ಮಮ್ಮುಟ್ಟಿ ಸುತ್ತ ಮುತ್ತ ವಿವಾದದ ಹುತ್ತ ; ಸೂಪರ್ ಸ್ಟಾರ್ ಬೆಂಬಲಕ್ಕೆ ಬಂದ ಎಡಪಂಥೀಯರು...!
2024ರ ಆರಂಭದ ನಾಲ್ಕೇ ನಾಲ್ಕು ತಿಂಗಳಿನಲ್ಲಿ ಎರಡೇ ಎರಡು ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗದ ಖಜಾನೆಗೆ ನೂರು ಪ್ಲಸ್ ಕೋಟಿ ಹಣ ತಂದ ಹೆಗ್ಗಳಿಕೆ ಮಮ್ಮುಟ್ಟಿ ಅವರದ್ದು. 72ರ ಪ್ರಾಯದಲ್ಲಿಯೂ ಕೂಡ ಒಂದಾದ ಮೇಲೊಂದು ಚಿತ್ರಗಳನ್ನ ಮಾಡ್ತಿರುವ ಮಮ್ಮುಟ್ಟಿ ಮೇಲೀಗ ಸೈಬರ್ ದಾಳಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಮಮ್ಮುಟ್ಟಿ ಅವರನ್ನ ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಎರಡು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಪುಳು ಸಿನಿಮಾ.
ಹೌದು, 2022ರಲ್ಲಿ ಬಿಡುಗಡೆಯಾಗಿದ್ದ ಪುಳು ಸಿನಿಮಾ ಮಮ್ಮುಟ್ಟಿಗೆ ಈಗ ಬಿಸಿ ತುಪ್ಪವಾಗಿದೆ. ಈ ಸಿನಿಮಾದಲ್ಲಿ ಬ್ರಾಹ್ಮಣ ವಿರೋಧಿ ಅಂಶಗಳು ಇವೆ ಎಂಬ ಆರೋಪ ಹೊರಿಸಲಾಗಿದ್ದು,ಸೋಶಿಯಲ್ ಮೀಡಿಯಾದಲ್ಲಿ ಮಮ್ಮುಟ್ಟಿ ವಿರುದ್ಧ ಕೆಲವು ಬಲಪಂಥೀಯರು ಸಮರ ಸಾರಿದ್ದಾರೆ.ಮಮ್ಮುಟ್ಟಿ ಅವರನ್ನ ನಿಂದಿಸುತ್ತಿರುವುದಕ್ಕೆ ಕೆರಳಿರುವ ಎಡಪಂಥೀಯರು ಬಲಪಂಥೀಯರ ವಿರುದ್ಧ ಹರಿ ಹಾಯುತ್ತಿದ್ದಾರೆ.

ಇನ್ನೂ ನಿಮಗೆ ಗೊತ್ತು.. ಸದ್ಯಕ್ಕೆ ಲೋಕಸಭಾ ಚುನಾವಣೆ ಕಾವೇರಿದೆ. ಪರ-ವಿರೋಧ.. ವಾದ- ವಿವಾದದ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಇನ್ನೂ ಕಮಲದ ಕಣ್ಣು ಈ ಬಾರಿ ಕೇರಳದ ಮೇಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಅನೇಕರಲ್ಲಿ ಕೇರಳದಲ್ಲಿ ಮತ ಪ್ರಮಾಣ ಈ ಭಾರೀ ಏರಿಕೆಯಾಗಲಿದೆ ಎಂಬ ವಿಶ್ವಾಸ ಇದೆ.
ಹೀಗಾಗಿಯೇ ಈ ವಿವಾದಕ್ಕೆ ರಾಜಕೀಯದ ಬಣ್ಣವನ್ನ ಹಚ್ಚಿರುವ ಅನೇಕರು ಚುನಾವಣೆಯ ಸಂದರ್ಭದಲ್ಲಿ ಜಾತಿ-ಧರ್ಮದ ವಿಚಾರ ಇಟ್ಟುಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ನಡೆಯುತ್ತಿದೆ. ಸದ್ಯ 'ಪುಳು' ಸಿನಿಮಾದ ಕಾಂಟ್ರವರ್ಸಿ ಹಿಂದೆ ಕೂಡ ಇದೇ ಉದ್ದೇಶ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ

ಅಂದ್ಹಾಗೇ ಮಲಯಾಳಂನ ಮಹಿಳಾ ನಿರ್ದೇಶಕಿಯ ಪತಿ ಇತ್ತೀಚೆಗೆ ಸಂದರ್ಶನವೊಂದನ್ನ ನೀಡಿದ್ದರು. ಆ ಸಂದರ್ಶನದಲ್ಲಿ ಮಮ್ಮುಟ್ಟಿಯ ಪುಳು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಆ ವ್ಯಕ್ತಿ ಚಿತ್ರದಲ್ಲಿ ಒಂದು ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಮಮ್ಮುಟ್ಟಿಯ ಸುತ್ತ ಮುತ್ತ ವಿವಾದದ ಕಿಡಿ ಹೊತ್ತಿಕೊಂಡಿದ್ದು ಇಲ್ಲಿಂದಲೇ.
ಸದ್ಯಕ್ಕೆ ಕೇರಳ ರಾಜ್ಯ ಸಚಿವರಾದ ವಿ ಶಿವನ್ಕುಟ್ಟಿ ಮತ್ತು ಕೆ ರಾಜನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿ ಅನೇಕ ರಾಜಕೀಯ ಗಣ್ಯರು, ಮಮ್ಮುಟ್ಟಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ಸಿಪಿಐ ನಾಯಕ ಮತ್ತು ಕಂದಾಯ ಸಚಿವ ಕೆ ರಾಜನ್ ಮಮ್ಮುಟ್ಟಿಯನ್ನು "ಕೇರಳ ಮತ್ತು ಮಲಯಾಳಿಗಳ ಹೆಮ್ಮೆ" ಎಂದು ಬಣ್ಣಿಸಿದ್ದಾರೆ.

ಇಂತಹ ಪ್ರಚಾರಗಳ ಹಿಂದೆ "ಸಂಘ ಪರಿವಾರದ ರಾಜಕೀಯ" ಅಡಗಿದೆ ಎಂದು ಆರೋಪಿಸಿರುವ ಸಚಿವರು, ಇಂತಹ ಪ್ರಚಾರಗಳು ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶವನ್ನು ತರುವುದಿಲ್ಲ ಎಂದು ಹೇಳಿದ್ದಾರೆ. ಮಮ್ಮುಟ್ಟಿ ಅವರನ್ನು ಮೊಹಮ್ಮದ್ ಕುಟ್ಟಿ ಎಂದು ಕರೆಯುವುದರಿಂದ ಚುನಾವಣೆ ಫಲಿತಾಂಶ ಬದಲಾಗಲ್ಲ, ಇದು ಕೇರಳ ಎಂದು ಕಿಡಿ ಕಾರಿದ್ದಾರೆ ಕೆ ರಾಜನ್.


Click it and Unblock the Notifications











