ಲೈಂಗಿಕ ಕಿರುಕುಳ ಪ್ರಕರಣ.. 6 ಮಂದಿಗೆ 20 ವರ್ಷ ಜೈಲು ಶಿಕ್ಷೆ; ಸಂತ್ರಸ್ತ ನಟಿ ಬಹಿರಂಗ ಪತ್ರ
ಮಲಯಾಳಂ ನಟಿ ಕಿರುಕುಳ ಪ್ರಕರಣದಲ್ಲಿ 8 ವರ್ಷಗಳ ಬಳಿಕ 6 ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಮೊನ್ನೆ(ಡಿಸೆಂಬರ್ 12) ಎರ್ನಾಕುಲಂ ಸೆಷನ್ಸ್ ಕೋರ್ಟ್ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ 6 ಮಂದಿಗೆ 20 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ. ತಲಾ 50 ಸಾವಿರ ರೂ. ದಂಡ ವಿಧಿಸಿದೆ. ಈ ಬಗ್ಗೆ ಸಂತ್ರಸ್ತ ನಟಿ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ 17, 2017ರಂದು ಕೊಚ್ಚಿನ್ ನಗರದ ಹೊರವಲಯದಲ್ಲಿ ಮಲಯಾಳಂ ನಟಿಯನ್ನು ಕಿಡಿಗೇಡಿಗಳು ಅಪಹರಿಸಿ ಚಲಿಸುತ್ತಿದ್ದ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಅದನ್ನು ವೀಡಿಯೋ ಮಾಡಿ ಬೆದರಿಸಿದ್ದರು. ಪ್ರಕರಣದಲ್ಲಿ ಹಲವು ಅಪರಾಧಿಗಳು ಹೆಸರು ಕೇಳಿಬಂದಿತ್ತು. ಮುಖ್ಯವಾಗಿ ಮಲಯಾಳಂ ನಟ ದಿಲೀಪ್ ಖುಲಾಸೆಯಾಗಿದ್ದರು. ಇನ್ನುಳಿದಂತೆ ಪಲ್ಸರ್ ಸುನಿ ಸೇರಿ 6 ಮಂದಿಗೆ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಈ ಬಗ್ಗೆ ಸಂತ್ರಸ್ತ ನಟಿ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ.

ಡಿಸೆಂಬರ್ 12, 2025(ತೀರ್ಪು ಬಂದ ದಿನ)
"8 ವರ್ಷ, 9 ತಿಂಗಳು ಮತ್ತು 23 ದಿನಗಳ ನಂತರ, ಬಹಳ ದೀರ್ಘ ಮತ್ತು ನೋವಿನ ಪ್ರಯಾಣದ ಕೊನೆಯಲ್ಲಿ ನಾನು ಅಂತಿಮವಾಗಿ ಒಂದು ಸಣ್ಣ ಬೆಳಕಿನ ಕಿರಣವನ್ನು ನೋಡಿದೆ. 6 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ, ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ" ಎಂದು ಸಂತ್ರಸ್ತ ನಟಿ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ವಿಚಾರಣೆ, ತಾವು ಹೇಳಿದ್ದೆಲ್ಲಾ ಕಟ್ಟುಕಥೆ ಎಂದು ವಾದಿಸಿದವರ ಬಗ್ಗೆ ಆಕೆ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯಾಯಕ್ಕಾಗಿ ನಡೆಸಿದ ಹೋರಾಟವನ್ನು ನೆನಪಿಸಿಕೊಂಡಿದ್ದಾರೆ. "ನನ್ನ ನೋವನ್ನು ಸುಳ್ಳು ಹಾಗೂ ಈ ಪ್ರಕರಣವನ್ನು ಕಟ್ಟುಕಥೆ ಎಂದು ಕರೆದವರಿಗೆ ಈ ಕ್ಷಣವನ್ನು ಸಮರ್ಪಿಸಲಾಗಿದೆ. ಇಂದು ನೀವು ಶಾಂತಿಯಿಂದ ಇದ್ದೀರಿ ಎಂದು ನಾನು ಭಾವಿಸುತ್ತೇನೆ" ನಟಿ ಬರೆದುಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ವಿಚಾರದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಈ ಬಗ್ಗೆ ಕೂಡ ಸಂತ್ರಸ್ತ ನಟಿ ಪ್ರತಿಕ್ರಿಯಿಸಿದ್ದಾರೆ. "ಎ1 ಆರೋಪಿ ನನ್ನ ವೈಯಕ್ತಿಕ ಚಾಲಕ ಎಂದು ಇನ್ನೂ ಹೇಳುತ್ತಿರುವವರಿಗೆ, ಅದು ಸಂಪೂರ್ಣವಾಗಿ ಸುಳ್ಳು. ಆತ ನನ್ನ ಚಾಲಕನಲ್ಲ, ನನ್ನ ಉದ್ಯೋಗಿಯಲ್ಲ, ನನಗೆ ತಿಳಿದಿರುವ ವ್ಯಕ್ತಿಯಲ್ಲ. ಅವನು 2016ರಲ್ಲಿ ನಾನು ಕೆಲಸ ಮಾಡಿದ ಚಿತ್ರಕ್ಕೆ ಚಾಲಕನಾಗಿ ಕೆಲಸ ಮಾಡಿದ್ದ. ಒಮ್ಮೆ ಅಥವಾ ಎರಡು ಬಾರಿ ಮಾತ್ರ ಭೇಟಿಯಾಗಿದ್ದೆ. ಬಳಿಕ ಈ ಘಟನೆ ಸಂಭವಿಸುವವರೆಗೆ ಭೇಟಿಯಾಗಿರಲಿಲ್ಲ" ಎಂದು ನಟಿ ಪುನರುಚ್ಚರಿಸಿದ್ದಾರೆ.
