ದುಲ್ಕರ್ಗೆ ತಂದೆ ಮಮ್ಮುಟಿ ಎಚ್ಚರಿಕೆ: ಆದರೆ ಕನ್ನಡ ನಟರನ್ನು ಈ ರೀತಿ ಎಚ್ಚರಿಸುವವರು ಯಾರು?
ಮಲಯಾಳಂ ನಟ ದುಲ್ಕರ್ ಸಲ್ಮಾನ್ ಭಾಷೆಯ ಗಡಿಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಂದೆ ಮಮ್ಮುಟಿ ಹಾದಿಯಲ್ಲೇ ಚಿತ್ರರಂಗ ಪ್ರವೇಶಿಸಿದ ದುಲ್ಕರ್ 'ಉಸ್ತಾದ್ ಹೋಟೆಲ್', 'ಚಾರ್ಲಿ', 'ಕಲಿ', 'ಸೀತಾ ರಾಮಂ' ರೀತಿಯ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡರು.
ಇತ್ತೀಚೆಗೆ ದುಲ್ಕರ್ ಸಲ್ಮಾನ್ ಆಕ್ಷನ್ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ 'ಕಿಂಗ್ ಆಫ್ ಕೋತ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ಗೆ ರೆಡಿಯಾಗ್ತಿದೆ. ಈಗಾಗಲೇ ಚಿತ್ರದ ಟೀಸರ್ ಧೂಳೆಬ್ಬಿಸಿದೆ. ಇನ್ನು E tims ಸಂದರ್ಶನದಲ್ಲಿ ಮಾತನಾಡಿರುವ ದುಲ್ಕರ್ ಸಲ್ಮಾನ್ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಮನೆಗೆ ಬರಬೇಡ ಎಂದು ಅಪ್ಪ ಹೇಳುತ್ತಾರೆ ಎಂದಿದ್ದಾರೆ. ಸದ್ಯ ಮಾಲಿವುಡ್ ನಟನ ಮಾತುಗಳು ವೈರಲ್ ಆಗುತ್ತಿದೆ.

ತಮ್ಮ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ತಂದೆ ಮಮ್ಮುಟಿ ಪ್ರಭಾವ ಇರುತ್ತದೆ. ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುವಂತೆ ತಂದೆ ಹುರಿದುಂಬಿಸುತ್ತಿರುತ್ತಾರೆ ಎಂದು ಹೇಳಿಕೊಂಡಿದ್ದಾರೆ. "ತಂದೆ ವರ್ಷಕ್ಕೆ 5 ಸಿನಿಮಾಗಳಲ್ಲಿ ನಟಿಸುತ್ತಾರೆ. ಆದರೆ ನಾನು ಒಂದೊಂದು ಚಿತ್ರಕ್ಕೆ ಹೆಚ್ಚು ಸಮಯ ತೆಗದುಕೊಳ್ಳುತ್ತೇನೆ. ಒಂದೊಂದು ಚಿತ್ರಕ್ಕೆ ಏಳೆಂಟು ತಿಂಗಳು ಅಂದರೆ ಅವರು ಒಪ್ಪಲು ಸಿದ್ಧರಿಲ್ಲ. ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಮನೆಗೆ ಬರಬೇಡ ಎಂದು ಅವರು ಹೇಳುತ್ತಿರುತ್ತಾರೆ" ಎಂದು ದುಲ್ಕರ್ ನಗೆಬೀರಿದ್ದಾರೆ.
ಯಾರೋ ಅಭಿಮಾನಿಯೊಬ್ಬರು ನನ್ನೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಕೇಳಿದಾಗ ನನ್ನ ಪತ್ನಿ ಅಚ್ಚರಿಕೊಂಡಿದ್ದಳು ಎಂದು ನೆನಪಿಸಿಕೊಂಡಿದ್ದಾರೆ. "ಅವಳು, ನೀವು ಮನೆಯಲ್ಲಿ ಹೇಗಿರುತ್ತೀರಾ ಅನ್ನೋದು ನನಗೆ ಗೊತ್ತಿದೆ. ಇವರೆಲ್ಲಾ ನೀನು ಚೆಂದವಾಗಿ ರೆಡಿಯಾಗಿರೋದನ್ನು ನೋಡುತ್ತಿದ್ದಾರೆ. ನಾನು ನಿಜ ಜೀವನದಲ್ಲಿ ನಿನ್ನೊಟ್ಟಿಗೆ ಬಾಳುತ್ತಿದ್ದೇನೆ" ಎನ್ನುತ್ತಾಳೆ
"ಈಗಲೂ ತನ್ನ ಹೆಂಡತಿ ನಾನು ಹೀರೋ ಎನ್ನುವುದನ್ನು ಒಪ್ಪಿಕೊಳ್ಳುತ್ತಿಲ್ಲ. ಅವಳ ದೃಷ್ಟಿಯಲ್ಲಿ ನಾನು ಕೇವಲ ಕೆಲಸಕ್ಕೆ ಹೋಗಿ ಮನೆಗೆ ಬರುವ ವ್ಯಕ್ತಿ ಅಷ್ಟೆ. ಪ್ರತಿ ಬಾರಿಯೂ ತಾನು ನಟ ಎಂಬುದನ್ನು ಆಕೆಗೆ ನೆನಪಿಸಿಬೇಕು" ಎಂದಿದ್ದಾರೆ. 'ಕುರುಪ್', 'ಸೆಲ್ಯೂಟ್', 'ಸೀತಾ ರಾಮಂ', 'ಚುಪ್' ಈಗೆ ವೈವಿಧ್ಯಮಯ ಸಿನಿಮಾಗಳಲ್ಲಿ ದುಲ್ಕರ್ ನಟಿಸುತ್ತಾ ಬರ್ತಿದ್ದಾರೆ.

