ಆ ವ್ಯಕ್ತಿ ಬೂಟು ನೆಕ್ಕು ಅಂದ್ರು.. ಅವ್ರು ಹೇಳಿದಂತೆ ಮಾಡ್ದೆ- ಮೋಹನ್ ಲಾಲ್
ಭಾರತೀಯ ಚಿತ್ರರಂಗ ಕಂಡ ದೈತ್ಯ ಪ್ರತಿಭೆ ಮೋಹನ್ ಲಾಲ್. ತಮ್ಮ ಅದ್ಭುತ ನಟನೆಯಿಂದ ಅವರು ತೆರೆಮೇಲೆ ಮ್ಯಾಜಿಕ್ ಮಾಡುತ್ತಾ ಬರ್ತಿದ್ದಾರೆ. ನೂರಾರು ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪಾತ್ರ ಯಾವುದೇ ಆಗಿದ್ದರೂ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಕೊನೆಗೆ ಬೂಟು ನೆಕ್ಕುವ ಸನ್ನಿವೇಶ ಆಗಿದ್ದರೂ ಹಿಂದೆ ಮುಂದೆ ನೋಡದೇ ನಟಿಸುತ್ತಾರೆ.
ಒಮ್ಮೆ ಸ್ಟಾರ್ ಸ್ಟೇಟಸ್ ಸಿಕ್ಕಿಬಿಟ್ಟರೆ ಮುಗೀತು. ಬಳಿಕ ನಟರು ಅಷ್ಟು ಸುಲಭವಾಗಿ ನಿರ್ದೇಶಕರು ಹೇಳಿದ ಮಾತನ್ನು ಕೇಳುವುದಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ನಟಿಸೋದೇ ಇಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಕೆಲವೊಮ್ಮೆ ಅಂತಹ ಸನ್ನಿವೇಶ ಬದಲಿಸಬೇಕಾಗುತ್ತದೆ, ಅಥವಾ ಗಿಮಿಕ್ ಮಾಡಿ ಶೂಟ್ ಮಾಡುತ್ತಾರೆ. ಅದರಲ್ಲಿ ತಮ್ಮ ಗೌರವಕ್ಕೆ ಧಕ್ಕೆ ಆಗುತ್ತದೆ ಎಂದು ಭಾವಿಸಿ ಕೆಲ ಸನ್ನಿವೇಶಗಳಲ್ಲಿ ನಟಿಸೋಕೆ ಹಿಂದೇಟು ಹಾಕುತ್ತಾರೆ.

ಡಾ. ರಾಜ್ಕುಮಾರ್, ಶಿವರಾಜ್ಕುಮಾರ್, ಚಿಯಾನ್ ವಿಕ್ರಂ, ಮೋಹನ್ ಲಾಲ್ ರೀತಿಯ ಕೆಲವು ನಟರು ಮಾತ್ರ ಯಾವುದೇ ಸನ್ನಿವೇಶ ಆಗಿದ್ದರೂ ಆ ಪಾತ್ರವೇ ತಾವಾಗಿಬಿಡುತ್ತಾರೆ. ಯಾವುದೇ ಹಮ್ಮು ಬಿಮ್ಮು ಇಲ್ಲದೇ ನಿರ್ದೇಶಕರು ಹೇಳಿದ್ದನ್ನು ಕೇಳುತ್ತಾರೆ. ಅವರು ಹೇಳಿದಂತೆ ನಟಿಸುತ್ತಾರೆ. ಅದನ್ನು ಸಿನಿಮಾ ಆಗಿ ಪಾತ್ರವಾಗಿ ಮಾತ್ರ ನೋಡುತ್ತಾರೆ. 1996ರಲ್ಲಿ 'ಕಾಲಾಪಾಣಿ' ಎಂಬ ಮಲಯಾಳಂ ಚಿತ್ರ ಬಂದಿತ್ತು. ಅದರಲ್ಲಿ ಮೋಹನ್ ಲಾಲ್ ಪಾತ್ರವನ್ನು ಪ್ರೇಕ್ಷಕರು ಇನ್ನು ಮರೆತ್ತಿಲ್ಲ.
