8 ವರ್ಷ, ಆರೋಪ-ಪ್ರತ್ಯಾರೋಪ ; ಖ್ಯಾತ ನಟಿಯ ಮೇಲೆ ಲೈಂ*ಗಿಕ ದೌರ್ಜನ್ಯ - ಮಲಯಾಳಂ ನಟ ದಿಲೀಪ್ ಖುಲಾಸೆ
ಮೊದಲಿಂದ ಚಿತ್ರಗಳ ಕಥೆಯ ವಿಚಾರಕ್ಕೆ ಸಂಬಂಧಿಸಿದಂತೆ ಸದ್ದು ಮಾಡಿದ ಉದ್ಯಮ ಮಲಯಾಳಂ ಚಿತ್ರರಂಗ. ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದ ಮಲಯಾಳಂ ಚಿತ್ರರಂಗ ಪ್ರಯತ್ನ ಮತ್ತು ಪ್ರಯೋಗಕ್ಕೆ ಕೂಡ ಹೆಸರುವಾಸಿ. ಇಂಥಾ ಮಲಯಾಳಂ ಚಿತ್ರರಂಗ ಫೆಬ್ರವರಿ 19-2017ರಲ್ಲಿ ಬೆಚ್ಚಿ ಬಿದ್ದಿತ್ತು. ಭಾರತದ ಖ್ಯಾತ ನಾಯಕಿಯನ್ನು ಅಪಹರಿಸಿ ಚಲಿಸುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು.
ಕೇರಳದ ತ್ರಿಶೂರ್ನಲ್ಲಿ ಚಿತ್ರೀಕರಣ ಮುಗಿಸಿಕೊಂಡು, ನೆಮ್ಮದಿಯಿಂದ ಬರುತ್ತಿದ್ದ ನಾಯಕಿಯನ್ನು ಅಪಹರಿಸಿದ್ದ ಕಾ*ಮಾಂಧರ ಗುಂಪು ನಟಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿತ್ತು. ತಮ್ಮ ಕೌರ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿತ್ತು.

