ಕೇರಳದಲ್ಲಿ ಕೊನೆಗೂ ಅರಳಿದ ಕಮಲ; ಬಿಜೆಪಿ ಅಭ್ಯರ್ಥಿ ನಟ ಸುರೇಶ್ ಗೋಪಿ ಐತಿಹಾಸಿಕ ಗೆಲುವು
ಭಾರತ ಪ್ರಜಾಪ್ರಭುತ್ವ ದೇಶ. 5 ವರ್ಷಕ್ಕೊಮ್ಮೆ ಶಾಸಕರು, ಸಂಸದರನ್ನು ಆಯ್ಕೆ ಮಾಡುವ ಅಧಿಕಾರ ಮತದಾರರಿಗೆ ಇದೆ. ಯಾವಾಗ ಯಾರು? ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಖಾತೆಯನ್ನೇ ತೆರೆದಿರಲಿಲ್ಲ. ಕೇರಳ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ನಟ ಸುರೇಶ್ ಗೋಪಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೇಂದ್ರದ ನಾಯಕತ್ವದ ಜೊತೆ ನಟ ಗೆಲ್ಲಲು ಶ್ರಮಿಸಿದ್ದರು. ಪ್ರಧಾನಿ ಮೋದಿ ಸಹ ರೋಡ್ ಶೋ ನಡೆಸಿ ಸುರೇಶ್ ಗೋಪಿ ಪರ ಮತ ಯಾಚಿಸಿದ್ದರು. ಅಂತಿಮವಾಗಿ 412338 ಮತಗಳನ್ನು ಪಡೆದ ಅವರು 74686 ಮತಗಳ ಅಂತರದಿಂದ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಸುನೀಲ್ ಕುಮಾರ್ ಎದುರು ಗೆಲುವು ಸಾಧಿಸಿದ್ದಾರೆ.

ಸುರೇಶ್ ಗೋಪಿ ಸತತ ಎರಡನೇ ಬಾರಿಗೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. 2019 ರಲ್ಲಿ, ಅವರು ಕಾಂಗ್ರೆಸ್ ಅಭ್ಯರ್ಥಿ ಟಿಎನ್ ಪ್ರತಾಪನ್ ಅವರಿಂದ 1,21,267 ಮತಗಳಿಂದ ಸೋತಿದ್ದರು. ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದರು. ಈ ಬಾರಿ ಗೆಲ್ಲುವ ಮೂಲಕ ಕೇರಳದಲ್ಲಿ ಗೆದ್ದ ಮೊದಲ ಬಿಜೆಪಿ ಸಂಸದ ಎನಿಸಿಕೊಂಡಿದ್ದಾರೆ. ಎಲ್ಡಿಎಫ್ನಿಂದ ವಿಎಸ್ ಸುನೀಲ್ ಕುಮಾರ್ ಎರಡನೇ ಸ್ಥಾನದಲ್ಲಿದ್ದರೆ, ಯುಡಿಎಫ್ನಿಂದ ಕೆ ಮುರಳೀಧರನ್ ಮೂರನೇ ಸ್ಥಾನದಲ್ಲಿದ್ದಾರೆ.
ಮಲಯಾಳಂನ ನೂರಾರು ಸಿನಿಮಾಗಳಲ್ಲಿ ಸುರೇಶ್ ಗೋಪಿ ನಟಿಸಿದ್ದಾರೆ. 1965ರಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ಮುಂದೆ ಹೀರೊ ಆಗಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. 'ಆಪ್ತಮಿತ್ರ' ಮೂಲ 'ಮಣಿಚಿತ್ರತ್ತಾಳ್' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕನ್ನಡದಲ್ಲಿ ರಮೇಶ್ ಅರವಿಂದ್ ಆ ಪಾತ್ರ ಮಾಡಿದ್ದರು.
ಇವತ್ತಿಗೂ ಬಹುಬೇಡಿಕೆಯ ನಟನಾಗಿ ಸುರೇಶ್ ಗೋಪಿ ಗುರ್ತಿಸಿಕೊಂಡಿದ್ದಾರೆ. ಸದ್ಯ ನಾಲ್ಕು ಸಿನಿಮಾಗಳಲ್ಲಿ ಕೂಡ ಅವರ ಕೈಯಲ್ಲಿವೆ. ಕನ್ನಡದಲ್ಲಿ ಅಂಬರೀಶ್ ನಟನೆಯ 'ನ್ಯೂಡೆಲ್ಲಿ' ಚಿತ್ರದಲ್ಲಿ ಸುರೇಶ್ ಗೋಪಿ ಬಣ್ಣ ಹಚ್ಚಿದ್ದರು. ಇನ್ನುಳಿದಂತೆ ತಮಿಳು, ತೆಲುಗು, ಹಿಂದಿ ಸಿನಿಮಾಹಳಲ್ಲಿ ನಟಿಸಿದ್ದಾರೆ. ಆದರೆ 6 ದಶಕಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬರ್ತಿದ್ದಾರೆ.


Click it and Unblock the Notifications










