'ಒಲವಿನ ಉಡುಗೊರೆ ಕೊಡಲೇನು' ಗಾಯಕ ಪಿ.ಜಯಚಂದ್ರನ್ ನಿಧನ...!
'ಭಾವ ಗಾಯಕನ್' ಎಂದೇ ಕರೆಯಲ್ಪಡುತ್ತಿದ್ದವರು ಮಲಯಾಳಂನ ಖ್ಯಾತ ಗಾಯಕ ಪಿ.ಜಯಚಂದ್ರನ್. ಮಲಯಾಳಂ, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಹದಿನಾರು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಖ್ಯಾತಿಯನ್ನು ಹೊಂದಿರುವ ಪಿ ಜಯಚಂದ್ರನ್ ನಿನ್ನೆ { ಗುರುವಾರ} ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ನಿನ್ನೆ ತಮ್ಮ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ಪಿ.ಜಯಚಂದ್ರನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ 07-54ಕ್ಕೆ ಪಿ ಜಯಚಂದ್ರನ್ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪತ್ನಿ ಲಲಿತಾ, ಮಗಳು ಲಕ್ಷ್ಮೀ ಮತ್ತು ಮಗ ದೀನನಾಥನ್ ಅವರನ್ನು ಪಿ.ಜಯಚಂದ್ರನ್ ಅಗಲಿದ್ದಾರೆ.

ಮಾರ್ಚ್ 3 1944ರಂದು ಕೊಚ್ಚಿಯಲ್ಲಿ ರವಿವರ್ಮಾ ಕೊಚಾನಿಯನ್ ತಂಪುರನ್ ಮತ್ತು ಪಲಿಯತ್ ಸುಬ್ರಕುಂಜಮ್ಮ ಅವರಿಗೆ ಜನಿಸಿದ ಜಯಚಂದ್ರನ್, ಇಳಯರಾಜ, ಎಂಎಂ ಕೀರವಾಣಿ, ವಿಜಯ್ ಭಾಸ್ಕರ್, ಎಂ ರಂಗ, ಎ.ಆರ್.ರೆಹಮಾನ್ ಸೇರಿ ಅನೇಕ ದಿಗ್ಗಜ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು. ಪ್ರೀತಿ, ಬಾಂಧವ್ಯ, ಭಕ್ತಿಗೀತೆಗಳಿಗೆ ಭಾವ ತುಂಬಿ ಹಾಡಿದ್ದರು. ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ, ಕೇರಳ ಸರ್ಕಾರದ ಪ್ರತಿಷ್ಠಿತ ಜೆ.ಸಿ.ಡೇನಿಯಲ್ ಪ್ರಶಸ್ತಿಯನ್ನು ಪಡೆದಿದ್ದ ಪಿ.ಜಯಚಂದ್ರನ್ ಐದು ಬಾರಿ ಕೇರಳ ಸರ್ಕಾರದಿಂದ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.
ಮಲಯಾಳಂ ಜೊತೆ ಕನ್ನಡದಲ್ಲಿ ಕೂಡ ಅನೇಕ ಹಾಡುಗಳಿಗೆ ಪಿ ಜಯಚಂದ್ರನ್ ಧ್ವನಿಯಾಗಿದ್ದರು. ಆ ಪೈಕಿ ರೆಬಲ್ ಸ್ಟಾರ್ ಅಂಬರೀಷ್ ಅಭಿನಯದ 'ಒಲವಿನ ಉಡುಗೊರೆ' ಚಿತ್ರದ 'ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದನು ಇದ ನಾನು' ಇವತ್ತು ಭಗ್ನ ಪ್ರೇಮಿಗಳ ಪಾಲಿನ ನೆಚ್ಚಿನ ಗೀತೆ. ಇನ್ನು ಅಮೃತ ಘಳಿಗೆ ಚಿತ್ರದ 'ಹಿಂದೂಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗು,ಕನ್ನಡ ಹಿರಿಮೆಯ ಮಗನಾಗು' ಹಾಡನ್ನು ಹಾಡಿದ್ದ ಪಿ ಜಯಚಂದ್ರನ್ ರಂಗನಾಯಕಿ ಚಿತ್ರದ 'ಮಂದಾರ ಪುಷ್ಪವು ನೀನು, ಸಿಂಧೂರ ಪ್ರತಿಮೆಯು ನೀನು' ಹಾಡನ್ನು ಕೂಡ ಹಾಡಿದ್ದರು.
ಇವಲ್ಲದೇ ಮಾನಸ ಸರೋವರ ಚಿತ್ರದ 'ಚಂದ ಚಂದ' ಹಂತಕನ ಸಂಚು ಚಿತ್ರದ 'ಜೀವನ ಸಂಜೀವನ' ಭಕ್ತ ಪ್ರಹ್ಲಾದ ಚಿತ್ರದ 'ಕಮಲ ನಯನ.. ಕಮಲ ವದನ'. ಪ್ರಾಯ ಪ್ರಾಯ ಚಿತ್ರದ 'ಭೂಮಿ ತಾಯಾಣೆ, ನೀ ಇಷ್ಟ ಕಣೆ' ಮಸಣದ ಹೂವು ಚಿತ್ರದ 'ಕನ್ನಡ ನಾಡಿನ ಕರಾವಳಿ' ಅಂತಹ ಸುಪ್ರಸಿದ್ದ ಹಾಡುಗಳನ್ನು ಹಾಡಿ ಕನ್ನಡಿಗರ ಹೃದಯವನ್ನು ಗೆದ್ದಿದ್ದರು ಪಿ.ಜಯಚಂದ್ರನ್.


Click it and Unblock the Notifications











