L2: ಎಂಪುರಾನ್ ವಿವಾದ, ಬಹಿರಂಗ ಕ್ಷಮೆ ಕೇಳಿದ ಮೋಹನ್ ಲಾಲ್ ; 17 ದೃಶ್ಯಗಳಿಗೆ ಕತ್ತರಿ..!
ಭಾರತದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿಯನ್ನು ನೀಡಲು ಸೆನ್ಸಾರ್ ಮಂಡಳಿ ಇದೆ. ಯಾವುದೇ ಸಿನಿಮಾವನ್ನು ವೀಕ್ಷಿಸಿ, ಅದರ ಪ್ರದರ್ಶನಕ್ಕೆ ಅನುಮತಿಯನ್ನು ನೀಡುವುದು, ತಿರಸ್ಕರಿಸುವುದು ಸೆನ್ಸಾರ್ ಮಂಡಳಿಯ ಕರ್ತವ್ಯ. ಒಂದು ವೇಳೆ ಸೆನ್ಸಾರ್ ಮಂಡಳಿ ಅನುಮತಿಯನ್ನು ನೀಡದಿದ್ದರೆ ಚಿತ್ರ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಬಹುದು.
ಆದರೆ ಈಗೀಗ ಸೆನ್ಸಾರ್ ಮಂಡಳಿಯ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಹ ಬೆಳವಣಿಗೆಗಳು ನಡೆಯುತ್ತಿವೆ. ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಮೋಹನ್ ಲಾಲ್ ಅಭಿನಯದ L 2 ಎಂಪುರಾನ್ ಸುತ್ತ ಎದ್ದಿರುವ ವಿವಾದದ ಹುತ್ತ ಇದಕ್ಕೆ ಮತ್ತೊಂದು ಉದಾಹರಣೆ.

ಹೌದು, ಎಂಪುರಾನ್ ಬಿಡುಗಡೆಯಾದ ನಂತರ ವಿವಾದ ಶುರುವಾಗಿದೆ. ಚಿತ್ರದ ಹೆಸರಿನಲ್ಲಿ ರಾಜಕೀಯ ಆರಂಭವಾಗಿದೆ. ಬಿಜೆಪಿ ಎಂಪುರಾನ್ ಹಿಂದೂ ವಿರೋಧಿ ಚಿತ್ರ ಎಂದು ಆರೋಪ ಮಾಡುತ್ತಿದೆ. ಕಾಂಗ್ರೆಸ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎನ್ನುತ್ತಿದೆ. ದಿನದಿಂದ ದಿನಕ್ಕೆ ವಿವಾದ ಹೆಚ್ಚಾಗುತ್ತಿದೆ. ಇದರಿಂದ ಬೇಸತ್ತು ಗುಜರಾತ್ ಗಲಭೆಗಳ ಉಲ್ಲೇಖ ಇರುವ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮುಂದಾಗಿದ್ದಾರೆ. ಇದೆಲ್ಲವನ್ನು ಕಂಡು ಮೋಹನ್ ಲಾಲ್ ಬಹಿರಂಗವಾಗಿ ಕ್ಷಮೆಯನ್ನು ಕೇಳಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋಹನ್ ಲಾಲ್ ಎಲ್ 2 ಎಂಪುರಾನ್ ಚಿತ್ರದಲ್ಲಿನ ಕೆಲವು ರಾಜಕೀಯ ಮತ್ತು ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಿಗೆ ಹಿತೈಶಿಗಳಿಗೆ ಬಹಳ ನಿರಾಶೆಯನ್ನುಂಟು ಮಾಡಿದೆ ಎನ್ನುವ ವಿಚಾರ ನನಗೆ ಗೊತ್ತಾಗಿದೆ. ಒಬ್ಬ ಕಲಾವಿದನಾಗಿ ನನ್ನ ಯಾವುದೇ ಚಿತ್ರದಲ್ಲಿ ರಾಜಕೀಯ ಚಳುವಳಿ, ಸಿದ್ದಾಂತ, ಅಥವಾ ಧರ್ಮದ ಬಗ್ಗೆ ದ್ವೇಷ ಹೊಂದಿರಬಾರದೆಂದು ಖಚಿತ ಪಡಿಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ನಾನು ಮತ್ತು ಎಂಪುರಾನ್ ತಂಡ ನಿಮ್ಮೆಲ್ಲರಿಗೆ ಉಂಟಾದ ಈ ಭಾವನಾತ್ಮಕ ಯಾತನೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ ಮತ್ತು ಚಿತ್ರಕ್ಕೆ ಕೆಲಸ ಮಾಡಿದ ನಾವೆಲ್ಲರು ನಮ್ಮ ಜವಾಬ್ಧಾರಿ ಅರಿತುಕೊಂಡು ನೋವು ನೀಡಿದ, ಭಾವನೆಗಳಿಗೆ ಧಕ್ಕೆ ತಂದ ಭಾಗಗಳನ್ನು ಚಿತ್ರದಿಂದ ತೆಗೆದು ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಮೋಹನ್ ಲಾಲ್ ಬರೆದುಕೊಂಡಿದ್ದಾರೆ.
