ಮಲಯಾಳಂ ಚಿತ್ರರಂಗದ 'ಕಾಮಕಾಂಡ', ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೂಪರ್ ಸ್ಟಾರ್ ಮೋಹನ್ ಲಾಲ್...!
ಕೆಲ ದಿನಗಳ ಹಿಂದೆಯಷ್ಟೇ ಚಿತ್ರಗಳ ಕಥೆಯ ವಿಚಾರಕ್ಕೆ ಸಂಬಂಧಿಸಿದಂತೆ ಸದ್ದು ಮಾಡಿದ ಉದ್ಯಮ ಮಲಯಾಳಂ ಚಿತ್ರರಂಗ.ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದ ಮಲಯಾಳಂ ಚಿತ್ರರಂಗ ಈ ವರ್ಷದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರರಂಗ ಕೂಡ ಹೌದು. ಈ ವರ್ಷದ ಆರಂಭದ ನಾಲ್ಕು ತಿಂಗಳಿನಲ್ಲಿಯೇ ಒಂದು ಸಾವಿರ ಕೋಟಿಗೂ ಅಧಿಕ ಹಣ ಕೊಳ್ಳೆ ಹೊಡೆದ ಖ್ಯಾತಿ ಕೂಡ ಮಾಲಿವುಡ್ಗೆ ಸಲ್ಲುತ್ತೆ.
ಇಂಥಾ ಚಿತ್ರರಂಗ ಈಗ 'ಕಾಮ'ದ ವಾಸನೆಯಿಂದ ನಾರುತ್ತಿದೆ. ಹೇಮಾ ಆಯೋಗದ ವರದಿ ಬಂದ ನಂತರ ದಿನಕ್ಕೊಂದು 'ಕಾಮಪುರಾಣ' ಹೊರ ಬರುತ್ತಿವೆ. ಇದೆಲ್ಲದರಿಂದ ಬೇಸತ್ತು ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋ ಮೋಹನ್ ಲಾಲ್ ಈಗ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ʼಅಮ್ಮʼ (Association of Malayalam Movie Artists) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೈ ಮುಗಿದು ಎದ್ದು ಹೊರ ನಡೆದಿದ್ದಾರೆ.

ಕೇವಲ ಮೋಹನ್ ಲಾಲ್ ಮಾತ್ರ ಅಲ್ಲ ಇಡೀ 'ಅಮ್ಮ' ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಕೂಡ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕೇರಳ ಕಲಾವಿದರ ಸಂಘಟನೆಯಲ್ಲಿನ ಎಲ್ಲಾ ಚುನಾಯಿತ ಹದಿನೇಳು ಸದಸ್ಯರು 'ಅಮ್ಮ' ಸಂಘಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.
ಅಂದ್ಹಾಗೇ ಇಲ್ಲಿಯವರೆಗೆ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿರುವವರ ಸುತ್ತ ಮುತ್ತವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಈಗಾಗ್ಲೇ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ನಿರ್ದೇಶಕ ರಂಜಿತ್ ಕೆಳಗಿಳಿದಿದ್ದಾರೆ. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA } ನಲ್ಲಿ ಪ್ರಧಾನ ಕಾರ್ಯದರ್ಶಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಮಲಯಾಳಂ ಚಿತ್ರರಂಗದ ಸೀನಿಯರ್ ಆಕ್ಟರ್ ಸಿದ್ದಿಕ್ ಕೂಡ ಅತ್ಯಾಚಾರದ ಆರೋಪದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈಗ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನ ಅಧ್ಯಕ್ಷ ಸ್ಥಾನಕ್ಕೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ರಾಜೀನಾಮೆ ನೀಡಿದ್ದಾರೆ.

ಇನ್ನೂ ಮೋಹನ್ ಲಾಲ್ ಅತ್ತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಲಯಾಳಂ ಚಿತ್ರರಂಗದಲ್ಲಿ ತಲ್ಲಣ ಹೆಚ್ಚಾಗಿದೆ. ಚಿತ್ರರಂಗದ ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದ ಚಿತ್ರರಂಗದ ಹಿರಿಯ ನಾಯಕ ತಮ್ಮ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವುದು ಸರಿಯಲ್ಲ ಅನ್ನುವ ಅಭಿಪ್ರಾಯ ಕೂಡ ಮಲಯಾಳಂ ಚಿತ್ರರಂಗದಲ್ಲಿ ವ್ಯಕ್ತವಾಗುತ್ತಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ನಟಿಯರಿಂದ ಮತ್ತು ಜೂನಿಯರ್ ಆರ್ಟಿಸ್ಟ್ಗಳಿಂದ ಕೂಡ ಮೋಹಲ್ ಲಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಮತ್ತೊಂದು ಕಡೆ ಮಲಯಾಳಂ ಚಿತ್ರರಂಗದಲ್ಲಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಈಗಲೇ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಅಲ್ಲಿನ ಸರ್ಕಾರದ ಮೇಲೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ಪೊಲೀಸ್ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ಕರೆದಿದ್ದು, ತನಿಖೆಗೆ 07 ಸದಸ್ಯರಗಳನ್ನೊಳಗೊಂಡ ವಿಶೇಷ ತಂಡವನ್ನು ಸ್ಥಾಪಿಸಲು ನಿರ್ಧಾರ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕೇರಳದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











