ಮಲಯಾಳಂ ಚಿತ್ರ ನಿರ್ದೇಶಕ ಅಶೋಕನ್ ಇನ್ನಿಲ್ಲ

ಮಲಯಾಳಂ ಚಿತ್ರರಂಗದ ಅಶೋಕನ್ ಅಕ ರಾಮನ್ ಅಶೋಕ್ ಕುಮಾರ್ ( 61 ) ಎಂಬ ಖ್ಯಾತ ಚಿತ್ರ ನಿರ್ದೇಶಕ ನಿನ್ನೆ ( ಸೆಪ್ಟೆಂಬರ್ 25 ) ಕೇರಳದ ವರ್ಕಲದಲ್ಲಿರುವ ತಮ್ಮ ಸ್ವಗೃಹದಲ್ಲಿ ಅಸುನೀಗಿದ್ದಾರೆ. ಕಳೆದೊಂದು ತಿಂಗಳಿನಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಶೋಕನ್ ಇತ್ತೀಚೆಗಷ್ಟೇ ಸಿಂಗಾಪುರದಿಂದ ಚಿಕಿತ್ಸೆಯನ್ನು ಮುಗಿಸಿಕೊಂಡು ಕೇರಳಕ್ಕೆ ಮರಳಿದ್ದರು.
ನಿರ್ದೇಶಕ ಶಶಿಕುಮಾರ್ ಅವರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸವನ್ನು ಆರಂಭಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಅಶೋಕನ್ 25 ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸಿದ್ದರು. ಆನಂತರ 1989ರಲ್ಲಿ ವರ್ಣಂ ಎಂಬ ಚಿತ್ರವನ್ನು ನಿರ್ದೇಶಿಸಿದರು. ವರ್ಣಂ ಚಿತ್ರ ಜಯರಾಂ, ಸುರೇಶ್ ಗೋಪಿ, ರಂಜನಿ ಹಾಗೂ ಮೀನಾ ರೀತಿಯ ಹಲವಾರು ದೊಡ್ಡ ತಾರಾಬಳಗವನ್ನೇ ಹೊಂದಿತ್ತು ಹಾಗೂ ಈ ಚಿತ್ರ ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು.
ನಂತರ 1990ರಲ್ಲಿ ನಿರ್ದೇಶಕ ತಹ ಜತೆ ಕೈಜೋಡಿಸಿ ಸಹ ನಿರ್ದೇಶಕನಾಗಿ ಸಾಂದರಮ್ ಚಿತ್ರವನ್ನು ಅಶೋಕನ್ ನಿರ್ದೇಶಿಸಿದ್ದರು. ಈ ಜೋಡಿ ಮತ್ತೊಮ್ಮೆ ಮುಂದಿನ ವರ್ಷದಲ್ಲಿ ಒಂದಾಗಿ 'ಮೂಕ್ಕಿಲ್ಲ ರಾಜ್ಯದು' ಚಿತ್ರವನ್ನು ನೀಡಿತು. ಮತ್ತೆ 1993ರಲ್ಲಿ ಏಕಾಂಗಿಯಾಗಿ ನಿರ್ದೇಶನ ಮಾಡಿದ ಅಶೋಕನ್ ಆಚಾರ್ಯನ್ ಎಂಬ ಹಿಟ್ ಚಿತ್ರ ನಿರ್ದೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆನಂತರ ಸಿಂಗಾಪುರಕ್ಕೆ ಪಯಣ ಬೆಳೆಸಿದ ಅಶೋಕನ್ ವ್ಯವಹಾರಗಳತ್ತ ಬ್ಯುಸಿಯಾದರು. ಆದರೂ ಸಹ ಚಿತ್ರ ನಿರ್ಮಾಣದತ್ತ ತಮ್ಮ ಒಲವನ್ನು ಬಿಡದ ಅಶೋಕನ್ 'ಕಾಣಪ್ಪುರಂಗಳ್' ಎಂಬ ಟೆಲಿಫಿಲ್ಮ್ ನಿರ್ದೇಶಿಸಿದರು ಹಾಗೂ ಈ ಚಿತ್ರಕ್ಕೆ ಕೇರಳ ರಾಜ್ಯ ಪ್ರಶಸ್ತಿ ( ಅತ್ಯುತ್ತಮ ಟೆಲಿಫಿಲ್ಮ್ ) ಒಲಿದು ಬಂದಿತ್ತು.


Click it and Unblock the Notifications











