ಚಿತ್ರೀಕರಣ ವೇಳೆ ಹೃದಯಾಘಾತ; 'ಸುಫಿಯಮ್ ಸುಜತಾಯಂ' ನಿರ್ದೇಶಕ ನಿಧನ
ಹೃದಯಾಘಾತ ಸಂಭವಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಂನ ಖ್ಯಾತ ನಿರ್ದೇಶಕ ನರಣಿಪುಳ ಶಾನವಾಸ್ ಬುಧವಾರ ಸಂಜೆ (ಡಿ.23) ಕೊನೆಯುಸಿರೆಳೆದಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ದೇಶಕ ಶಾನವಾಸ್, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ನರಣಿಪುಳ ಶಾನವಾಸ್ ನಿಧನಕ್ಕೆ ಸಿನಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಡಿಸೆಂಬರ್ 21 ರಂದು ಪಾಲಕ್ಕಾಡ್ ನ ಅಟ್ಟಪಾಡಿಯಲ್ಲಿ 'ಗಾಂಧಿರಾಜನ್' ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ನಿರ್ದೇಶಕ ನರಣಿಪುಳ ಶಾನವಾಸ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಕೊಯಮತ್ತೂರಿನ ಕೆಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ತೀರ ಗಂಭೀರವಾಗಿತ್ತು.
ವರದಿಗಳ ಪ್ರಕಾರ, ನರಣಿಪುಳ ಶಾನವಾಸ್ ಅವರಿಗೆ ಹೃದಯ ಆಘಾತ ಆದ ನಂತರ ದೇಹಕ್ಕೆ ರಕ್ತವನ್ನು ಪಂಪ್ ಮಾಡುವುದು ನಿಂತಿದೆ. ಈ ಕಾರಣದಿಂದ ಮೆದುಳಿನ ರಕ್ತಸ್ರಾವ ಸಂಭವಿಸಿದ್ದು, ಮೆದುಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಮೆದುಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವೈದ್ಯರು ಘೋಷಿಸುತ್ತಿದ್ದಂತೆ ನರಣಿಪುಳ ಶಾನವಾಸ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟ-ನಿರ್ಮಾಪಕ ವಿಜಯ್ ಬಾಬು ''ಶಾನವಾಸ್ ಇನ್ನೂ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಅವರ ಹೃದಯ ಇನ್ನೂ ಬಡಿಯುತ್ತಿದೆ. ಅವರಿಗೆ ಎಲ್ಲರೂ ಪ್ರಾರ್ಥನೆ ಸಲ್ಲಿಸಿ. ಏನಾದರೂ ಪವಾಡ ಆಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ದಯವಿಟ್ಟು ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಬೇಡಿ'' ಎಂದು ವಿನಂತಿ ಮಾಡಿಕೊಂಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾನವಾಸ್ ಕೊನೆಯುಸಿರೆಳೆದಿದ್ದಾರೆ. ನರಣಿಪುಳ ಶಾನವಾಸ್ ಅವರು 2015 ರಲ್ಲಿ ಬಿಡುಗಡೆಯಾದ 'ಕರಿ' ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಶಾನವಾಸ್ ನಿರ್ದೇಶನದ 'ಸುಫಿಯಮ್ ಸುಜತಾಯಂ' ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾ ಲಾಕ್ ಡೌನ್ ಸಮಯದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರದಲ್ಲಿ ನಾಯಕಿಯಾಗಿ ಅದಿತಿ ರಾವ್ ಹೈದರಿ ಕಾಣಿಸಿಕೊಂಡಿದ್ದಾರೆ.
ಶಾನವನ್ ನಿಧನಕ್ಕೆ ಸಂತಾಪ ಸೂಚಿಸಿರುವ ನಟಿ ಅದಿತಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. 'ನಿಮ್ಮ ಆತ್ಮವೂ ಸುಫಿಯಮ್ ಸುಜತಾಯಂನಲ್ಲಿ ನಮಗಾಗಿ ರಚಿಸಿದಷ್ಟೇ ಸುಂದರವಾದ ಸ್ಥಳ ಕಂಡುಕೊಳ್ಳುತ್ತೆ ಎಂದು ನಾನು ಭಾವಿಸಿದ್ದೇನೆ. ತುಂಬಾ ಬೇಗ ನಮ್ಮನ್ನು ಬಿಟ್ಟು ಹೋದಿರಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ' ಎಂದು ಹೇಳಿದ್ದಾರೆ.


Click it and Unblock the Notifications