'ಕಾಲಾಪಾಣಿ' ಚಿತ್ರದ ಸನ್ನಿವೇಶವೊಂದರಲ್ಲಿ ಅಮರಿಶ್ ಪುರಿ ಬೂಟು ನೆಕ್ಕುವ ಸನ್ನಿವೇಶ ಮೋಹನ್ ಲಾಲ್ ನಟಿಸಿದ್ದರು. ಈ ಬಗ್ಗೆ ಫಿಲ್ಮಿಬೀಟ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಚಿತ್ರದ ಅತಿಥಿ ಪಾತ್ರದಲ್ಲಿ ಮೋಹನ್ ಲಾಲ್ ಮಿಂಚಿದ್ದಾರೆ. ಚಿತ್ರದ ಪ್ರಚಾರ ಭಾಗವಾಗಿ ಸಂದರ್ಶನದಲ್ಲಿ ಭಾಗಿ ಆಗಿದ್ದರು.
ಸಂದರ್ಶನದ ನಡುವೆ ಮಂಚು ವಿಷ್ಣು ಮಾತನಾಡಿ ಚಿಕ್ಕಂದಿನಲ್ಲಿ ನಾನು ನೋಡಿದ 'ಕಾಲಾಪಾಣಿ' ಚಿತ್ರದ ಕೆಲ ಸನ್ನಿವೇಶಗಳು ಇನ್ನು ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಒಂದು ಸೀನ್ನಲ್ಲಿ ಅಮರೀಶ್ ಪುರಿ ನನ್ನ ಬೂಟು ನೆಕ್ಕು ಎಂದು ಹೇಳುತ್ತಾರೆ. ಅಂತಹ ಸನ್ನಿವೇಶದಲ್ಲಿ ಹೇಗೆ ನಟಿಸಿದ್ರಿ? ಅಷ್ಟರಲ್ಲಾಗಲೇ ನೀವು ಸೂಪರ್ ಸ್ಟಾರ್ ಆಗಿಬಿಟ್ಟಿದ್ರಿ, ಎಂದು ವಿಷ್ಣು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ಮೋಹನ್ ಲಾಲ್ "ಪ್ರಿಯದರ್ಶನ್ ನಟಿಸೋಕೆ ಹೇಳಿದ್ರು. ನಾನು ನಟಿಸಿದೆ ಅಷ್ಟೆ. ಯಾಕಂದ್ರೆ ಅದು ಪಾತ್ರ. ಆ ರೀತಿ ಪಾತ್ರ ಬಯಸಿದ್ದನ್ನು ಮಾಡಲೇಬೇಕು. ಅದಕ್ಕೆ ನೀವು ಈಗ ಆ ದೃಶ್ಯದ ಬಗ್ಗೆ ಈಗ ಹೀಗೆ ಮಾತನಾಡುತ್ತಿದ್ದೀರಾ" ಎಂದು ಹೇಳಿದ್ದಾರೆ.

1915ರ ಕಾಲಘಟ್ಟದಲ್ಲಿ ನಡೆಯುವ ಕಥೆ 'ಕಾಲಾಪಾಣಿ' ಚಿತ್ರದಲ್ಲಿತ್ತು. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಬಂಧಿಸಿ ಹೇಗೆ ಶಿಕ್ಷೆ ಕೊಡುತ್ತಿದ್ದರು ಎನ್ನುವಂತಹ ವಿಚಾರಗಳನ್ನು ಚಿತ್ರದಲ್ಲಿ ಹೇಳಲಾಗಿತ್ತು. ಆಗ ಬ್ರಿಟೀಷರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೇಗೆಲ್ಲಾ ಹಿಂಸೆ ಕೊಡುತ್ತಿದ್ದರು ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. "ಆ ಪಾತ್ರ ಆ ರೀತಿ ಇತ್ತು, ನಾನು ನಟಿಸಬೇಕಿತ್ತು. ಅಮರೀಶ್ ಪುರಿ ಎದುರು ಎದುರು ನಿಂತು, ಕಮಾನ್ ಎಂದು ಎಂದರೆ ಆಗಲ್ಲ ಅನ್ನೋಕೆ ಸಾಧ್ಯವೆ. ಹಾಗಾಗಿ ನಟಿಸಿದೆ" ಎಂದು ಮೋಹನ್ ಲಾಲ್ ವಿವರಿಸಿದ್ದಾರೆ.
ಮೋಹನ್ ಲಾಲ್ ಇವತ್ತಿಗೂ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿ ಯುವ ನಟರಿಗೆ ಸವಾಲು ಹಾಕುತ್ತಿದ್ದಾರೆ. ಈ ವರ್ಷ ಅವರು ನಟಿಸಿದ 'ಎಂಪುರಾನ್' ಹಾಗೂ ಥುಡರುಂ' ಚಿತ್ರಗಳು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇನ್ನೆರಡು ಸಿನಿಮಾಗಳು ಈ ವರ್ಷವೇ ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲೇ 'ದೃಶ್ಯಂ-3' ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











