ಚಿತ್ರರಂಗಕ್ಕೆ ಮತ್ತೊಂದು ಆಘಾತ: ಮಲಯಾಳಂನ ಹಾಸ್ಯ ಚತುರ, ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ
ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಹರೀಶ್ ರೈ.. ಎಂ.ಎಸ್.ಉಮೇಶ್..
ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ. ಹೀಗಿರುವಾಗ ಇಂದು (ಡಿಸೆಂಬರ್ 20) ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಮಲಯಾಳಂ ಚಿತ್ರರಂಗದ ಮೂಲಕ ಎಲ್ಲರನ್ನೂ ನಗಿಸಿ, ಚಿಂತನೆಗೆ ದೂಡಿದ್ದ ನಟ, ನಿರ್ದೇಶಕ ಮತ್ತು ಬರಹಗಾರ ಶ್ರೀನಿವಾಸನ್ ನಿಧನರಾಗಿದ್ದಾರೆ.

ವಿಡಂಬನಾತ್ಮಕವಾದ ನಿರೂಪಣೆ.. ತೀಕ್ಷ್ಣ ಹಾಸ್ಯ ಮತ್ತು ಸಾಮಾಜಿಕ ಚಿಂತನೆಗೆ ಹೆಸರುವಾಸಿಯಾಗಿದ್ದ ಶ್ರೀನಿವಾಸ್, ಸಾಮಾನ್ಯ ಜನರ ಧ್ವನಿಯಾಗಿದ್ದರು. ಗಂಭೀರವಾದ ಸಂದೇಶವನ್ನು ಹಾಸ್ಯದ ಮೂಲಕವೇ ಹೇಳಿ ಕೇರಳಿಗರ ಹೃದಯ ಗೆದ್ದಿದ್ದರು.
ಕಳೆದ 48 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಕಲಾ ಸೇವೆಯನ್ನು ಮಾಡಿದ್ದ ಶ್ರೀನಿವಾಸನ್, ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಚಿತ್ರರಂಗದಿಂದ ದೂರ ಇದ್ದರು. ಈ ಹಿಂದೆ ಹೃದಯಾಘಾತವಾಗಿ ಅದರಿಂದ ಚೇತರಿಸಿಕೊಂಡಿದ್ದ ಶ್ರೀನಿವಾಸನ್ ಅವರ ಆರೋಗ್ಯ ಇಂದು (ಡಿಸೆಂಬರ್ 20 ) ಬೆಳ್ಳಗ್ಗೆ ಪತ್ನಿ ಜೊತೆ ಡಯಾಲಿಸಿಸ್ಗಾಗಿ ತೆರಳುತ್ತಿದ್ದಾಗ ಹದಗೆಟ್ಟಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
1956ರ ಏಪ್ರಿಲ್ 6ರಂದು ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ ಜನಿಸಿದ್ದ ಶ್ರೀನಿವಾಸನ್ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಆದರೆ ಆ ನಂತರ ಬಣ್ಣದ ಸೆಳೆತಕ್ಕೆ ಸಿಲುಕಿ ಚೆನ್ನೈನಲ್ಲಿ ಫಿಲ್ಮ್ ಆ್ಯಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ಸಿನಿಮಾ ಸಂಬಂಧಿತ ತರಬೇತಿಯನ್ನು ಪಡೆದಿದ್ದರು.
1976ರಲ್ಲಿ ಪಿ. ಎ. ಬ್ಯಾಕರ್ ನಿರ್ದೇಶನದ ''ಮಣಿಮುಳಗಕ್ಕಂ'' ಚಿತ್ರದ ಮೂಲಕ ನಟನಾ ವೃತ್ತಿಯನ್ನು ಆರಂಭ ಮಾಡಿದ್ದ ಶ್ರೀನಿವಾಸನ್, 1979ರಲ್ಲಿ ತೆರೆಗೆ ಬಂದ ''ಸಂಘಗಾನಂ'' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅರವಿಂದನ್, ಕೆ.ಜಿ. ಜಾರ್ಜ್ ಸೇರಿದಂತೆ ಅನೇಕ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ್ದ ಶ್ರೀನಿವಾಸನ್, 1984ರಲ್ಲಿ ಪ್ರಿಯದರ್ಶನ್ ನಿರ್ದೇಶನದ''ಓಡರುತಮ್ಮಾವ ಆಳರಿಯಂ'' ಚಿತ್ರದೊಂದಿಗೆ ತಮ್ಮ ಬರವಣಿಗೆ ಶುರು ಮಾಡಿದರು. ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು.
