ಊಟ ನಿದ್ದೆ ಬಿಟ್ಟು ಕುಡಿತ್ತಿದ್ದೆ; ನನ್ನ ಈ ಕುಡಿತದ ಚಟಕ್ಕೆ ಮಾಜಿ ಪತಿ ಕಾರಣ- ಊವರ್ಶಿ
ಬಹುಭಾಷಾ ನಟಿ ಊರ್ವಶಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 25 ವರ್ಷಗಳ ಹಿಂದೆ ನಟ ಮನೋಜ್ ಕೆ. ಜಯನ್ ಅವರನ್ನು ಮದುವೆಯಾಗಿದ್ದ ಊರ್ವಶಿ 8 ಬಳಿಕ ವಿಚ್ಛೇದನ ಪಡೆದಿದ್ದರು. ದಂಪತಿಗೆ ಒಬ್ಬ ಮಗಳು ಹುಟ್ಟಿದ್ದಳು. ಬಳಿಕ 2013ರಲ್ಲಿ ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಎಂಬುವವರನ್ನು 2ನೇ ಮದುವೆ ಆಗಿದ್ದಾರೆ. ಒಬ್ಬ ಮಗ ಕೂಡ ಇದ್ದಾನೆ.
ತಮ್ಮ ಅದ್ಭುತ ಅಭಿನಯದಿಂದ ಊರ್ವಶಿ ಮೋಡಿ ಮಾಡುತ್ತಿದ್ದಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಮೆರೆದ ಆಕೆ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಹಾಸ್ಯ ಹಾಗೂ ಭಾವನಾತ್ಮಕ ಸನ್ನಿವೇಶಗಳಲ್ಲಿ ಅದ್ಭುತವಾಗಿ ನಟಿಸುವ ಊರ್ವಶಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದಾರೆ. ತಮ್ಮ ನೇರಾನೇರ ಮಾತುಗಳಿಂದ ಕೂಡ ಆಕೆ ಗಮನ ಸೆಳೆಯುತ್ತಾರೆ. ರಂಜಿನಿ ಹರಿದಾಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಜೀವನದ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ. ತಮ್ಮ ಕುಡಿತದ ಚಟದ ಬಗ್ಗೆ ಕೂಡ ಮಾತನಾಡಿದ್ದಾರೆ.

ತಮ್ಮ ಮೊದಲ ಮದುವೆ ಬಗ್ಗೆ ನಟಿ ಊರ್ವಶಿ ಮಾತನಾಡಿ ತಾವು ಯಾಕೆ ಮದ್ಯದ ಚಟಕ್ಕೆ ಬಲಿಯಾಗಿದ್ದು ಎಂದು ಹೇಳಿದ್ದಾರೆ. "ಮದುವೆಯಾಗಿ ಅವರ ಮನೆಗೆ ಹೋದಾಗ ಅವರ ಜೀವನಶೈಲಿ ನೋಡಿ ಅಚ್ಚರಿ ಆಗಿತ್ತು. ಎಲ್ಲರೂ ಬಹಳ ಆಧುನಿಕ ಜೀವನಶೈಲಿ ಅಳವಡಿಸಿಕೊಂಡಿದ್ದರು. ಎಲ್ಲರೂ ಒಟ್ಟಿಗೆ ಕೂತು ಡ್ರಿಂಕ್ಸ್ ಮಾಡುತ್ತಿದ್ದರು. ತಾಯಿ, ಮಕ್ಕಳು ಎಲ್ಲರೂ ಕುಡಿಯುತ್ತಿದ್ದರು. ಅವರ ನಡುವೆ ನಾನು ಅಡ್ಜೆಸ್ಟ್ ಆಗುತ್ತೀನಾ? ಎನ್ನುವ ಅನುಮಾನ ಮೂಡಿತ್ತು" ಎಂದು ಊರ್ವಶಿ ನೆನಪಿಸಿಕೊಂಡಿದ್ದಾರೆ.
ನಾನೇ ಮದುವೆ ನಿರ್ಧಾರ ತೆಗೆದುಕೊಂಡಿದ್ದೆ. ಬಹಳ ಹಠಮಾರಿಯಾಗಿದ್ದ ಕಾರಣ ನನ್ನ ನಿರ್ಧಾರ ಸರಿಯಾಗಿದೆ ಎಂದು ಸಾಬೀತು ಮಾಡಲು ಹೊರಟಿದ್ದೆ ಎಂದಿದ್ದಾರೆ. "ಕಲಾ ಆಂಟಿ ಮಾತ್ರ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಆಕೆ ನನ್ನನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿತ್ತು. ನಾನು ಆ ಹೊಸ ಮನೆ ವಾತಾವರಣಕ್ಕೆ ಹೊಂದಿಕೊಳ್ಳಲು ನನ್ನ ಜೀವನಶೈಲಿ ಬದಲಿಸಿಕೊಂಡೆ. ಶೂಟಿಂಗ್ ಹೋಗಿ ಬಂದು ಕುಡಿಯಲು ಆರಂಭಿಸಿದೆ. ನನ್ನನ್ನು ನಾನು ನಾಶಪಡಿಸಿಕೊಳ್ಳುತ್ತಿದ್ದೀನಿ ಎನ್ನುವುದು ತಡವಾಗಿ ಗೊತ್ತಾಯಿತು" ಎಂದೂ ಊವರ್ಶಿ ನೆನಪು ಮಾಡಿಕೊಂಡಿದ್ದಾರೆ.

