ಪೊಲೀಸರ ಹತ್ಯೆಗೆ ಸಂಚು: ಬಂಧನದಿಂದ ತಪ್ಪಿಸಿಕೊಂಡ ಸ್ಟಾರ್ ನಟ
ಮಲಯಾಳಂ ಸ್ಟಾರ್ ನಟಿಯೊಬ್ಬರ ಮೇಲೆ ಅತ್ಯಾಚಾರ ಯತ್ನ ಹಾಗೂ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಲಯಾಳಂ ಸ್ಟಾರ್ ನಟ ದಿಲೀಪ್ ಮೇಲೆ ಪೊಲೀಸರು ಇತ್ತೀಚೆಗಷ್ಟೆ ಹೊಸದೊಂದು ಗುರುತರ ಆರೋಪವನ್ನು ಹೊರಿಸಿದ್ದರು.
ನಟಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರನ್ನು ಹತ್ಯೆ ಮಾಡಲು ನಟ ದಿಲೀಪ್ ಸಂಚು ರೂಪಿಸಿದ್ದ ಎಂದು ಪೊಲೀಸರು ದಿಲೀಪ್ ಮೇಲೆ ಆರೋಪ ಹೊರಿಸಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ ಈ ಪ್ರಕರಣದಲ್ಲಿ ನಟ ದಿಲೀಪ್ಗೆ ಅಲ್ಪ ನಿರಾಳತೆ ಲಭಿಸಿದೆ.
ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿರುವ ನ್ಯಾಯಾಲಯವು, ಪ್ರಸ್ತುತ ಪ್ರಕರಣದಲ್ಲಿ ನಟ ದಿಲೀಪ್ ಹಾಗೂ ಇತರ ನಾಲ್ವರು ಆರೋಪಿಗಳನ್ನು ಫೆಬ್ರವರಿ 2 ರ ವರೆಗೆ ಬಂಧಿಸದಂತೆ ಪೊಲೀಸರಿಗೆ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು ಡಿಜಿಟಲ್ ಸಾಕ್ಷ್ಯಗಳನ್ನು ಪರಾಮರ್ಶಿಸಿ ನ್ಯಾಯಾಲಯದ ಗಮನಕ್ಕೆ ತಂದ ಬಳಿಕವಷ್ಟೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಹೇಳಿದೆ.
ಪೊಲೀಸರನ್ನು ಕೊಲ್ಲಲು ಸಂಚು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಹಾಗೂ ಇತರ ಆರೋಪಿಗಳನ್ನು ಪೊಲೀಸರು ಸತತ 33 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಕಳೆದ ಭಾನುವಾರದಿಂದಲೂ ವಿಚಾರಣೆ ಜಾರಿಯಲ್ಲಿದೆ. ಜನವರಿ 27ರವರೆಗೆ ದಿಲೀಪ್ಗೆ ಬಂಧನದಿಂದ ರಕ್ಷಣೆಯನ್ನು ನ್ಯಾಯಾಲಯ ನೀಡಿತ್ತು. ಈಗ ಆ ರಕ್ಷಣೆಯನ್ನು ಫೆಬ್ರವರಿ 2ರ ವರೆಗೆ ಮುಂದೂಡಲಾಗಿದೆ.
