'ದೃಶ್ಯಂ'- 3 ಕ್ರೇಜಿ ನ್ಯೂಸ್: ಜಾರ್ಜ್ ಕುಟ್ಟಿ - ವಿಜಯ್ ಸಲಗಾಂವ್ಕರ್ ಕೈಗೆ ಒಟ್ಟಿಗೆ ಕೋಳ?
10 ವರ್ಷಗಳ ಹಿಂದೆ ಮಾಲಿವುಡ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಸಿನಿಮಾ 'ದೃಶ್ಯಂ'. ಮುಂದೆ ಈ ಸಿನಿಮಾ ಹಲವು ಭಾಷೆಗಳಿಗೆ ರೀಮೆಕ್ ಆಗಿ ಹಿಟ್ ಆಗಿತ್ತು. ಕನ್ನಡದಲ್ಲೂ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ನಂತರ ಸೀಕ್ವೆಲ್ ಬಂದು ಅದು ಕೂಡ ಸಕ್ಸಸ್ ಕಂಡಿತ್ತು. ಅದನ್ನು ರೀಮೆಕ್ ಮಾಡಿ ಗೆದ್ದವರಿದ್ದಾರೆ. 'ದೃಶ್ಯಂ'- 2 ಮಲಯಾಳಂ, ಹಿಂದಿಯಲ್ಲಿ ಮಾತ್ರ ಗೆದ್ದಿತ್ತು.
ಇದೀಗ 'ದೃಶ್ಯಂ' ಚಿತ್ರದ ಮತ್ತೊಂದು ಸೀಕ್ವೆಲ್ ಬಗ್ಗೆ ಚರ್ಚೆ ನಡೀತಿದೆ. ಈಗಾಗಲೇ ಚಿತ್ರಕ್ಕಾಗಿ ನಿರ್ದೇಶಕ ಜಿತು ಜೋಸೆಫ್ ಕಥೆ ಚಿತ್ರಕಥೆ ಬರೆಯುವುದರಲ್ಲಿ ನಿರತರಾಗಿದ್ದಾರೆ. ಎರಡು ಬಾರಿ ತನ್ನ ಕುಟುಂಬವನ್ನು ಪೊಲೀಸರಿಂದ ರಕ್ಷಿಸಿಕೊಂಡ ಜಾರ್ಜ್ ಕುಟ್ಟಿ ಮೂರನೇ ಬಾರಿ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನಾ? ಎನ್ನುವ ಕುತೂಹಲದೊಂದಿಗೆ ಕಥೆಯನ್ನು ಮುಂದುವರೆಸಲಾಗುತ್ತಿದೆ. ಪ್ರೇಕ್ಷಕರು 'ದೃಶ್ಯಂ' ಸರಣಿಯ ಮತ್ತೊಂದು ಸಿನಿಮಾ ನೋಡಲು ಉತ್ಸುಕರಾಗಿರುವುದು ಸುಳ್ಳಲ್ಲ.

'ದೃಶ್ಯಂ'- 2 ಮಲಯಾಳಂನಲ್ಲಿ ನೇರವಾಗಿ ಓಟಿಟಿಗೆ ಬಂದಿತ್ತು. ಕೊರೋನಾ ಹಾವಳಿಯಿಂದ ಚಿತ್ರತಂಡ ಈ ನಿರ್ಧಾರ ಕೈಗೊಂಡಿತ್ತು. ಆದರೆ ಸಿನಿಮಾ ಸಕ್ಸಸ್ ಕಂಡಿತ್ತು. ತೆಲುಗಿನಲ್ಲೂ ನೇರವಾಗಿ ಡಿಜಿಟಲ್ ಫ್ಲಾಟ್ಪಾರ್ಮ್ಗೆ ಬಂದಿತ್ತು. ನಂತರ ಕನ್ನಡಕ್ಕೆ ರೀಮೆಕ್ ಆಗಿದ್ದ ಸಿನಿಮಾ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಲಿಲ್ಲ. ಆದರೆ ಕಳೆದ ವರ್ಷ 'ದೃಶ್ಯಂ'- 2 ಬಾಲಿವುಡ್ನಲ್ಲಿ ಸೂಪರ್ ಸಕ್ಸಸ್ ಕಂಡಿತ್ತು. ಸೋತು ಸುಣ್ಣವಾಗಿದ್ದ ಚಿತ್ರರಂಗಕ್ಕೆ ಗೆಲುವಿನ ಸಿಹಿ ಉಣಿಸಿತ್ತು.
'ದೃಶ್ಯಂ- 3' ಕ್ರೇಜಿ ನ್ಯೂಸ್
ಸದ್ಯ 'ದೃಶ್ಯಂ- 3' ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣ ಮಾಡುವ ಲೆಕ್ಕಾಚಾರ ಶುರುವಾಗಿದೆ. ಎರಡೂ ಸಿನಿಮಾಗಳನ್ನು ಜಿತು ಜೋಸೆಫ್ ನಿರ್ದೇಶನ ಮಾಡುವ ಸಾಧ್ಯತೆಯಿದೆ. ಇನ್ನು ಈ ಸರಣಿಯನ್ನು 3ನೇ ಸಿನಿಮಾದೊಂದು ಮುಕ್ತಾಯ ಮಾಡುವ ಬಗ್ಗೆಯೂ ಗುಸುಗುಸು ಕೇಳಿಬರ್ತಿದೆ. ಕಳ್ಳ ಪೊಲೀಸ್ ಆಟಕ್ಕೆ ಬ್ರೇಕ್ ಹಾಕುವ ಸುಳಿವು ಸಿಕ್ತಿದೆ.