ಮಮ್ಮುಟಿ ಮಗನಿಗೆ ವರ್ಷಕ್ಕೊಂದು ಸಿನಿಮಾ ಮಾಡೋದು ಸರಿಯಲ್ಲ ಎಂದು ಹೇಳಿರುವುದು ನಿಜಕ್ಕೂ ಮೆಚ್ಚುವಂಥದ್ದು. ಮಮ್ಮಟ್ಟಿ ಸಿನಿಕರಿಯರ್ ನೋಡಿದರೆ ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸೋರೋದು ಗೊತ್ತಾಗುತ್ತದೆ. ವಯಸ್ಸು 70 ದಾಟಿದ್ರು ಇವತ್ತಿಗೂ ಪ್ರತಿದಿನ ಕೆಲಸ ಮಾಡಲಿ ಉತ್ಸುಕರಾಗಿದ್ದಾರೆ. ಮಗನಿಗೂ ಅದಕ್ಕೆ ಹೇಳುತ್ತಿದ್ದಾರೆ. ನಿಜಕ್ಕೂ ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಬೇಕು. ಆಗ ಮಾತ್ರ ಸಿನಿಮಾಗಳನ್ನು ನಂಬಿಕೊಂಡವರ ಜೀವನ ನಡೆಯಲು ಸಾಧ್ಯ.
ಕನ್ನಡದಲ್ಲಿ ಸ್ಟಾರ್ ನಟರು ಕೂಡ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳನ್ನು ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದ್ದಿದ್ದರಲ್ಲಿ ಶಿವರಾಜ್ಕುಮಾರ್ ಮಾತ್ರ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಚಿತ್ರರಂಗ ಹಿನ್ನಡೆ ಅನುಭವಿಸುತ್ತಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸ್ಟಾರ್ ನಟರ ಸಿನಿಮಾಗಳಿಲ್ಲದೇ ಥಿಯೇಟರ್ಗಳನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಐದಾರು ತಿಂಗಳಿನಿಂದ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗಲೇಯಿಲ್ಲ.
ಒಂದು ವರ್ಷ ಎರಡು ವರ್ಷ ವ್ಯಯಿಸಿ ಮಾಡಿದ ಸಿನಿಮಾ ಗೆದ್ದೆಗೆಲ್ಲುತ್ತದೆ ಎನ್ನುವ ಯಾವುದೇ ಗ್ಯಾರೆಂಟಿ ಇಲ್ಲ. ಇತ್ತೀಚೆಗೆ ಕನ್ನಡದಲ್ಲಿ ಬಂದ ಒಂದೆರಡು ದೊಡ್ಡ ಸಿನಿಮಾಗಳೇ ಅದಕ್ಕೆ ಉದಾಹರಣೆಡ. ಹಾಗಿದ್ದ ಮೇಲೆ ಸುಖಾ ಸುಮ್ಮಗೆ ಪ್ಯಾನ್ ಇಂಡಿಯಾ ವ್ಯಾಮೋಹ ಯಾಕೆ? ಎನ್ನುವುದು ಕೆಲವರ ವಾದ.


Click it and Unblock the Notifications











