ಮತ್ತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಜಾರ್ಜ್ಕುಟ್ಟಿ; ಹಾಗಾದ್ರೆ 'ದೃಶ್ಯಂ- 4' ಯಾವಾಗ ?
ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಸಿನಿಮಾ ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ರು ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿ ಇದ್ದಿದ್ದರಿಂದ ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಿದೆ. ಮೊದಲ 2 ಭಾಗಗಳಿಗೆ ಹೋಲಿಸಿದರೆ 3ನೇ ಭಾಗ ಕೊಂಚ ಸಪ್ಪೆ ಎನಿಸುತ್ತದೆ. ಆದರೆ 'ದೃಶ್ಯಂ- 4' ಸಿನಿಮಾ ಬರುವುದು ಖಚಿತವಾಗಿದೆ.
ಕಥೆ ಮತ್ತೆ ಅದೇ ಜಾಗಕ್ಕೆ ಬಂದು ನಿಂತಿದೆ. ಮತ್ತೊಮ್ಮೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜಾರ್ಜ್ಕುಟ್ಟಿ ತನ್ನ ಕುಟುಂಬವನ್ನು ರಕ್ಷಿಸಿಕೊಂಡಿದ್ದಾನೆ. ಹಾಗಂತ ವರುಣ್ ತಾಯಿ ಆಸೆ ಇನ್ನು ಈಡೇರಿಲ್ಲ. ಜಾರ್ಜ್ಕುಟ್ಟಿ ಹಾಗೂ ಆತನ ಕುಟುಂಬದ ಆತಂಕ ಸಂಪೂರ್ಣವಾಗಿ ದೂರವಾಗಿಲ್ಲ. ಫಸ್ಟ್ ಹಾಫ್ ನೀರಸವಾಗಿದ್ದರೂ ಕೊನೆಯ 30 ನಿಮಿಷ ಸಿನಿಮಾ ಕುತೂಹಲ ಮೂಡಿಸುತ್ತದೆ. ಒಂದಷ್ಟು ಟ್ವಿಸ್ಟ್ಗಳನ್ನು ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ ಜಿತು ಜೋಸೆಫ್. 'ನನ್ನ ಫ್ಯಾಮಿಲಿ ಸೇಫ್' ಎಂದು ಜಾರ್ಜ್ಕುಟ್ಟಿ ಮತ್ತೆ ನಿಟ್ಟುಸಿರು ಬಿಟ್ಟಿದ್ದಾನೆ. ಜೊತೆಗೆ ಏನೇ ಮಾಡಿದ್ರು ನನ್ನ ಮಡದಿ ಮಕ್ಕಳನ್ನು ನಾನು ರಕ್ಷಿಸಿಕೊಳ್ಳುತ್ತೇನೆ, ಅದಕ್ಕಾಗಿ ಏನು ಬೇಕಾದರೂ ಮಾಡಬಲ್ಲೆ ಎನ್ನುವ ಎಚ್ಚರಿಕೆ ಕೊಟ್ಟಿದ್ದಾನೆ.

