ಹೆಣ್ಣು ಮಕ್ಕಳಿಗೆ ಮದ್ವೆ ಬೇಕಾ? ಡಿವೋರ್ಸ್ ವದಂತಿ ಬೆನ್ನಲ್ಲೇ ನಟಿ ಭಾಮಾ ಪೋಸ್ಟ್ ವೈರಲ್
ಬಣ್ಣದಲೋಕದಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಎಲ್ಲಾ ಚಿತ್ರರಂಗದಲ್ಲಿ ಇದು ಸರ್ವೇ ಸಾಧಾರಣ ವಿಚಾರ ಎನ್ನುವಂತಾಗಿಬಿಟ್ಟಿದೆ. ಖ್ಯಾತ ತಾರಾ ಜೋಡಿಗಳು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿ ಎನ್ನುವ ಮುಂದೆ ಏಗುವುದಕ್ಕೆ ಸಾಧ್ಯವಿಲ್ಲ ಎಂದಾಗ ಡಿವೋರ್ಸ್ ತೀರ್ಮಾನಕ್ಕೆ ಮುಂದಾಗುತ್ತಾರೆ. ಕೆಲವರು ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗುತ್ತದೆ. ಮತ್ತೆ ಕೆಲವರು ಆರೋಪ ಪ್ರತ್ಯಾರೋಪ ಮಾಡಿ ಸುದ್ದಿಯಾಗುತ್ತಿದ್ದಾರೆ.
ಮಲಯಾಳಂ ನಟಿ ಭಾಮಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 4 ವರ್ಷಗಳ ಹಿಂದೆ ಅರುಣ್ ಜಗದೀಶ್ ಎಂಬುವವರ ಕೈ ಹಿಡಿದಿದ್ದರು ಭಾಮಾ. ದಂಪತಿಗೆ ಗೌರಿ ಎಂಬ ಮಗಳು ಇದ್ದಾಳೆ. ಕೆಲ ದಿನಗಳಿಂದ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ದೂರಾಗುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಅದಕ್ಕೆಲ್ಲಾ ಇತ್ತೀಚೆಗೆ ಆಕೆ ಸ್ಪಷ್ಟನೆ ನೀಡಿದ್ದರು. ತಾವು ಇನ್ಮುಂದೆ ಸಿಂಗಲ್ ಮದರ್ ಎಂದು ಪೋಸ್ಟ್ ಮಾಡಿದ್ದರು.