''ನಾಡೋಡಿಕಟ್ಟು''.. ''ಪಟ್ಟಣಪ್ರವೇಶಂ''.. ''ವರವೇಲುಪು''.. ''ಸಂದೇಶಂ''.. ''ಮಿಥುನಂ''.. ''ಮಳಯೆತ್ತುಂ ಮುನ್ಪೆ''.. ''ಅಳಗಿಯ ರಾವಣನ್''.. ''ಕಥಾ ಪರಿಸುಂಬೋಲ್''.. ಹೀಗೆ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟನಾಗಿ ಬರಹಗಾರನಾಗಿ ಕೆಲಸವನ್ನು ಶ್ರೀನಿವಾಸನ್ ಮಾಡಿದ್ದರು.
''ಅರಂ + ಅರಂ = ಕಿನ್ನರಂ''.. ''ಪೊನ್ಮುಟ್ಟಾಯಿಡುವನ್ನ ತರವು''.. ''ಮಳ ಪೆಯ್ಯುನ್ನು ಮದ್ದಳಂ ಕೊಟ್ಟನ್ನು''.. ''ಅರ್ಥಂ''.. ಮತ್ತು ''ಚಿತ್ರಂ'' ಇವರು ಅಭಿನಯಿಸಿರುವ ಕೆಲ ಜನಪ್ರಿಯ ಹಾಸ್ಯ ಚಿತ್ರಗಳು. ಮಲಯಾಳಂ ನಟ ಮುಖೇಶ್ ಜೊತೆ ಇವರು ಅತೀ ಹೆಚ್ಚು ತೆರೆ ಹಂಚಿಕೊಂಡಿದ್ದರು.
ನಿರ್ದೇಶಕರಾಗಿಯೂ ಕೂಡ ಶ್ರೀನಿವಾಸನ್ ಗೆದ್ದಿದ್ದರು. 1989ರಲ್ಲಿ ''ವಡಕ್ಕು ನೊಕ್ಕಿಯಂತ್ರಮ್'' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸನ್ 1998ರಲ್ಲಿ ''ಚಿಂತಾವಿಷ್ಟಾಯಾಯ ಶ್ಯಾಮಲ'' ಚಿತ್ರವನ್ನು ನಿರ್ದೇಶಿಸಿದ್ದರು. ಈ ಎರಡು ಚಿತ್ರಗಳಲ್ಲಿ ತಾವೇ ಪ್ರಮುಖ ಪಾತ್ರವನ್ನು ಕೂಡ ನಿರ್ವಹಿಸಿದ್ದರು. ''ಚಿಂತಾವಿಷ್ಟಾಯಾಯ ಶ್ಯಾಮಲ'' ಚಿತ್ರಕ್ಕೆ ಕೇರಳ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು. ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಇಷ್ಟೇ ಅಲ್ಲ ಡಬ್ಬಿಂಗ್ ಕಲಾವಿದರಾಗಿ ಕೂಡ ಶ್ರೀನಿವಾಸನ್ ಹೆಸರು ಮಾಡಿದ್ದರು.
ಹೀಗೆ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಹೆಸರು ಮಾಡಿದ್ದ ಶ್ರೀನಿವಾಸನ್ ಪತ್ನಿ ವಿಮಲಾ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ಇಬ್ಬರು ಮಕ್ಕಳು ವಿನೀತ್ ಹಾಗೂ ಧ್ಯಾನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ವಿನೀತ್ ತಮ್ಮ ತಂದೆಯಂತೆಯೇ ನಟನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ನಿರ್ದೇಶನದಲ್ಲಿ 2022ರಲ್ಲಿ ತೆರೆಗೆ ಬಂದ ''ಹೃದಯಂ'' ಚಿತ್ರಕ್ಕೆ ಕೇರಳದ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇನ್ನು ಶ್ರೀನಿವಾಸನ್ ಅವರ ಮತ್ತೊಬ್ಬ ಮಗ ಧ್ಯಾನ್ ಕೂಡ ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ.


Click it and Unblock the Notifications











