"ರಜನಿಕಾಂತ್ ಜೊತೆ ನಟಿಸಿ ತಪ್ಪು ಮಾಡಿದೆ ಎನಿಸಿತು"; ಖ್ಯಾತ ನಟಿಯ ಶಾಕಿಂಗ್ ಕಾಮೆಂಟ್ಸ್
ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಲ್ಲಿ ನಟಿಸೋಕೆ ನಟ-ನಟಿಯರು ಕ್ಯೂ ನಿಲ್ಲುತ್ತಾರೆ. ತಲೈವಾ ಜೊತೆ ತೆರೆ ಹಂಚಿಕೊಳ್ಳುವ ಸಣ್ಣ ಅವಕಾಶ ಸಿಕ್ಕರೂ ಸಾಕು ಎಂದು ಕಾದು ಕೂರುತ್ತಾರೆ. ಆದರೆ ಕೆಲವರಿಗೆ ಸೂಪರ್ ಸ್ಟಾರ್ ಸಿನಿಮಾಗಳಿಂದ ಕಹಿ ಅನುಭವ ಆಗಿರುವುದು ಇದೆ.
ರಜನಿಕಾಂತ್ ಸಿನಿಮಾ ಎನ್ನುವ ಕಾರಣಕ್ಕೆ ಹಿಂದು ಮುಂದು ನೋಡದೇ ಒಪ್ಪಿಕೊಳ್ಳುವುದು, ಬಳಿಕ ಹೀಗಾಯ್ತಲ್ಲ ಎಂದು ಬೇಸರ ಪಡುವುದು ಇದೆ. ಮಾಲಿವುಡ್ ಬ್ಯೂಟಿ ಮಮತಾ ಮೋಹನ್ ದಾಸ್ಗೆ ಕೂಡ ಇಂತದ್ದೇ ಕಹಿ ಅನುಭವ ಆಗಿತ್ತಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಹೇಳಿಕೆ ವೈರಲ್ ಆಗುತ್ತಿದೆ.

ಮಮತಾ ಮೋಹನ್ ದಾಸ್ ಕನ್ನಡದ 'ಗೂಳಿ' ಚಿತ್ರದಲ್ಲಿ ನಟಿಸಿದ್ದರು. ಸುದೀಪ್ ಜೋಡಿಯಾಗಿ ಮಿಂಚಿದ್ದರು. ರಜನಿಕಾಂತ್ ನಟನೆಯ 'ಕುಚೇಲನ್' ಸಿನಿಮಾ ಚಿತ್ರೀಕರಣದಲ್ಲಿ ಆಕೆಗೆ ಇಂತಹ ಅನುಭವ ಆಗಿತ್ತಂತೆ. ಅದಕ್ಕೆ ಕಾರಣ ನಯನತಾರಾ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಪಿ. ವಾಸು ನಿರ್ದೇಶನದ 'ಕುಚೇಲನ್' ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕುವ ಅವಕಾಶ ನನಗೆ ಸಿಕ್ಕಿತ್ತು.
ಆ ಸಮಯದಲ್ಲಿ ನಾನು ದುಬೈನಲ್ಲಿ ಬೇರೆ ಸಿನಿಮಾ ಚಿತ್ರೀಕರಣದಲ್ಲಿದ್ದೆ. 2 ದಿನಗಳ ಚಿತ್ರೀಕರಣ ಎಂದು ಕರೆದರು. ನಾನು ರಜನಿಕಾಂತ್ ಸಿನಿಮಾ ಅವಕಾಶ ಮಿಸ್ ಮಾಡಿಕೊಳ್ಳಬಾರದು ಎಂದು ಆ ಚಿತ್ರತಂಡದ ಬಳಿ ಪರ್ಮಿಷನ್ ಪಡೆದುಕೊಂಡು ಚೆನ್ನೈಗೆ ಬಂದೆ. ಚಿತ್ರೀಕರಣಕ್ಕೆ ಕರೆದರು. ಹೋದರೆ ಸರಿಯಾಗಿ ಸ್ಪಂದಿಸಲಿಲ್ಲ. ಮೊದಲ ದಿನ ಸರಿಯಾಗಿ ಚಿತ್ರೀಕರಣ ಆಗಲಿಲ್ಲ.
ನನಗೆ ಯಾಕೆ ಎನ್ನುವುದು ಗೊತ್ತಾಗಲಿಲ್ಲ. ಸಣ್ಣ ಪುಟ್ಟ ಶಾಟ್ಸ್ ತೆಗೆದುಕೊಂಡರು. ಎರಡ್ಮೂರು ದಿನ ಇದೇ ರೀತಿ ಆಯಿತು. ಸಿನಿಮಾ ಬಿಡುಗಡೆ ಬಳಿಕ ನೋಡಿದ ನನ್ನ ಹಾಡು ಇರಲಿಲ್ಲ. ತೆಗೆದ ಸಣ್ಣ ಪುಟ್ಟ ಶಾಟ್ಸ್, ಫ್ರೇಮ್ ಕೂಡ ಕಾಣಲಿಲ್ಲ. ನನಗೆ ಬಹ ಬೇಸರವಾಯಿತು. 2 ವಾರದ ಬಳಿಕ ನನಗೆ ಅಸಲಿ ಸಂಗತಿ ತಿಳಿಯಿತು. ಆ ಚಿತ್ರದಲ್ಲಿ ನಾಯಕಿ(ನಯನತಾರ)ಗೆ ನಾನು ಡ್ಯಾನ್ಸ್ ಮಾಡುವುದು ಇಷ್ಟವಿರಲಿಲ್ಲ. ಅದಕ್ಕೆ ಅಷ್ಟೇಲ್ಲ ಗೊಂದಲವಾಯಿತು.
ಅಸಲಿಗೆ ಆಕೆ ಕೂಡ ಆ ಚಿತ್ರದ ನಾಯಕಿ ಏನಲ್ಲ. ಆ ಇಡೀ ಕಥೆ ಒಂದು ಸಿನಿಮಾ ಸುತ್ತಾ ಸುತ್ತುತ್ತದೆ. ಆಕೆ ಕೂಡ ಒಂದೆರಡು ಸನ್ನಿವೇಶ ಹಾಗೂ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ನಾನು ಆ ಹಾಡಿನಲ್ಲಿ ಹೆಜ್ಜೆ ಹಾಕಿದರೆ ಸಿಕ್ಕಿರುವ ಸಣ್ಣ ಸ್ಕ್ರೀನ್ ಸ್ಪೇಸ್ ಕೂಡ ಮಿಸ್ ಆಗುತ್ತದೆ ಎಂದು ಆಕೆ ಆ ರೀತಿ ಮಾಡಿದ್ದಳು. ನಾನು ಹೆಜ್ಜೆ ಹಾಕಿದರೆ ತಾನು ಚಿತ್ರೀಕರಣಕ್ಕೆ ಬರಲ್ಲ ಎಂದು ಪಟ್ಟು ಹಿಡಿದಿದ್ದಳಂತೆ. ಅದಕ್ಕೆ ಆ ದಿನ ಚಿತ್ರೀಕರಣ ಸರಿಯಾಗಿ ಮಾಡಲಿಲ್ಲ ಎಂದು ಹಿಂದಿನ ಸಂದರ್ಶನಗಳಲ್ಲಿ ಮಮತಾ ಹೇಳಿದ್ದಾರೆ.