ಮುಂದುವರೆದು ಕಳೆದ ನಾಲ್ಕು ದಶಕಗಳಿಂದ ನಾನು ನಿಮ್ಮಲ್ಲಿ ಒಬ್ಬನಾಗಿ ಬದುಕಿದ್ದೇನೆ, ನಿಮ್ಮ ಪ್ರೀತಿ ಮತ್ತು ನಂಬಿಕೆಯೇ ನನ್ನ ಬಹುದೊಡ್ಡ ಶಕ್ತಿ ಎಂದು ಹೇಳಿದ್ದಾರೆ ಮೋಹನ್ ಲಾಲ್. ಇನ್ನು ಈ ಹಿಂದೆ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಕೂಡ 17 ದೃಶ್ಯಗಳನ್ನು ಚಿತ್ರದಿಂದ ತೆಗೆದು ಹಾಕುವುದಾಗಿ ಹೇಳಿದ್ದರು. ಹೊಸ ಆವೃತ್ತಿಯನ್ನು ಮುಂದಿನ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ, ಗಲಭೆಯ ದೃಶ್ಯಗಳನ್ನು ಚಿತ್ರದಿಂದ ಚಿತ್ರತಂಡ ತೆಗೆದು ಹಾಕಲು ಮುಂದಾಗಿದ್ದು ಕೆಲವು ಸಂಭಾಷಣೆಗಳನ್ನು ಕೂಡ ಮ್ಯೂಟ್ ಮಾಡಲು ಮುಂದಾಗಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನು ಈ ವಿವಾದದ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಲ್ 2 ಎಂಪುರಾನ್ ಚಿತ್ರ ಈ ದೇಶ ಕಂಡ ಅತ್ಯಂತ ಕ್ರೂರ ನರಮೇಧದ ಮೇಲೆ ಬೆಳಕು ಚೆಲ್ಲುತ್ತೆ, ಇದು ಸಂಘ ಪರಿವಾರ ಮತ್ತು ಸೂತ್ರಧಾರರನ್ನು ಕೆರಳಿಸಿದೆ ಎಂದು ಹೇಳಿದ್ದಾರೆ. ಮಲಯಾಳಂ ಚಿತ್ರರಂಗವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಎಂಪುರಾನ್ ಚಿತ್ರದ್ದು ಎಂದು ಹೇಳಿರುವ ಪಿಣರಾಯಿ ವಿಜಯನ್ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಚಿತ್ರತಂಡದ ವಿರುದ್ಧ ನಿರ್ಮಾಪಕರ ವಿರುದ್ಧ ಸಾರ್ವಜನಿಕ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಸಂಘ ಪರಿವಾರ ಸೃಷ್ಟಿಸಿರುವ ಈ ಭಯದ ವಾತಾವರಣ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


Click it and Unblock the Notifications











