ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಶಿವನ್ ನಿಧನ
ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮಲಯಾಳಂನ ಖ್ಯಾತ ಛಾಯಾಗ್ರಾಹಕ ಮತ್ತು ನಿರ್ದೇಶಕ ಶಿವನ್ ಗುರುವಾರ (ಜೂನ್ 24) ಕೇರಳದ ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. 89 ವರ್ಷದ ಶಿವನ್ ಹೃದಯಾಘಾತದಿಂದ ನಿಧನಹೊಂದಿದ್ದಾರೆ ಎಂದು ವರದಿಯಾಗಿದೆ.
ಶಿವನ್ ಹಠಾತ್ ಸಾವು ಮಲಯಾಳಂ ಚಿತ್ರರಂಗಕ್ಕೆ ಆಘಾತ ತಂದಿದೆ. ಖ್ಯಾತ ಛಾಯಾಗ್ರಾಹಕನ ನಿಧನಕ್ಕೆ ಇಡೀ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ. ಶಿವನ್ ಮೂವರು ಮಕ್ಕಳಾದ ಸಂತೋಷ್, ಸಂಗೀತ್ ಮತ್ತು ಸಂಜೀವ್ ಅವರನ್ನು ಅಗಲಿದ್ದಾರೆ.
ತಂದೆಯ ನಿಧನ ಬಗ್ಗೆ ಪುತ್ರ ಸಂಗೀತ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು ಭಾವುಕರಾಗಿದ್ದಾರೆ. "ಪ್ರತಿಯೊಂದಕ್ಕೂ ಧನ್ಯವಾದಗಳು. ನೀವಿಲ್ಲದ ಈ ಪ್ರಪಂಚವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮೋಡ ಮತ್ತು ನಕ್ಷತ್ರಗಳ ಜೊತೆ ಇದ್ದು ಅಲ್ಲಿಂದನೆ ನೀವು ನಮಗೆ ನೀಡುವ ನೀಡುವ ಮಾರ್ಗದರ್ಶನದಲ್ಲೇ ನಾವು ನಡೆಯುತ್ತೇವೆ" ಎಂದು ಬರೆದುಕೊಂಡಿದ್ದಾರೆ.

ಶಿವನ್ ಮೊದಲ ಸರ್ಕಾರಿ ಪ್ರೆಸ್ ಛಾಯಾಗ್ರಾಹಕರಾಗಿದ್ದರು. ಬಳಿಕ ಸಿನಿಮಾರಂಗಕ್ಕೆ ಕಾಲಿಟ್ಟ ಶಿವನ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿಗಳಿಸಿದ್ದರು. ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದರು. 1959ರಲ್ಲಿ ಶಿವನ್ ಸ್ಟುಡಿಯೋವನ್ನು ಸ್ಥಾಪನೆ ಮಾಡಿದ್ದರು.
ಅವರ ಪ್ರಸಿದ್ಧ ಚಿತ್ರಗಳಲ್ಲಿ ಅಭಯಮ್, ಯಗಮ್, ಕೆಶು, ಒರು ಯಾತ್ರಾ, ಕೊಚು ಕೊಚು ಮೊಹಂಗಲ್ ಸೇರಿದಂತೆ ಅನೇಕ ಸಿನಿಮಾಗಳಿವೆ. ಶಿವನ್ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ಸಂತಾಪ ಸೂಚಿಸಿದ್ದಾರೆ. ಇನ್ನು ಪೃಥ್ವಿರಾಜ್ ಸುಕುಮಾರನ್ ಟ್ವೀಟ್ ಮಾಡಿ, "ಆತ್ಮಕ್ಕೆ ಶಾಂತಿ ಸಿಗಲಿ ಅಂಕಲ್" ಎಂದಿದ್ದಾರೆ.


Click it and Unblock the Notifications











