'ಬೇಕೇ ಬೇಕು ಶೈಲಜಾ ಟೀಚರ್ ಬೇಕು' ಮಲಯಾಳಂ ನಟಿಯರ ಒತ್ತಾಯ
ಕೇರಳದಲ್ಲಿ ಈಗಷ್ಟೆ ವಿಧಾನಸಭೆ ಚುನಾವಣೆ ಮುಗಿದಿದ್ದು ಸಿಪಿಎಂ ಮುಂದಾಳತ್ವದ ಎಲ್ಡಿಎಫ್ ಮೈತ್ರಿಕೂಟ ಬಹುಮತದೊಂದಿಗೆ ಮತ್ತೊಂದು ಅವಧಿಗೆ ಅಧಿಕಾರ ಹಿಡಿದಿದೆ.
ಕಳೆದ ಬಾರಿ ಸಿಎಂ ಆಗಿದ್ದ ಪಿಣರಾಯಿ ವಿಜಯನ್ ಅವರೇ ಮತ್ತೊಮ್ಮೆ ಸಿಎಂ ಆಗಿ ಮುಂದುವರೆಯಲಿದ್ದಾರೆ. ಆದರೆ ಕಳೆದ ಬಾರಿಯ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸಬರಿಗೆ ಅವಕಾಶ ಕೊಡಲಾಗಿದೆ.
ಕಳೆದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ತಮ್ಮ ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕೆಕೆ ಶೈಲಜಾ ಟೀಚರ್ ಅವರನ್ನು ಈ ಬಾರಿ ಸಂಪುಟದಿಂದ ಕೈಬಿಡಲಾಗಿದೆ. ಎಲ್ಡಿಎಫ್ನ ಈ ನಿರ್ಧಾರಕ್ಕೆ ಕೇರಳ ಸೇರಿದಂತೆ ಹೊರರಾಜ್ಯಗಳಲ್ಲಿಯೂ ಅಸಮಾಧಾನ ವ್ಯಕ್ತವಾಗಿದೆ.
ಶೈಲಜಾ ಟೀಚರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಮಲಯಾಳಂ ಸಿನಿಮಾರಂಗದ ಹಲವು ನಟಿಯರು ಸಹ ದನಿಗೂಡಿಸಿದ್ದಾರೆ.
ಕನ್ನಡದ 'ಮಿಲನ', 'ಪೃಥ್ವಿ', 'ಮಳೆ ಬರಲಿ ಮಂಜೂ ಇರಲಿ, 'ಅಂಧರ್ ಬಾಹರ್' ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ಪಾರ್ವತಿ ಮೆನನ್ (ಪಾರ್ವತಿ ತಿರುವೋತು) ಅವರು ಶೈಲಜಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸರಣಿ ಟ್ವೀಟ್ ಮಾಡಿದ್ದಾರೆ.

ನಮ್ಮ ಕಾಲದ ಅತ್ಯುತ್ತಮ ನಾಯಕಿ ಶೈಲಜಾ ಟೀಚರ್: ಪಾರ್ವತಿ
'ನಮ್ಮ ಸಮಯದ ಅತ್ಯುತ್ತಮ ನಾಯಕಿ ಶೈಲಜಾ ಟೀಚರ್. ಕೇರಳವನ್ನು ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಹ ಅತ್ಯುತ್ತಮವಾಗಿ ಅವರು ಮುನ್ನಡೆಸಿದ್ದಾರೆ. ನಮ್ಮ ಶೈಲಜಾ ಟೀಚರ್ ಅನ್ನು ಮರಳಿ ಕರೆತನ್ನಿ' ಎಂದು ಟ್ವೀಟ್ ಮಾಡಿದ್ದಾರೆ ಪಾರ್ವತಿ ಮೆನನ್.