ನಟ ದಿಲೀಪ್ ಆದೇಶದ ಮೇರೆಗೆ ಪಲ್ಸರ್ ಸುನಿ ಎಂಬಾತ ಹಾಗೂ ಇನ್ನು ಕೆಲವರು 2017 ರ ಫೆಬ್ರವರಿಯಲ್ಲಿ ಕೊಚ್ಚಿಯ ಬಳಿ ಚಿತ್ರೀಕರಣ ಮುಗಿಸಿ ಮನೆಗೆ ಹೋಗುತ್ತಿದ್ದ ಮಲಯಾಳಂ ನಟಿಯ ಕಾರನ್ನು ಹಿಂಬಾಲಿಸಿ ಆಕೆಯನ್ನು ತಮ್ಮ ಕಾರಿಗೆ ಎಳೆದುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದನ್ನು ವಿಡಿಯೋ ಸಹ ಮಾಡಿದ್ದರು. ಆ ವಿಡಿಯೋವನ್ನು ಆರೋಪಿಗಳು ನಟ ದಿಲೀಪ್ಗೆ ತಲುಪಿಸಿದ್ದರು. ಆದರೆ ಈ ಆರೋಪ ಇನ್ನೂ ಸಾಬೀತಾಗಿಲ್ಲ. ವಿಡಿಯೋಕ್ಕಾಗಿ ಕೊಚ್ಚಿ ಪೊಲೀಸರು ಕೆಲವು ದಿನಗಳ ಹಿಂದೆಯಷ್ಟೆ ದಿಲೀಪ್ ಮನೆಯ ಹುಡುಕಾಟ ನಡೆಸಿದರು. ಕೆಲವು ದಿನಗಳ ಹಿಂದೆಯಷ್ಟೆ ಪಲ್ಸರ್ ಸುನಿಯ ತಾಯಿ ಶೋಭನಾ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ನನ್ನ ಮಗ ಎಲ್ಲ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಲಿದ್ದಾನೆ. ನನ್ನ ಮಗನನ್ನು ದಿಲೀಪ್ ಸಿಕ್ಕಿ ಹಾಕಿಸಿದ್ದಾನೆ ಎಂದಿದ್ದರು.
ಇದರ ಹೊರತಾಗಿ, ದಿಲೀಪ್ಗೆ ಆತ್ಮೀಯರಾಗಿದ್ದ ನಿರ್ದೇಶಕ ಬಾಲಚಂದ್ರ ಕುಮಾರ್ ಸಹ ಸಾಕ್ಷ್ಯ ನುಡಿಯಲು ಮುಂದೆ ಬಂದಿದ್ದಾರೆ. ತಮಗೆ ನಟಿಯ ಅತ್ಯಾಚಾರ ವಿಷಯ ಮೊದಲೇ ಗೊತ್ತಿತ್ತೆಂದು, ದಿಲೀಪ್, ಪಲ್ಸರ್ ಸುನಿಗೆ ನಟಿಗೆ ತೊಂದರೆ ಕೊಡೆಂದು ಸೂಚಿಸಿದ್ದಾಗಿ ಹೇಳಿದ್ದ ಎಂದಿದ್ದಾರೆ. ದಿಲೀಪ್ ಪತ್ನಿಯ ಸಂಸ್ಥೆಯಲ್ಲಿ ತಾವು ಪಲ್ಸರ್ ಸುನಿಯನ್ನು ನೋಡಿದ್ದು, ದಿಲೀಪ್ ಬಳಿ ಆ ಘಟನೆಯ ವಿಡಿಯೋ ಇದ್ದುದನ್ನು ತಾನು ನೋಡಿದ್ದಾಗಿಯೂ ಬಾಲಚಂದ್ರ ಕುಮಾರ್ ಹೇಳಿದ್ದರು. ಕೆಲವು ಆಡಿಯೋ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದರು. ಬಾಲಚಂದ್ರ ಹೇಳಿಕೆಯ ಮೇರೆಗೆ ಪೊಲೀಸರು ದಿಲೀಪ್ ಮನೆಯ ಹುಡುಕಾಟ ನಡೆಸಿದ್ದರು. ಬಾಲಚಂದ್ರ ಕುಮಾರ್ ಹೇಳಿಕೆ ನೀಡಿದ ಬಳಿಕ ನಟ ದಿಲೀಪ್ ಹೈಕೋರ್ಟ್ನಲ್ಲಿ ಬಾಲಚಂದ್ರ ವಿರುದ್ಧ ಸುಲಿಗೆ, ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.


Click it and Unblock the Notifications











