ಉತ್ತರದಿಂದ ದಕ್ಷಿಣಕ್ಕೆ ಬಂದ ಮಹಾಕುಂಭದ ಮೊನಾಲಿಸಾ ; ಚಿತ್ರದ ಹೆಸರೇನು ? ನಿರ್ದೇಶಕ ಯಾರು ?
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತಮ್ಮ ಮನಮೋಹಕ ಕಣ್ಣುಗಳಿಂದನೇ ಎಲ್ಲರನ್ನು ಸೆಳೆದವರು ಮೊನಾಲಿಸಾ ಭೋಸಲೆ. ಮಣಿ ಸರ ಮಾರುತ್ತ ತನ್ನಷ್ಟಕ್ಕೆ ತಾನು ಇದ್ದ ಈ ಚೆಲುವೆಯ ಬದುಕನ್ನು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಿಸಿದ ಹೆಗ್ಗಳಿಕೆ ಸಾಮಾಜಿಕ ಜಾಲತಾಣದ್ದು. ಇವತ್ತು ಮೊನಾಲಿಸಾ ಕೈಯಲ್ಲಿ ಮಣಿ ಸರ ಇಲ್ಲ. ಹೂವು ಕೂಡ ಇಲ್ಲ.
ಅದೆಲ್ಲವನ್ನೂ ಮಾರುವ ಅವಶ್ಯಕತೆಯಾಗಲಿ.. ಅನಿವಾರ್ಯತೆಯಾಗಲಿ.. ಸದ್ಯ ಮೊನಾಲಿಸಾಗೆ ಇದ್ದಂತೆ ಇಲ್ಲ. ಯಾಕೆಂದರೆ.. ಮೊನಾಲಿಸಾ ಅದೃಷ್ಟ ಖುಲಾಯಿಸಿದೆ. ಅವತ್ತು ಮಹಾಕುಂಭ ಮೇಳದಲ್ಲಿ ಮೊನಾಲಿಸಾ ಕಣ್ಣಿಗೆ ಮರುಳಾಗಿ ಮನಸೋತ ಅನೇಕರು ಇಂದು ಮೊನಾಲಿಸಾ ಹೋದ ಕಡೆಯೆಲ್ಲಾ ಸಕ್ಕರೆಗೆ ಮುತ್ತಿಕೊಂಡ ಇರುವೆಯಂತೆ ಗುಂಪುಗುಂಪಾಗಿ ಮುತ್ತಿಕೊಳ್ಳುತ್ತಾರೆ.

ಮೊನಾಲಿಸಾ ಅವರ ಈ ಜನಪ್ರಿಯತೆಯಿಂದಾಗಿ ಬಣ್ಣದ ಲೋಕ ಕೂಡ ತನ್ನ ಹೆಬ್ಬಾಗಿಲನ್ನು ತೆರೆದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನಾಲಿಸಾ ಈಗಾಗಲೇ ''ಸಾದಗಿ'' ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ.. ಇವರ ಜನಪ್ರಿಯತೆಯನ್ನು ಎನ್ ಕ್ಯಾಶ್ ಮಾಡಿಕೊಂಡು ಸನೋಜ್ ಮಿಶ್ರಾ ಎಂಬ ವ್ಯಕ್ತಿ ''ದಿ ಡೈರಿ ಆಫ್ ಮಣಿಪುರ್'' ಎಂಬ ಚಿತ್ರವನ್ನು ಕೂಡ ಘೋಷಿಸಿದ್ದಾರೆ.
ಈ ಚಿತ್ರ ಅದ್ಯಾವ ಕಾಲಕ್ಕೆ ತೆರೆಗೆ ಬರುತ್ತೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ಮೊನಾಲಿಸಾ ಸದ್ಯ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದಿದ್ದಾರೆ. ''ಮಲಯಾಳಂ'' ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಹೌದು, ಮೊನಾಲಿಸಾ ಮಲಯಾಳಂನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ''ನಾಗಮ್ಮ'' ಎಂದು ಹೆಸರಿಡಲಾಗಿದ್ದು ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕೊಚ್ಚಿಯಲ್ಲಿ ನೆರವೇರಿದೆ. ಪಿ.ಬಿನು ವರ್ಗಿಸ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು ಸೆಪ್ಟೆಂಬರ್ನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಇನ್ನೂ ''ನೀಲತಾಮರ''.. ''ರೆಡ್ ವೈನ್''.. ''ಡಿಎನ್ಎ''.. ಸೇರಿ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಕೈಲಾಶ್ ಈ ಚಿತ್ರದಲ್ಲಿ ಮೊನಾಲಿಸಾಗೆ ಜೋಡಿಯಾಗಿದ್ಧಾರೆ. ''ನಾಗಮ್ಮ'' ಚಿತ್ರದ ಮುಹೂರ್ತ ಸಮಾರಂಭಕ್ಕೆ ''ಥನಿಯವರ್ತನಂ'' (1987).. ''ಕಿರೀಟಂ'' (1989).. ''ದಶರಥಂ'' (1989).. ''ಹಿಸ್ ಹೈನೆಸ್ ಅಬ್ದುಲ್ಲಾ'' (1990).. ''ಭಾರತಂ'' (1991).. ''ಸದಾಯಂ'' (1992).. ''ಕಮಲದಳಂ'' (1992).. ಮತ್ತು ''ಚೆಂಕೋಲ್'' (1993).. ನಂತಹ ಮಲಯಾಳಂನ ಅನೇಕ ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಸಿಬಿ ಮಲಯಿಲ್ ಮುಖ್ಯ ಅತಿಥಿಯಾಗಿ ಬಂದಿದ್ದು ವಿಶೇಷ.

