'ಮಂಜುಮೇಲ್ ಬಾಯ್ಸ್' ವಿರುದ್ದ ಕಾನೂನು ಸಮರದಲ್ಲಿ ಇಳಯರಾಜ ಗೆದ್ರಾ? ಎಷ್ಟು ಕೋಟಿಗೆ ರಾಜಿ ಆಯ್ತು?
ಈ ವರ್ಷ 'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಸಣ್ಣ ಬಜೆಟ್ ಸಿನಿಮಾ ಪರಭಾಷಿಕರನ್ನು ಆಕರ್ಷಿಸಿತ್ತು. ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಿ ಚಿತ್ರತಂಡ ಗೆದ್ದಿತ್ತು. 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಸಿನಿಮಾ ಸಕ್ಸಸ್ ಬೆನ್ನಲ್ಲೇ ಸಂಕಷ್ಟವೊಂದು ಎದುರಾಗಿತ್ತು. ಚಿತ್ರತಂಡದ ವಿರುದ್ಧ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಕಾಪಿರೈಟ್ ಕೇಸ್ ದಾಖಲಿಸಿದ್ದರು. ಕಮಲ್ ಹಾಸನ್ ನಟನೆಯ 'ಗುಣ' ಚಿತ್ರದ 'ಕಣ್ಮಣಿ ಅನ್ಬೋದು ಕಾದಲನ್' ಎನ್ನುವ ಹಾಡನ್ನು ತಮ್ಮ ಅನುಮತಿ ಇಲ್ಲದೇ ಬಳಸಿಕೊಂಡಿದ್ದಕ್ಕೆ ಚಕಾರ ಎತ್ತಿದ್ದಾರೆ. ಪರಿಹಾರಕ್ಕಾಗಿ ಒತ್ತಾಯಿಸಿ ಕಾನೂನು ನೋಟಿಸ್ ನೀಡಿದ್ದಾರೆ.

ಸದ್ಯ ಈ ಈ ಕಾಪಿರೈಟ್ ಕೇಸ್ ಸುಖಾಂತ್ಯ ಕಂಡಿದೆ. ಇಳಯರಾಜ ಗೆದ್ದಿದ್ದು ಪರಿಹಾರ ನೀಡಿ 'ಮಂಜುಮ್ಮೇಲ್ ಬಾಯ್ಸ್' ಚಿತ್ರತಂಡ ನಿಟ್ಟುಸಿರುಬಿಟ್ಟಿದೆ. ಚಿದಂಬರಂ ನಿರ್ದೇಶನದ 'ಮಂಜುಮೇಲ್ ಬಾಯ್ಸ್' ಸಿನಿಮಾ ಫೆಬ್ರವರಿ 22ಕ್ಕೆ ತೆರೆಗಪ್ಪಳಿಸಿತ್ತು. ಬಾಲು ವರ್ಗೀಸ್, ಸೌಬಿನ್ ಶಾಹಿರ್, ಶ್ರೀನಾಥ್ ಬಾಸಿ ಚಿತ್ರದ ತಾರಾಗಣದಲ್ಲಿದ್ದರು. ಅಂದಾಜು 20 ಕೋಟಿ ರೂ. ಬಜೆಟ್ ಸಿನಿಮಾ 10 ಪಟ್ಟು ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿತ್ತು.
5 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬಂದಿತ್ತು. ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಕೇರಳದ ಕೆಲ ಸ್ನೇಹಿತರು ಕೊಡೆಕೆನಾಲ್ ಪ್ರವಾಸಕ್ಕೆ ತೆರಳುತ್ತಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಗುಣ ಕೇವ್ಸ್ ನೋಡಲು ಹೋದಾಗ ತಂಡದ ಸುಭಾಷ್ ಕಂದಕದಲ್ಲಿ ಆಕಸ್ಮಿಕವಾಗಿ ಬಿದ್ದು ಬಿಡುತ್ತಾನೆ. ಅಲ್ಲಿಂದ ಸಿನಿಮಾ ಕಥೆಗೆ ಟ್ವಿಸ್ಟ್ ಸಿಗುತ್ತದೆ. ಆತ ಆ ಕಂದಕದಿಂದ ಬದುಕಿ ಹೊರ ಬರುತ್ತಾನಾ ಎನ್ನುವದೇ ಸಿನಿಮಾ ಕಥೆ.
ಕೇಳೋಕೆ ಒನ್ಲೈನ್ ಸ್ಟೋರಿ ಸಿಂಪಲ್ ಎನಿಸಿದರೂ ಅದನ್ನು ಬಹಳ ಸೊಗಸಾಗಿ ತೆರೆಗೆ ತರಲಾಗಿತ್ತು. ಎಮೋಷನಲ್ ಸನ್ನಿವೇಶಗಳು ಚೆನ್ನಾಗಿ ವರ್ಕ್ ಆಗಿತ್ತು. ನೋಡ ನೋಡುತ್ತಲೇ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸ್ಟಾರ್ ನಟರು ಯಾರು ಇಲ್ಲದಿದ್ದರೂ ಸಿನಿಮಾ 200 ಕೋಟಿ ರೂ. ಕ್ಲಬ್ ಸೇರಿತ್ತು.

