ರಜನಿಕಾಂತ್ 'ಜೈಲರ್' ಚಿತ್ರದ ಖಳನಟ ವಿನಾಯಕನ್ ಮತ್ತೆ ಪೊಲೀಸರ ವಶಕ್ಕೆ
ಮಲಯಾಳಂ ಖಳನಟ ವಿನಾಯಕನ್ನನ್ನು ಹೈದರಾಬಾದ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಆತ ಸಂಕಷ್ಟ ಎದುರಿಸುವಂತಾಗಿದೆ. ವಿನಾಯಕನ್ ಹೀಗೆ ರಂಪಾಟ ಮಾಡುತ್ತಿರುವುದು ಇದೇ ಮೊದಲಲ್ಲ.
ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ವಿನಾಯಕನ್ ವಿಲನ್ ಆಗಿ ಅಬ್ಬರಿಸಿದ್ದರು. ವರ್ಮಾ ಎನ್ನುವ ಪಾತ್ರದಲ್ಲಿ ಆತನ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕೊಚ್ಚಿಯಿಂದ ಹೈದರಾಬಾದ್ ಮಾರ್ಗವಾಗಿ ವಿನಾಯಕನ್ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಕನೆಕ್ಟಿಂಗ್ ಫ್ಲೈಟ್ ಹತ್ತಲು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು. ಅಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಸಿಎಫ್) ಕಾನ್ಸ್ಸ್ಟೇಬಲ್ ಮೇಲೆ ವಿನಾಯಕನ್ ಹಲ್ಲೆ ಮಾಡಿದ್ದಾರೆ.

ಇನ್ನು ಮಲಯಾಳಂನ ಮನೋರಮಾ ಪತ್ರಿಕೆ ಈ ಬಗ್ಗೆ ನಟ ವಿನಾಯಕನ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಸಿಐಎಸ್ಎಫ್ ಸಿಬ್ಬಂದಿಯೇ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಬೇಕಿದ್ದರೆ ಸಿಸಿಟಿವಿ ಫುಟೇಜ್ ನೋಡಿ. ಪೊಲೀಸರು ನನ್ನನ್ನು ಯಾಕೆ ವಶಕ್ಕೆ ಪಡೆದರು ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ. CICF ಸಿಬ್ಬಂದಿ ಮೇಲೆ ವಾಗ್ವಾದ ನಡೆಸಿದ್ದು ಬಳಿಕ ಆತನ ಮೇಲೆ ವಿನಾಯಕನ್ ಕೈಮಾಡಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಅಕ್ಟೋಬರ್ 24ರಂದು ವಿನಾಯಕನ್ ಅವರನ್ನು ಕೇರಳದ ಕೊಚ್ಚಿ ಪೊಲೀಸರು ಬಂಧಿಸಿದ್ದರು. ತಮ್ಮ ಅಪಾರ್ಟ್ಮೆಂಟ್ನಲ್ಲಿ ಕುಡಿದು ಗಲಾಟೆ ಮಾಡಿದ್ದರು ಎಂದು ಅಲ್ಲಿನ ನಿವಾಸಿಗಳು ದೂರು ನೀಡಿದ್ದರು. ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಹೇಳಿದ್ದರು. ಆದರೆ ವಿಚಾರಣೆಗೆ ಹೋಗಿ ಪೊಲೀಸ್ ಠಾಣೆಯಲ್ಲೂ ಗಲಾಟೆ ಮಾಡಿದ್ದು ಎಂದು ವರದಿಯಾಗಿತ್ತು.
ಡ್ಯಾನ್ಸರ್ ಆಗಿ ವಿನಾಯಕನ್ ತಮ್ಮ ಕರಿಯರ್ ಆರಂಭಿಸಿದ್ದರು. 'ಮಾಂತ್ರಿಕಮ್' ಎನ್ನುವ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. 'ಸ್ಟಾಪ್ ವೈಲೆನ್ಸ್', 'ವೆಲ್ಲಿತಿರಾ', 'ಚಾತಿಕಥಾ ಚಂತು', 'ಚೋಟ್ಟಾ ಮುಂಬೈ' ಮತ್ತು 'ತೊಟ್ಟಪ್ಪನ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಮಲಯಾಳಂ ಬಿಟ್ಟರೆ ಕೆಲ ತಮಿಳು ಸಿನಿಮಾಗಳಲ್ಲಿ ಕೂಡ ವಿನಾಯಕನ್ ಅಬ್ಬರಿಸಿದ್ದಾರೆ.
ತಮಿಳಿನಲ್ಲಿ 'ತಿಮಿರು', 'ಕಾಳೈ', 'ಸಿರುತೈ' ಹಾಗೂ 'ಜೈರಲ್' ವಿನಾಯಕನ್ ನಟಿಸಿದ ಹಿಟ್ ಸಿನಿಮಾಗಳು. 'ಜೇಮ್ಸ್' ಎನ್ನುವ ಒಂದು ಬಾಲಿವುಡ್ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.


Click it and Unblock the Notifications