ಚಿತ್ರದ ಪಾತ್ರಗಳು ಹೇಳುವಂತೆ ಜಾರ್ಜ್ಕುಟ್ಟಿ ತನ್ನ ಬುದ್ಧಿವಂತಿಕೆಯಿಂದ ಅಲ್ಲ, ಅದೃಷ್ಟದಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದಾನೆ. ಹಾಗಾದರೆ ಆ ಅದೃಷ್ಟ ಮತ್ತೆ ಮತ್ತೆ ಅವನ ಕೈ ಹಿಡಿಯುತ್ತಾ? ಈ ಕಥೆಗೆ ಅಂತ್ಯ ಇಲ್ವಾ? ಇದ್ದರೆ ಯಾವ ರೀತಿ? ಎನ್ನುವ ಪ್ರಶ್ನೆ ಚಿತ್ರದ ಕೊನೆಗೆ ಹುಟ್ಟುಹಾಕಿದ್ದಾರೆ. ಮಗಳು ಅಂಜು ಮದುವೆ ಜೊತೆಗೆ ಪಾರ್ಟ್- 3 ಕಥೆ ಮುಕ್ತಾಯವಾಗಿದೆ. ಪಾರ್ಟ್- 4 ಸಿನಿಮಾ ಬರುವ ಬಗ್ಗೆ ಕೊನೆಯಲ್ಲಿ ಸುಳಿವು ಸಿಕ್ಕಿದೆ. ಮತ್ತೆ 'ದೃಶ್ಯಂ' ಕಥೆ ಎಳೆಯುವುದು ಬೇಕಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.
ಇದು ಬಲವಂತವಾಗಿ ಮಾಡಿರುವ ಸೀಕ್ವೆಲ್ ರೀತಿ ಇದೆ, ದುಡ್ಡಿಗಾಗಿ ಕಥೆಯನ್ನು ಎಳೆದು ಇನ್ನೊಂದು ಸಿನಿಮಾ ಮಾಡಿದ್ದಾರೆ, ಕಥೆಯನ್ನು ಮುಗಿಸಿಬಿಟ್ಟಿದ್ದರೆ ಚೆನ್ನಾಗಿತ್ತು, ಮತ್ತೆ ಮತ್ತೆ ಎಳೆಯುವ ಅಗತ್ಯ ಇಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಚಿತ್ರದ ಒಂದು ದೃಶ್ಯದಲ್ಲಿ ಕಥೆ ಯಾವಾಗ ಮುಂದುವರೆಯಬಹುದು ಎನ್ನುವ ಸುಳಿವು ಸಿಗುತ್ತದೆ. ಇನ್ನು 5 ವರ್ಷ ಕೇಸ್ ಓಪನ್ ಮಾಡಬಾರದು, ನನ್ನ ಕುಟುಂಬದ ತಂಟೆಗೆ ಬರಬಾರದು ಎಂದು ಜಾರ್ಜ್ಕುಟ್ಟಿ ಪೊಲೀಸರ ಬಳಿ ಮಾತು ತೆಗೆದುಕೊಂಡಿದ್ದಾನೆ. ಅಲ್ಲಿಗೆ 2030ರ ಬಳಿಕವೇ ಮತ್ತೊಂದು ಸೀಕ್ವೆಲ್ ಬರುವ ನಿರೀಕ್ಷೆಯಿದೆ.

ವರುಣ್ ಮೃತದೇಹ ಸಿಗುವರೆಗೂ ಕೇಸ್ ದೊಡ್ಡ ತಿರುವು ಪಡೆಯುವುದಿಲ್ಲ. ಬೇರೆ ಯಾವುದೇ ಸಂಕಷ್ಟ ಬಂದರೂ ಜಾರ್ಜ್ಕುಟ್ಟಿ ಅದನ್ನೆಲ್ಲಾ ಎದುರಿಸಿ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುದ್ದಾನೆ. 4ನೇ ಭಾಗಕ್ಕೆ ಕೊಂಚ ಬೇರೆಯದ್ದೇ ಕಥೆಯನ್ನು ಮಾಡಿಕೊಳ್ಳಬೇಕಿದೆ. ಅದಕ್ಕೆ ಬೇಕಾದ ಸಾಕಷ್ಟು ವಿಚಾರಗಳನ್ನು 3ನೇ ಭಾಗದ ಕೊನೆಗೆ ತೋರಿಸಿದ್ದಾರೆ. ಹಾಗಾಗಿ ಐದಾರು ವರ್ಷಗಳ ಬಳಿಕ 'ದೃಶ್ಯಂ- 4' ಸಿನಿಮಾ ಬಂದು ಪ್ರೇಕ್ಷಕರನ್ನು ರಂಜಿಸಬಹುದು.
'ದೃಶ್ಯಂ- 4' ಚಿತ್ರಕ್ಕೆ ಬೇರೆಯದ್ದೇ ಕಥೆಯನ್ನು ಜಿತು ಜೋಸೆಫ್ ತಲೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಲಿಂಕ್ ಕೊಡಲು ಪಾರ್ಟ್- 3 ಮಾಡಿದ್ದಾರೆ ಅಷ್ಟೆ. ಮುಂದೆ ಕಥೆಯನ್ನು ಮತ್ತಷ್ಟು ರೋಚಕವಾಗಿ ತೋರಿಸುವ ಸಾಧ್ಯತೆಯಿದೆ ಎನ್ನುವುದು ಕೆಲವರ ವಾದ. ಅದೆಲ್ಲಾ ಏನೇ ಇದ್ದರೂ 'ದೃಶ್ಯಂ- 3' ಫಲಿತಾಂಶದ ಮೇಲೆ ಮತ್ತೊಂದು ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ. ಕಥೆಯನ್ನು ಬೆಳೆಸುವ ರೀತಿಯಲ್ಲೇ ಕ್ಲೈಮ್ಯಾಕ್ಸ್ ಮಾಡಿ ಮುಗಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪಾರ್ಟ್- 4 ಬಗ್ಗೆ ಗೊತ್ತಾಗಲಿದೆ.


Click it and Unblock the Notifications