ಖ್ಯಾತ ನಟಿಯ ಮೇಲಿನ ಈ ದೌರ್ಜನ್ಯದ ಸುದ್ದಿ, ಇಡೀ ಭಾರತದಲ್ಲಿಯೇ ಚರ್ಚೆಗೀಡಾಗಿತ್ತು. ಆಕ್ರೋಶ ಕೂಡ ಭುಗಿಲೆದ್ದಿತ್ತು. ನಟಿಯ ಮೇಲಿನ ದೌರ್ಜನ್ಯದ ಈ ಪ್ರಕರಣದ ತನಿಖೆಯನ್ನು ಮಾಡಿದ ಪೊಲೀಸರು, ವಾಹನದ ಚಾಲಕ ಮಾರ್ಟಿನ್ ಆಂಟೋನಿ ಮತ್ತು ಪ್ರಮುಖ ಆರೋಪಿ ಎಂದು ಗುರುತಿಸಲಾದ ಸುನಿಲ್ ಎನ್ಎಸ್ ಅಲಿಯಾಸ್ ಪಲ್ಸರ್ ಸುನಿ ಅವರನ್ನ ಬಂಧಿಸಿದ್ದರು. ಇವರ ಜೊತೆ ಇನ್ನೂ ನಾಲ್ವರವನ್ನು ಅರೆಸ್ಟ್ ಮಾಡಿದ್ದರು.
ಆ ನಂತರ ಈ ಪ್ರಕರಣ ರೋಚಕ ತಿರುವು ಪಡೆಯಿತು. ಇಡೀ ಪ್ರಕರಣದ ಹಿಂದೆ ಮಲಯಾಳಂನ ಬಹುದೊಡ್ಡ ಸ್ಟಾರ್ ಆದ ದಿಲೀಪ್ ಅವರ ಕೈವಾಡ ಇದೆ ಎನ್ನುವ ವಿಚಾರ ಹೊರ ಬಿದ್ದಿತ್ತು. ಮಲಯಾಳಂ ಕಲಾವಿದರ ಸಂಘ ಕೂಡ ದಿಲೀಪ್ ಅವರನ್ನು ತಮ್ಮ ಸಂಘದಿಂದ ಹೊರ ದಬ್ಬಿತ್ತು. ಜುಲೈ 2017ರಲ್ಲಿ ದಿಲೀಪ್ ಅವರನ್ನು ಬಂಧಿಸಲಾಗಿತ್ತು. ಒಂದಲ್ಲ.. ಎರಡಲ್ಲ.. 83ಕ್ಕೂ ಅಧಿಕ ದಿನ ದಿಲೀಪ್ ಕಂಬಿ ಹಿಂದೆ ಕಾಲ ಕಳೆದರು.
ಇದೇ ಸಮಯದಲ್ಲಿ ಕಾವ್ಯ ಮಾಧವನ್ (ಪ್ರಸ್ತುತ ಪತ್ನಿ) ಕುರಿತು ತಮಗೆ ಇದ್ದ ಸಂಬಂಧದ ಕುರಿತು ಮಂಜು ವಾರಿಯರ್ಗೆ (ಮಾಜಿ ಪತ್ನಿ) ಈ ಖ್ಯಾತ ನಟಿ ಚಾಡಿ ಹೇಳಿದ್ದೇ ಇದೆಲ್ಲದಕ್ಕೆ ಕಾರಣ ಎನ್ನುವ ವಿಚಾರ ಕೂಡ ಹೊರ ಬಂದಿತ್ತು. ಖುದ್ದು ಸಂತ್ರಸ್ತ ನಟಿಯೇ ಈ ವಿಚಾರವನ್ನು ನ್ಯಾಯಾಲಯದಲ್ಲಿ ಹೇಳಿದ್ದರು.
ಹೀಗೆ ಕಾಲ ಕಾಲಕ್ಕೆ ತಿರುವು ಪಡೆಯುತ್ತಾ ಬಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 261 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. 1700ಕ್ಕೂ ಅಧಿಕ ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿದೆ. ಈಗ 8 ವರ್ಷಗಳ ನಂತರ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ತೀರ್ಪು ನೀಡಿದ್ದು ಮಲಯಾಳಂನ ಸ್ಟಾರ್ ಮತ್ತು ಪ್ರಕರಣದ 8ನೇ ಆರೋಪಿ ದಿಲೀಪ್ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ. ದಿಲೀಪ್ ವಿರುದ್ಧ ಇದ್ದ ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದ ಆರೋಪಗಳನ್ನು ನ್ಯಾಯಾಧೀಶರು ತಳ್ಳಿ ಹಾಕಿದ್ದಾರೆ.

ದಿಲೀಪ್ ಜೊತೆ ಪ್ರಕರಣದ 7ನೇ ಆರೋಪಿ ಚಾರ್ಲಿ ಮತ್ತು 10ನೇ ಆರೋಪಿ ಶರತ್ ಅವರನ್ನು ಕೂಡ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟನಿ, ಮಣಿಕಂಠನ್, ವಿಜೀಶ್ ವಿ.ಪಿ, ಸಲೀಂ ಅಲಿಯಾಸ್ ವಡಿವಾಳ್ ಸಲೀಂ, ಪ್ರದೀಪ್, ಅವರನ್ನು ಈ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸದ್ಯ ಖ್ಯಾತ ನಟಿಯ ಮೇಲಿನ ಲೈಂ*ಗಿಕ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್ ಖುಲಾಸೆಯಾಗಿದ್ದು, ಇಂದು (ಡಿಸೆಂಬರ್ 8 ) ಪ್ರಕಟವಾದ ಈ ತೀರ್ಪಿನ ಕುರಿತು ದಿಲೀಪ್ ಪ್ರತಿಕ್ರಿಯೆಯನ್ನು ನೀಡಬೇಕಿದೆ. ದೌರ್ಜನ್ಯಕ್ಕೊಳಗಾದ ಸಂತ್ರಸ್ತ ನಟಿ ಕೂಡ ಈ ತೀರ್ಪಿನ ಕುರಿತು ಮೌನ ಮುರಿಯಬೇಕಿದೆ.


Click it and Unblock the Notifications











