ಕೊಲೆ ಸಂಚು ಆರೋಪ: ಮಲಯಾಳಂ ನಟ ದಿಲೀಪ್ಗೆ ನಿರೀಕ್ಷಣಾ ಜಾಮೀನು
2017ರಲ್ಲಿ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ, ಕೊಲೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದಾರೆ ಮಲಳಯಾಂ ನಟ ದಿಲೀಪ್. ಈ ಪ್ರಕರಣದಲ್ಲಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಕೇರಳ ಹೈಕೋರ್ಟ್ ಇತ್ಯರ್ಥ ಪಡಿಸಿದೆ.
ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಆರೋಪಿಗಳಾದ ದಿಲೀಪ್ ಮತ್ತು ಇತರರಿಗೆ ಸೋಮವಾರ (ಫೆಬ್ರವರಿ 7) ಕೇರಳ ಹೈಕೋರ್ಟ್ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ. ಎರಡು ವಾರಗಳ ವಿಸ್ತೃತ ವಿಚಾರಣೆಯ ನಂತರ ನ್ಯಾಯಮೂರ್ತಿ ಗೋಪಿನಾಥ್ ಪಿ ನೇತೃತ್ವದ ಪೀಠ ತೀರ್ಪು ಪ್ರಕಟಿಸಿದೆ.
ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಬೆದರಿಕೆಗಳನ್ನು ಒಡ್ಡಿದ ಆರೋಪದ ಮೇಲೆ, ಜನವರಿಯಲ್ಲಿ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ದಾಳಿಯ ವೇಳೆ ಅಧಿಕಾರಿಗಳ ವಿರುದ್ಧ ಸಂಚು!
ಕೆಲವು ದಿನಗಳ ಹಿಂದೆ ಕೇರಳದ ಕ್ರೈಂ ಬ್ರ್ಯಾಂಚ್ ಪೊಲೀಸರು ನಟ ದಿಲೀಪ್ ಹಾಗೂ ಅವರ ಸಹೋದರನ ಮನೆಗಳ ಮೇಲೆ ದಾಳಿ ನಡೆಸಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಯುತ್ತಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಲು ನಟ ದಿಲೀಪ್ ಸಂಚು ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.

ನಟ ದಿಲೀಪ್ ವಿರುದ್ಧ ಪೊಲೀಸ್ ಗಂಭೀರ ಆರೋಪ!
ನಟಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಆರೋಪ ಎದುರಿಸುತ್ತಿದ್ದಾರೆ ಮಲಯಾಳಂ ನಟ ದಿಲೀಪ್. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳನ್ನು ಕೊಲ್ಲಲು ಐವರೊಂದಿಗೆ ಸೇರಿಕೊಂಡು ದಿಲೀಪ್ ಸಂಚು ರೂಪಿಸಿದ್ದರು ಎಂದು ಕೇರಳ ಪೊಲೀಸರು ಆರೋಪಿಸಿದ್ದಾರೆ. "ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಭೀರ ಅಪರಾಧದ ಆರೋಪಿಯೊಬ್ಬ ತನಿಖಾಧಿಕಾರಿಗಳ ಜೀವಕ್ಕೆ ಹಾನಿ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಾನೆ. ದಿಲೀಪ್ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಹಾಗಾಗಿ ಆರೋಪದ ಸತ್ಯಾಸತ್ಯತೆ ಹೊರಬರಲು ಆತನ ಕಸ್ಟಡಿಗೆ ಪಡೆದು ವಿಚಾರಣೆ ಮಾಡುವುದು ಅಗತ್ಯ." ಎಂದು ಕೇರಳದ ಕ್ರೈಂ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ.

ದಿಲೀಪ್ ಜಾಮೀನು ಅರ್ಜಿಗೆ ಖಾಕಿ ಆಕ್ಷೇಪ!
ನಟಿ ಲೈಂಗಿಕ ದೌರ್ಜನ್ಯದ ಆರೋಪ ಮಾತ್ರ ಅಲ್ಲ, ಇದರ ಜೊತೆಗೆ ತನಿಖಾಧಿಕಾರಿಯನ್ನು ಕೊಲ್ಲಲು ಮುಂದಾಗಿದ್ದ ಹೊಸ ಕೇಸ್ ಕೂಡ ಇವರ ಮೇಲಿದೆ. ಹೀಗಾಗಿ ದಿಲೀಪ್ ನಿರೀಕ್ಷಣಾ ಜಾಮೀನನ್ನು ಪಡೆಯಲು ಮುಂದಾಗಿದ್ದರು. ಆದರೆ ಈ ಬಗ್ಗೆ ಕೇರಳ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ನಿರೀಕ್ಷಣಾ ಜಾಮೀನು ನೀಡಿದರೆ, ಇದುವರೆಗೂ ತನಿಖೆ ನಡೆಸಿದ್ದೆಲ್ಲಾ ಹಾಳಾಗಿ ಹೋಗುತ್ತೆ ಎಂದು ಎರ್ನಾಕುಲಂನ ಕ್ರೈಂ ಬ್ರ್ಯಾಂಚ್ನ ಎಸ್ಪಿ ಎಂಪಿ ಮೋಹನಚಂದ್ರನ್ ತಿಳಿಸಿದ್ದಾರೆ. ಆದರೆ ಈಗ ದಿಲೀಪ್ ಅವರಿಗೆ ಜಾಮೀನು ಮಂಜೂರಾಗಿದೆ.

ಆ ನಟಿಗೆ ಮಲಯಾಳಂ ಚಿತ್ರರಂಗದ ಬೆಂಬಲ!
ಮಲಯಾಳಂ ನಟ ದಿಲೀಪ್ ಮೇಲೆ ಹೊಸ ಪ್ರಕರಣ ದಾಖಲಾಗುತ್ತಿದ್ದಂತೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆಗೆ ಒಳಗಾಗಿದ್ದ ನಟಿ ಪತ್ರ ಬರೆದಿದ್ದರು. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಂದಿನ ಘಟನೆ ಬಗ್ಗೆ ನಟಿ ವಿವರವಾಗಿ ಬರೆದುಕೊಂಡಿದ್ದಾರೆ. 'ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ನಾನು ಒಂಟಿಯಲ್ಲ ಎನಿಸಿದೆ' ಎಂದು ನಮೂದಿಸಿದ್ದರು. ಆ ನಟಿಗೆ ಇಡೀ ಮಲಯಾಳಂ ಚಿತ್ರರಂಗ ಬೆಂಬಲ ಸೂಚಿಸಿದೆ.


Click it and Unblock the Notifications











