ ನಂತರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಎಂಪುರಾನ್ ಹಿಂದೂ ವಿರೋಧಿ ಚಿತ್ರ ಎಂದು ಆರೋಪ ಮಾಡಿತ್ತು. ಕಾಂಗ್ರೆಸ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಹೇಳಿತ್ತು. ವಾದ-ವಿವಾದವನ್ನು ಕಂಡು ಮೋಹನ್ ಲಾಲ್ ಬಹಿರಂಗವಾಗಿ ಕ್ಷಮೆಯನ್ನು ಕೇಳಿದ್ದರು. ಒಬ್ಬ ಕಲಾವಿದನಾಗಿ ನನ್ನ ಯಾವುದೇ ಚಿತ್ರದಲ್ಲಿ ರಾಜಕೀಯ ಚಳುವಳಿ, ಸಿದ್ದಾಂತ, ಅಥವಾ ಧರ್ಮದ ಬಗ್ಗೆ ದ್ವೇಷ ಹೊಂದಿರಬಾರದೆಂದು ಖಚಿತ ಪಡಿಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಹೇಳಿದ್ದರು.ಈ ಹಿನ್ನೆಲೆ ಮೋಹನ್ ಲಾಲ್ ಅವರ ಮೇಲೆ ಇಡಿ ಮತ್ತು ಐಟಿ ದಾಳಿಯಾಗದಿರಲು ಇದೇ ಕಾರಣ, ಕ್ಷಮೆ ಕೇಳಿ ಮೋಹನ್ ಲಾಲ್ ತಪ್ಪಿಸಿಕೊಂಡರು ಎನ್ನುವ ಅಭಿಪ್ರಾಯವನ್ನು ಸದ್ಯ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ವಿವಾದದ ನಡುವೆ ಕೂಡ ಎಲ್ 2 ಎಂಪುರಾನ್ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಚಿತ್ರ ಬಾಕ್ಸಾಫೀಸ್ನಲ್ಲಿ 100 ಕೋಟಿ ಹಣವನ್ನು ಕೂಡ ಗಳಿಸಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಎಂಪುರಾನ್ 150 ಕೋಟಿ ಹಣ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮಲಯಾಳಂ ಚಿತ್ರಪಂಡಿತರು ಸದ್ಯ ಹಾಕುತ್ತಿದ್ದಾರೆ.


Click it and Unblock the Notifications