ಶೀಜು ಖಾಲಿದ್ ಛಾಯಾಗ್ರಹಣ, ಸುಸಿನ್ ಶ್ಯಾಮ್ ಸಂಗೀತ 'ಮಂಜುಮ್ಮೇಲ್ ಬಾಯ್ಸ್' ಚಿತ್ರಕ್ಕಿದೆ. ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಸೌಬಿನ್ ಶಾಹಿರ್, ಬಾಬು ಶಾಹಿರ್, ಶಾನ್ ಆಂಟೋನಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಾಪಿರೈಟ್ ವಿವಾದ ಸಂಬಂಧ ಲೀಗಲ್ ನೋಟಿಸ್ ಬಂದ ನಂತರ ಮಂಜುಮ್ಮೆಲ್ ಬಾಯ್ಸ್ ನಿರ್ಮಾಪಕರು ಇಳಯರಾಜ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ. ಚಿತ್ರದ ಯಶಸ್ಸನ್ನು ಪರಿಗಣಿಸಿ ಇಳಯರಾಜ ಅವರು 2 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದರು.
ನಿರ್ಮಾಪಕರು ಅಷ್ಟು ದೊಡ್ಡ ಮೊತ್ತ ಕೊಡಲು ಹಿಂದೇಟು ಹಾಕಿದ್ದಾರೆ. ಚೌಕಾಸಿ ಮಾಡಿ ಅಂತಿಮವಾಗಿ 60 ಲಕ್ಷಕ್ಕೆ ಒಪ್ಪಂದವನ್ನು ಮುಕ್ತಾಯಗೊಳಿಸಲಾಯಿತು. 'ಮಂಜುಮ್ಮೆಲ್ ಬಾಯ್' ಚಿತ್ರದ ನಿರ್ಮಾಪಕರು ಹಣ ಪಾವತಿಸಿ ಕಾನೂನು ಸಮರಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗ್ತಿದೆ. ಆದರೆ ಇದನ್ನು ಇಳಯರಾಜ ಪರ ವಕೀಲ ನಿರಾಕರಿಸುತ್ತಿದ್ದಾರೆ. ಇನ್ನು ಯಾವುದೇ ಹಣ ಸಂದಾಯವಾಗಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.
ಪ್ರತಿಭಾವಂತ ತಂಡವನ್ನು ಪ್ರೋತ್ಸಾಹಿಸುವ ಬದಲು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಕ್ಕಾಗಿ ಇಳಯರಾಜ ಕೆಟ್ಟದಾಗಿ ಟ್ರೋಲ್ ಆಗಿದ್ದರು. ಅಂತಿಮವಾಗಿ ಮಂಜುಮ್ಮೆಲ್ ಬಾಯ್ಸ್ ತಂಡದ ವಿರುದ್ಧ ಇಳಯರಾಜ ಗೆಲುವು ಸಾಧಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ. ನಿರ್ಮಾಪಕರು ಕೂಡ ಕಾನೂನಿನ ಹೋರಾಟಕ್ಕೆ ಇಳಿಯುವ ಬದಲು ಪರಿಹಾರ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡದಲ್ಲಿ ಇತ್ತೀಚೆಗೆ 'ಬ್ಯಾಚುಲರ್ ಪಾರ್ಟಿ' ಚಿತ್ರತಂಡಕ್ಕೂ ಇಂತದ್ದೇ ಸಮಸ್ಯೆ ಎದುರಾಗಿದೆ. ಚಿತ್ರದ ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗೆ ಪ್ರಕರಣ ಸಂಬಂಧ ಯಶವಂತಪುರ ಠಾಣೆಗೆ ರಕ್ಷಿತ್ ಶೆಟ್ಟಿ ಭೇಟಿ ನೀಡಿ ತಮ್ಮ ವಿವರಣೆ ನೀಡಿದ್ದಾರೆ. ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.


Click it and Unblock the Notifications