ಅಷ್ಟರಲ್ಲಾಗಲೇ ಮನೆಯ ಜವಾಬ್ದಾರಿ ನನ್ನ ಮೇಲಿತ್ತು. ಹಾಗಾಗಿ ಇಷ್ಟವಿಲ್ಲದ ಕೆಲಸಗಳನ್ನು ಮಾಡುವಂತಾಯಿತು. "ನನ್ನ ಮಾತು ಯಾರು ಕೇಳುತ್ತಿರಲಿಲ್ಲ. ಜಗಳವಾಗುತ್ತಿತ್ತು. ಕೋಪದಲ್ಲಿ ಮತ್ತಷ್ಟು ಜಾಸ್ತಿ ಕುಡಿತ್ತಿದ್ದೆ. ಊಟ, ನಿದ್ರೆ ಬಿಟ್ಟು ಕುಡಿತ್ತಿದ್ದೆ. ನನ್ನ ಕೈಯಾರ ಆರೋಗ್ಯ ಹಾಳು ಮಾಡಿಕೊಂಡೆ. ನನ್ನ ಸ್ನೇಹಿತರು, ಆತ್ಮೀಯ ಸಿಬ್ಬಂದಿ ಸಹಕಾರದಿಂದ ಈ ಚಟ ಬಿಟ್ಟು ಹೊರಬಂದೆ" ಎಂದು ಊವರ್ಶಿ ವಿವರಿಸಿದ್ದಾರೆ.
80ರ ದಶಕದ ಆರಂಭದಲ್ಲೇ ನಾಯಕಿಯಾಗಿ ಊರ್ವಶಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 'ಶ್ರಾವಣ ಬಂತು' ಚಿತ್ರದಲ್ಲಿ ಡಾ. ರಾಜ್ಕುಮಾರ್ ಜೋಡಿಯಾಗಿ ಊರ್ವಶಿ ನಟಿಸಿದ್ದರು. ವಿಷ್ಣುವರ್ಧನ್, ಅಂಬರೀಷ್ ಜೊತೆ ಕೂಡ ಊರ್ವಶಿ ನಾಯಕಿಯಾಗಿ ಮಿಂಚಿದ್ದರು. ಕೇರಳದ ಕೊಲ್ಲಂನಲ್ಲಿ ಹುಟ್ಟಿ ಬೆಳೆದ ಕವಿತಾ ಮನೋರಂಜಿನಿ ಚಿತ್ರರಂಗದಲ್ಲಿ ಊವರ್ಶಿ ಎಂದು ಹೆಸರು ಬದಲಿಸಿಕೊಂಡು ಗೆದ್ದರು. ಮಲಯಾಳಂ ಭಾಷೆಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.
'ರಾಮ ಶ್ಯಾಮ ಭಾಮ', 'ಒಗ್ಗರಣೆ', 'ಬ್ರಹ್ಮ', 'ಶಿವಲಿಂಗ', 'ಜಗ್ಗುದಾದ', 'ಅರ್ಜುನ್' ಸಿನಿಮಾಗಳಲ್ಲಿ ಊವರ್ಶಿ ನಟಿಸಿ ಮೋಡಿ ಮಾಡಿದ್ದಾರೆ. 'ರಾಮ ಶ್ಯಾಮ ಭಾಮ' ಚಿತ್ರದ ಹಾಸ್ಯಪಾತ್ರ ಮರೆಯೋಕೆ ಸಾಧ್ಯವಿಲ್ಲ. ಆಕೆ ನಟಿಸುತ್ತಿರುವ ಕೆಲ ಕನ್ನಡ ಸಿನಿಮಾಗಳು ಅರ್ಧಕ್ಕೆ ನಿಂತಿವೆ.


Click it and Unblock the Notifications