ಜಿತು ಮಾಸ್ಟರ್ ಪ್ಲ್ಯಾನ್
ಹೇಳಿ ಕೇಳಿ 'ದೃಶ್ಯಂ' ಸಸ್ಪೆನ್ಸ್ ಥ್ರಿಲ್ಲರ್ ಸರಣಿ ಸಿನಿಮಾ. ಸದ್ಯ ಡಿಜಿಟಲ್ ಜಮಾನದಲ್ಲಿ ಒಂದು ಭಾಷೆಯ ಚಿತ್ರವನ್ನು ಮತ್ತೊಂದು ಭಾಷೆಯವರು ಸುಲಭವಾಗಿ ನೋಡುವಂತಾಗಿದೆ. ಮಲಯಾಳಂ ಹಾಗೂ ಹಿಂದಿಯಲ್ಲಿ 3ನೇ ಚಿತ್ರಕ್ಕಾಗಿ ಭಾರೀ ಕ್ರೇಜ್ ಇದೆ. ಹಾಗಾಗಿ ಎರಡೂ ಸಿನಿಮಾಗಳನ್ನು ಒಟ್ಟೊಟ್ಟಿಗೆ ಶೂಟ್ ಮಾಡಿ ಒಟ್ಟಿಗೆ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆಯಂತೆ. ಇದರಿಂದ ಬಾಲಿವುಡ್ ಮಂದಿ ಕೂಡ ಯಾವುದೇ ಸ್ಪಾಯ್ಲರ್ಸ್ ಇಲ್ಲದೇ ಹಿಂದಿ ವರ್ಷನ್ ನೋಡಿ ಥ್ರಿಲ್ ಆಗಬಹುದು. ಅದೇ ಕಾರಣಕ್ಕೆ ಇಂತಾದೊಂದು ಪ್ರಯತ್ನ ಶುರುವಾಗಿದೆ.
ಜಾಜ್ ಕುಟ್ಟಿ ಕೈಗೆ ಕೋಳ?
ಕೆಲ ದಿನಗಳ ಹಿಂದೆಯೇ 'ದೃಶ್ಯಂ'- 3 ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು. ಜಾರ್ಜ್ ಕುಟ್ಟಿ ಕೈಗೆ ಕೋಳ ಹಾಕಿಕೊಂಡು ಕೂತಿರುವಂತೆ ಒಂದು ಪೋಸ್ಟರ್ ಕೂಡ ವೈರಲ್ ಆಗಿತ್ತು. ಅಚಾನಕ್ ಆಗಿ ಮಡದಿ ಮಗಳು ಮಾಡುವ ಒಂದು ಹತ್ಯೆಯನ್ನು ಮುಚ್ಚಿಟ್ಟು ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ನಾಯಕ ಕಥೆ ಚಿತ್ರದಲ್ಲಿದೆ. ನಾಯಕ ತನ್ನ ಚಾಕಚಕ್ಯತೆಯಿಂದ ಪೊಲೀಸರ ಕೈಗೆ ಸಿಗದಂತೆ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಅನ್ನುವುದು ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತ್ತು. ಆದರೆ ಈ ಬಾರಿ ನಾಯಕ ಸಿಕ್ಕಿ ಬೀಳ್ತಾನಾ? ಕಾದು ನೋಡಬೇಕಿದೆ.
ಮುಂದಿನ ವರ್ಷ ಶೂಟಿಂಗ್
ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಜಯ್ ದೇವಗನ್ ಮಾಡಿದ್ದರು. ಬಹುತೇಕ ಅದೇ ಮುಖ್ಯ ಪಾತ್ರಗಳು, ಕಲಾವಿದರು ಸೀಕ್ವೆಲ್ನಲ್ಲಿ ಮುಂದುವರೆಯಲಿದ್ದಾರೆ. ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಮುಂದಿನ ವರ್ಷದ ಕೊನೆಗೆ ಸಿನಿಮಾ ಪ್ರೇಕ್ಷಕರ ಮುಂದ ಬರುವ ಸುಳಿವು ಸಿಕ್ತಿದೆ.


Click it and Unblock the Notifications