ಈ ಹೋರಾಟದಲ್ಲಿ ಜೊತೆಗೆ ನಿಂತವರಿಗೆ ನಟಿ ಧನ್ಯವಾದ ತಿಳಿಸಿದ್ದಾರೆ. "ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ನಾನು ನೋವಿನಿಂದ ಒಂದ ವಿಷಯ ಅರ್ಥವಾಯಿತು. 'ಈ ದೇಶದ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ ಸಮಾನವಾಗಿ ಪರಿಗಣಿಸಲಾಗುವುದಿಲ್ಲ'. ಕೊನೆಗೂ ಈ ತೀರ್ಪು ಮಾನವ ತೀರ್ಪು ನಿರ್ಧಾರಗಳನ್ನು ಎಷ್ಟು ಬಲವಾಗಿ ರೂಪಿಸುತ್ತದೆ ಎಂಬುದನ್ನು ನನಗೆ ತಿಳಿಯಿತು. ಪ್ರತಿಯೊಂದು ನ್ಯಾಯಾಲಯವೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ನನಗೆ ತಿಳಿದಿದೆ. ಈ ದೀರ್ಘ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ನಟಿ ಬರೆದುಕೊಂಡಿದ್ದಾರೆ.
ಇನ್ನು ಪ್ರಕರಣದಲ್ಲಿ ಖುಲಾಸೆಯಾದ ನಟ ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಕೂಡ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ನ್ಯಾಯ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದಿದ್ದಾರೆ. "ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಈ ಪ್ರಕರಣದಲ್ಲಿ, ಸಂತ್ರಸ್ತೆಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ಅಪರಾಧ ಎಸಗಿದವರಿಗೆ ಮಾತ್ರ ಶಿಕ್ಷೆಯಾಗಿದೆ. ಈ ಹೇಯ ಕೃತ್ಯವನ್ನು ಯೋಜಿಸಿ ಸಕ್ರಿಯಗೊಳಿಸಿದ ಮನಸ್ಸು, ಅದು ಯಾರೇ ಆಗಿರಲಿ, ಇನ್ನೂ ಮುಕ್ತವಾಗಿ ಓಡಾಡಲು ಬಿಟ್ಟಿರುವುದು ಭಯಾನಕ. ಈ ಅಪರಾಧದ ಹಿಂದಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ನ್ಯಾಯವು ಪೂರ್ಣಗೊಳ್ಳುತ್ತದೆ. ಇದು ಕೇವಲ ಒಬ್ಬ ಬದುಕುಳಿದವನಿಗೆ ಅಲ್ಲ. ಇದು ಪ್ರತಿಯೊಬ್ಬ ಮಹಿಳೆ, ಪ್ರತಿಯೊಬ್ಬ ಮನುಷ್ಯನಿಗೆ, ಧೈರ್ಯದಿಂದ, ತಲೆಯೆತ್ತಿ, ತಮ್ಮ ಕೆಲಸದ ಸ್ಥಳಗಳಲ್ಲಿ, ಬೀದಿಗಳಲ್ಲಿ ಮತ್ತು ಜೀವನದಲ್ಲಿ ಭಯವಿಲ್ಲದೆ ನಡೆಯಲು ಸಾಧ್ಯವಾಗುತ್ತದೆ" ಎಂದಿದ್ದರು.


Click it and Unblock the Notifications