ಅಂದ್ಹಾಗೇ ಮಹಾಕುಂಭ ಮೇಳದಲ್ಲಿ ಎಲ್ಲರ ಕಣ್ಣಿಗೆ ಬಿದ್ದು ವೈರಲ್ ಆದ ನಂತರ ಮೊನಾಲಿಸಾ ಅವರನ್ನು ಕೇರಳದ ಕೋಝಿಕ್ಕೋಡ್ನಲ್ಲಿರುವ ಚೆಮ್ಮನೂರ್ ಜ್ಯುವೆಲರ್ಸ್ನ ಹೊಸ ಮಳಿಗೆಗಯ ಉದ್ಘಾಟನೆಗೆ ಚೆಮ್ಮನೂರ್ನ ಮಾಲೀಕರಾದ ಬಾಬಿ ಕರೆದಿದ್ದರು. ಮೊನಾಲಿಸಾ ಅವರ ಖರ್ಚು ವೆಚ್ಚಗಳನ್ನೆಲ್ಲಾ ಭರಿಸಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಮೊನಾಲಿಸಾ ಸುಂದರವಾದ ಕೆಂಪು ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದರು. ಇಷ್ಟೇ ಅಲ್ಲದೇ ವೇದಿಕೆಯ ಮೇಲೆ ಡ್ಯಾನ್ಸ್ ಕೂಡ ಮಾಡಿದ್ದರು. ವಿಶೇಷ ಅಂದರೆ ಈ ಶೋ ರೂಮ್ನ ಮುಂಭಾಗದಲ್ಲಿ ಮೊನಾಲಿಸಾ ಅವರನ್ನು ನೋಡಲು ಅಸಂಖ್ಯಾತ ಜನ ನೆರೆದಿದ್ದರು.
ಕೇರಳದಲ್ಲಿ ಮೊನಾಲಿಸಾ ಅವರ ಈ ಕ್ರೇಜ್ನ್ನು ನೋಡಿಯೇ ಪಿ ಬಿನು ವರ್ಗಿಸ್ ತಮ್ಮ'' ನಾಗಮ್ಮ'' ಚಿತ್ರಕ್ಕೆ ಇವರನ್ನು ಆಯ್ಕೆ ಮಾಡಿಕೊಂಡಿದ್ದಾರಾ ಗೊತ್ತಿಲ್ಲ. ಆದರೆ ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಇಂತಹದ್ದೊಂದು ಚರ್ಚೆಯಂತೂ ನಡೆಯುತ್ತಿದೆ.
ಇನ್ನುಳಿದಂತೆ ಸದ್ಯ ಮೊನಾಲಿಸಾ ಮೇಲೆ ಬಾಲಿವುಡ್ ಕೂಡ ಕಣ್ಣಿಟ್ಟಿದೆ. '' ದಿ ಡೈರಿ ಆಫ್ ಮಣಿಪುರ್'' ಚಿತ್ರ ಹೊರತು ಪಡಿಸಿದರೆ ಹಿಂದಿಯಲ್ಲಿ ಬೇರೆ ಯಾವ ಚಿತ್ರಕ್ಕೂ ಮೊನಾಲಿಸಾ ನಾಯಕಿಯಾಗದೇ ಇದ್ದರೂ ಕೂಡ ಮುಂಬರುವ ದಿನಗಳಲ್ಲಿ ಬೇರೆ ಅವಕಾಶಗಳು ಸಿಕ್ಕರೂ ಸಿಗಬಹುದು. ಮಲಯಾಳಂನಲ್ಲಿ ಈಗ ಒಪ್ಪಿಕೊಂಡಿರುವ ''ನಾಗಮ್ಮ'' ಬಿಡುಗಡೆಯಾದ ನಂತರ ಇನ್ನೂ ಹಲವು ದಕ್ಷಿಣದ ಚಿತ್ರಗಳಿಗೆ ಮೊನಾಲಿಸಾ ನಾಯಕಿಯಾದರೂ ಆಗಬಹುದು.


Click it and Unblock the Notifications