"ನನಗೆ ನನ್ನ ಶಕ್ತಿ ಬಗ್ಗೆ ಗೊತ್ತೇ ಇರಲಿಲ್ಲ. ಆದರೆ ನಾನು ಸಿಂಗಲ್ ಮದರ್ ಆದ್ಮೇಲೆ ಆ ಶಕ್ತಿಯ ಅರಿವಾಗಿದೆ. ಈಗ ನಾನು ಮತ್ತು ನನ್ನಮಗಳು" ಎಂದು ಬರೆದು ಭಾಮಾ ಮಗಳ ಜೊತೆಗಿನ ಫೋಟೊ ಹಂಚಿಕೊಂಡಿದ್ದರು. ಆದರೆ ಅಧಿಕೃತವಾಗಿ ದಂಪತಿಗೆ ಡಿವೋರ್ಸ್ ಸಿಕ್ಕ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೆಲ್ಲದರ ನಡುವೆ ಹೆಣ್ಣು ಮಕ್ಕಳು ಯಾಕೆ ಮದುವೆ ಆಗಬೇಕು? ಎನ್ನುವ ಅರ್ಥದಲ್ಲಿ ಭಾಮಾ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ಮಲಯಾಳಂನದಲ್ಲಿ ಭಾಮಾ ಪೋಸ್ಟ್ ಮಾಡಿದ್ದಾರೆ. "ಹೆಣ್ಣು ಮಕ್ಕಳಿಗೆ ನಿಜಕ್ಕೂ ಮದುವೆ ಬೇಕಾ? ಬೇಡ, ನಿಜಕ್ಕೂ ಬೇಡ. ತಮ್ಮ ಹಣವನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಆಗಬೇಕಾ? ಖಂಡಿತ ಬೇಕಾಗಿಲ್ಲ. ಅವರು ನಿಮ್ಮನ್ನು ತೊರೆದರೆ ಕಥೆಯೇನು? ನಮ್ಮ ಹಣದಿಂದ ಅವರು ಸುಖವಾಗಿ ಬದುಕುತ್ತಾರೆ. ಆದರೆ ನಾವು ಮದುವೆ ಆಗದೇ ಒಂಟಿಯಾಗಿ ಬದುಕಬೇಕು"
"ನಿಮ್ಮ ಬಾಳಿಗೆ ಬರುವ ವ್ಯಕ್ತಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಇರುವುದಿಲ್ಲ. ನೀವು ನಿಮ್ಮ ಜೀವನ ರೂಪಿಸಿಕೊಳ್ಳುವ ವೇಳೆಗೆ ಎಲ್ಲಾ ಮುಗಿದು ಹೋಗಿರುತ್ತದೆ" ಎಂದು ಭಾಮಾ ಬರೆದುಕೊಂಡಿದ್ದಾರೆ. ಸದ್ಯ 'ಮೊದಲ ಸಲ' ನಟಿಯ ಪೋಸ್ಟ್ ವೈರಲ್ ಆಗುತ್ತಿದೆ.
ಭಾಮಾ ಇನ್ಸ್ಟಾಗ್ರಾಮ್ ಪೋಸ್ಟ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೆಣ್ಣು ಮಕ್ಕಳು ಮದುವೆ ಆಗಲೇಬಾರದಾ? ಎಂದು ಕೆಲವರು ಪ್ರಶ್ನಿಸಿದ್ದರು. ಬಳಿಕ ತಮ್ಮ ಪೋಸ್ಟ್ ಬಗ್ಗೆ ನಟಿ ಭಾಮಾ ಸ್ಪಷ್ಟನೆ ನೀಡಿದ್ದಾರೆ. "ನನ್ನ ಪೋಸ್ಟ್ನಲ್ಲಿ ನಾವು ಹೆಂಗಸರು ವರದಕ್ಷಿಣೆ ಕೊಟ್ಟು ಮದುವೆಯಾಗಬೇಕಾಗಿಲ್ಲ ಎಂದಿದ್ದೆ"
"ವರದಕ್ಷಿಣೆ ನೀಡಿ ಮದುವೆ ಆಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಬರೆದಿದ್ದೇನೆ. ಮದುವೆಯ ನಂತರ ಹಣಕ್ಕಾಗಿ ಮಹಿಳೆಯರ ಮೇಲೆ ಒತ್ತಡ ಹೇರಲಾಗುತ್ತದೆ, ಇದರಿಂದಾಗಿ ಅವರು ತಮ್ಮ ಸ್ವಂತ ಜೀವಕ್ಕೆ ಬೆದರಿಕೆಯೊಂದಿಗೆ ಮನೆಯಲ್ಲಿ ಭಯದಿಂದ ಬದುಕಬೇಕಾಗಿದೆ. ಅವಳೊಂದಿಗೆ ಮಕ್ಕಳು ಇದ್ದಾಗ ಹೆಣ್ಣಿನ ಮನಸ್ಥಿತಿ ಎಲ್ಲಕ್ಕಿಂತ ಮಿಗಿಲಾದದ್ದು. ಇದನ್ನೇ ನಾನು ಹೇಳಲು ಪ್ರಯತ್ನಿಸಿದ್ದು" ಎಂದಿದ್ದಾರೆ.

"ನಾನು ಹೆಣ್ಣು ಮಕ್ಕಳು ಮದುವೆ ಆಗಬಾರದು ಎಂದಿಲ್ಲ. ಮದುವೆಯ ನಂತರ ಒತ್ತಡವನ್ನು ನಿಭಾಯಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇವೆ. ಧನ್ಯವಾದ..." ಎಂದು ಭಾಮಾ ಬರೆದುಕೊಂಡಿದ್ದಾರೆ. ಸದ್ಯ ಭಾಮಾ ಪೋಸ್ಟ್ ನೋಡುತ್ತಿದ್ದರೆ ಆಕೆ ವರದಕ್ಷಿಣೆ ನೀಡಿ ಮದುವೆ ಆಗಿದ್ರಾ? ಕೌಟುಂಬಿಕ ದೌರ್ಜನ್ಯ, ಕಿರುಕುಳ ಎದುರಾಗಿತ್ತಾ? ಎನ್ನುವ ಚರ್ಚೆ ಶುರುವಾಗಿದೆ.
'ಮೊದಲ ಸಲ' ಬಳಿಕ ಕನ್ನಡದಲ್ಲಿ 'ಶೈಲೂ', 'ಒಂದು ಕ್ಷಣದಲ್ಲಿ', 'ಆಟೋರಾಜ', 'ಬರ್ಫಿ', 'ಅಪ್ಪಯ್ಯ', 'ಅಂಬರ', 'ಅರ್ಜುನ' ಹಾಗೂ 'ರಾಗಾ' ಸಿನಿಮಾಗಳಲ್ಲಿ ನಟಿಸಿದ್ದರು. ಮಲಯಾಳಂ ಕನ್ನಡ ಮಾತ್ರವಲ್ಲ ತೆಲುಗು, ತಮಿಳಿನ ಚಿತ್ರಗಳಿಗೂ ಮಲಯಾಳಿ ನಟಿ ಬಣ್ಣ ಹಚ್ಚಿದ್ದರು.


Click it and Unblock the Notifications