ಕೇರಳ ಜನರಿಗೆ ಶೈಲಜಾ ಟೀಚರ್ ಅವಶ್ಯಕತೆ ಇದೆ: ಪಾರ್ವತಿ
'ಶೈಲಜಾ ಅವರು ಕಣ್ಣೂರಿನ ಮತ್ತೂರು ವಿಧಾನಸಭೆ ಕ್ಷೇತ್ರದಿಂದ ಭಾರಿ ಬಹುಮತದೊಂದಿಗೆ ಗೆದ್ದಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೇ ಅತಿದೊಡ್ಡ ವಿಜಯ ಅವರದ್ದು. ಶೈಲಜಾ ಅವರು ಸಂಪುಟದಲ್ಲಿ ಇರಬೇಕಾದ ಅರ್ಹ ವ್ಯಕ್ತಿ. ಕೇರಳ ಜನರಿಗೆ ಶೈಲಜಾ ಅವರ ದಕ್ಷ ಆಡಳಿತದ ಅವಶ್ಯಕತೆ ಇದೆ' ಎಂದಿದ್ದಾರೆ ಪಾರ್ವತಿ.

ಸಿಎಂ ಅನ್ನು ಪ್ರಶ್ನೆ ಮಾಡಿರುವ ಮಾಳವಿಕಾ ಮೋಹನನ್
ತಮಿಳಿನ ರಜನೀಕಾಂತ್, ವಿಜಯ್ ಜೊತೆ ನಟಿಸಿರುವ ಮಾಳವಿಕಾ ಮೋಹನನ್ ಸಹ ಟ್ವೀಟ್ ಮಾಡಿದ್ದು, ' ರಾಜ್ಯ ಕಂಡ ಅತ್ಯುತ್ತಮ ಆರೋಗ್ಯ ಸಚಿವೆ ಶೈಲಜಾ ಅವರನ್ನು ಕೊರೊನಾದ ಭಯಂಕರ ಸನ್ನಿವೇಶದಲ್ಲಿ ಸಂಪುಟದಿಂದ ಹೊರಗೆ ಉಳಿಸುವ ಅಗತ್ಯ ಏನಿತ್ತು? ನಿಜವಾಗಿಯೂ ಏನು ನಡೆಯುತ್ತಿದೆ ಅಲ್ಲಿ (ಪಕ್ಷದಲ್ಲಿ) ಎಂದು ಪಿಣರಾಯಿ ವಿಜಯನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮಾಳವಿಕಾ ಮೋಹನನ್ ಕನ್ನಡದ 'ನಾನು ಮತ್ತು ವರಲಕ್ಷ್ಮಿ' ಸಿನಿಮಾದಲ್ಲಿಯೂ ನಟಿಸಿದ್ದಾರೆ.
Recommended Video

ಜನಪರ ನಿರ್ಧಾರವಲ್ಲ ಎಂದ ನಿರ್ದೇಶಕಿ ಅಂಜಲಿ
'ಬ್ಯಾಂಗಳೂರ್ ಡೇಸ್', 'ಕೇರಳ ಕೆಫೆ' ಅಂಥಹಾ ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಅಂಜಲಿ ಮೆನನ್ ಸಹ ಇದೇ ವಿಷಯವಾಗಿ ಪ್ರಶ್ನೆ ಮಾಡಿದ್ದು, 'ಜನರಿಗೆ ಭರವಸೆ, ಧೈರ್ಯ ಹೆಚ್ಚು ಅವಶ್ಯಕವಾಗಿರುವ ಸಮಯದಲ್ಲಿಯೇ ಶೈಲಜಾ ಟೀಚರ್ ಅಂಥಹಾ ಒಬ್ಬ ಅತ್ಯುತ್ತಮ ಆಡಳಿತಗಾರ್ತಿಯನ್ನು ಸಂಪುಟದಿಂದ ಹೊರಗೆ ಇಟ್ಟಿರುವುದು ಜನಪರವಾದ ತೀರ್ಮಾನವಲ್ಲ' ಎಂದಿದ್ದಾರೆ.


Click it and Unblock the Notifications