ಸಿನಿಮಾ ಬಿಡುಗಡೆ ಆಗಿ 2 ವಾರಗಳ ಬಳಿಕ ರಜನಿಕಾಂತ್ ಆಫೀಸ್ ಇಂದ ಕರೆ ಬಂತು. ಖುದ್ದು ತಲೈವಾ ಮಾತನಾಡಿದ್ದರು. ನಮ್ಮ ಸಿನಿಮಾದಲ್ಲಿ ಕೆಲಸ ಮಾಡಲು ಒಪ್ಪಿದ್ದಕ್ಕೆ ಧನ್ಯವಾದ ಎಂದು ಕೇಳಿದರು ಅಷ್ಟೆ ಎಂದು ಮಮತಾ ನೆನಪಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ 'ಕುಚೇಲನ್' ಸಿನಿಮಾ ಬಗ್ಗೆ ಆಕೆ ಮಾತನಾಡಿದ್ದಾರೆ.
2008ರಲ್ಲಿ ತೆರೆಗೆ ಬಂದಿದ್ದ 'ಕುಚೇಲನ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ತೆಲುಗಿನಲ್ಲಿ 'ಕಥಾನಾಯಕುಡು' ಟೈಟಲ್ನಲ್ಲಿ ಸಿನಿಮಾ ಡಬ್ ಆಗಿ ತಕ್ಕಮಟ್ಟಿಗೆ ಗಮನ ಸೆಳೆದಿತ್ತು. ಪಶುಪತಿ, ಮೀನಾ ಕೂಡ ಚಿತ್ರದ ತಾರಾಗಣದಲ್ಲಿದ್ದರು. ಶ್ರೀಕೃಷ್ಣ ಹಾಗೂ ಆತನ ಬಾಲ್ಯದ ಗೆಳೆಯ ಕುಚೇಲನ ಕಥೆಯಿಂದ ಪ್ರೇರಣೆಗೊಂಡು ಈ ಸಿನಿಮಾ ಕಟ್ಟಿಕೊಡಲಾಗಿತ್ತು.


Click it and Unblock the Notifications










