ಪೃಥ್ವಿರಾಜ್ ನಟನೆಯಲ್ಲಿ ಸಹಜತೆ ಇಲ್ವಂತೆ, ಅದಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿಲ್ಲ ಎಂದ ಜ್ಯೂರಿ ಸದಸ್ಯ
ಪ್ರತಿ ಬಾರಿ ಯಾವುದೇ ಪ್ರಶಸ್ತಿ ಘೋಷಣೆ ಆದಾಗ ತೀರ್ಪುಗಾರರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಲಾಬಿ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಆರೋಪವೂ ಕೇಳಿಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ವಿಚಾರದಲ್ಲಿ ಕೂಡ ಹೀಗೆ ಆಗುತ್ತಿದೆ. ಇತ್ತೀಚೆಗೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿತ್ತು. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ಗೆ ಪ್ರಶಸ್ತಿ ಸಿಗದೇ ಇರುವುದು ಬೇಸರಕ್ಕೆ ಕಾರಣವಾಗಿದೆ.
'ಜವಾನ್' ಚಿತ್ರದ ನಟನೆಗಾಗಿ ಶಾರುಖ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ವಿಕ್ರಾಂತ್ ಮೆಸ್ಸಿ ಜೊತೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಹಿರಿಯ ನಟಿ ಊರ್ವಶಿ ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಆಯ್ಕೆಗೆ ಮಾನದಂಡ ಏನು? ಎಂದು ಕೇಳಿದ್ದಾರೆ. ಇದೆಲ್ಲದರ ನಡುವೆ 'ಆಡುಜೀವಿತಂ' ಚಿತ್ರವನ್ನು ಯಾಕೆ ತೀರ್ಪುಗಾರರು ಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಚಿತ್ರದ ನಿರ್ದೆಶಕ ಬ್ಲೆಸ್ಸಿ ಹಾಗೂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರತಿಕ್ರಿಯಿಸಿದ್ದಾರೆ.

2023ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಆಡುಜೀವಿತಂ ಸಿನಿಮಾ 2024ರಲ್ಲಿ ತೆರೆಗೆ ಬಂತು. ಹಾಗಾಗಿ ಮುಂದಿನ ವರ್ಷ ಈ ಚಿತ್ರವನ್ನು ಪರಿಗಣಿಸುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ 2023ರಲ್ಲಿ ಸೆನ್ಸಾರ್ ಆಗಿರುವ ಸಿನಿಮಾಗಳನ್ನು ರಾಷ್ಟ್ರಪ್ರಶಸ್ತಿಗೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಆಡುಜೀವಿತಂ ಸಿನಿಮಾ 2023ರ ಡಿಸೆಂಬರ್ನಲ್ಲಿ ಸೆನ್ಸಾರ್ ಆಗಿತ್ತು. ಹಾಗಾಗಿ ಚಿತ್ರವನ್ನು ತೀರ್ಪುಗಾರರು ನೋಡಿದ್ದರು. ಅತ್ಯುತ್ತಮ ಗಾಯಕ ಹಾಗೂ ಗೀತಸಾಹಿತ್ಯ ವಿಭಾಗದಲ್ಲಿ ಸಿನಿಮಾ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಆದರೆ ಪ್ರಶಸ್ತಿ ಸಿಕ್ಕಿಲ್ಲ.
ಅಂದರೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ 'ಆಡುಜೀವಿತಂ' ಸಿನಿಮಾವನ್ನು ಪರಿಗಣಿಸಿದ್ದರು. ಪೃಥ್ವಿರಾಜ್ ನಟನೆಗೆ ಪ್ರಶಸ್ತಿ ಕೊಟ್ಟಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಜ್ಯೂರಿ ಸದಸ್ಯ ಪ್ರದೀಪ್ ನಾಯರ್ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪೃಥ್ವಿರಾಜ್ ಸುಕುಮಾರನ್(ಆಡುಜೀವಿತಂ)ಗೆ ಅತ್ಯುತ್ತಮ ಪ್ರಶಸ್ತಿ ನೀಡಬೇಕು ಎಂದು ನಾನು ಸಲಹೆ ನೀಡಿದ್ದೆ. ಕಮಿಟಿ ಚೇರ್ಪರ್ಸನ್ ಅಶುತೋಷ್ ಗೋವಾರಿಕ್ ಕೂಡ ಸಿನಿಮಾ ನೋಡಿದ್ದರು. ಚಿತ್ರದಲ್ಲಿ ಸಾಮಾಜಿಕ ಅಂಶ ಇಲ್ಲ, ಪೃಥ್ವಿರಾಜ್ ನಟನೆಯಲ್ಲಿ ಸಹಜತ್ವ ಇಲ್ಲ ಅಂದ್ರು. ಆಗ ಏನು ಹೇಳಬೇಕು ಎನ್ನುವುದು ನನಗೆ ಅರ್ಥವಾಗಲಿಲ್ಲ. ಅದಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ಕೊಟ್ಟಿಲ್ಲ" ಎಂದಿದ್ದಾರೆ.
'ದ ಕೇರಳ ಸ್ಟೋರಿ' ಚಿತ್ರ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ. ಈ ಬಗ್ಗೆ ನಾಯರ್ ಮಾತನಾಡಿ "ದ ಕೇರಳ ಸ್ಟೋರಿ ಚಿತ್ರಕ್ಕೆ ಪ್ರಶಸ್ತಿ ನೀಡುವ ಬಗ್ಗೆ ಕಮಿಟಿಯಲ್ಲಿದ್ದ ನಾನು ಆಕ್ಷೇಪ ವ್ಯಕ್ತಪಡಿಸಿದೆ. ದೇಶವನ್ನು ಅವಮಾನಿಸುವ ರೀತಿ ಚಿತ್ರಿಸಿದ ಚಿತ್ರಕ್ಕೆ ಪ್ರಶಸ್ತಿ ಹೇಗೆ ಕೊಡ್ತೀರಾ ಎಂದು ಜ್ಯೂರಿ ಸದಸ್ಯನಾಗಿ ನನ್ನ ಅಭಿಪ್ರಾಯ ತಿಳಿಸಿದೆ. ಆದರೆ ನನ್ನ ಮಾತನ್ನು ಯಾರು ಕೇಳಲಿಲ್ಲ. ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂದಿದ್ದೆ. ಆದರೆ ಅವರು ಅದನ್ನು ಒಂದು ಸಾಮಾಜಿಕ ಸಮಸ್ಯೆ ರೀತಿ ನೋಡಿದ್ರು" ಎಂದು ತಿಳಿಸಿದ್ದಾರೆ.

'ಆಡುಜೀವಿತಂ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗುತ್ತಾ ಎನ್ನುವ ಪ್ರಶ್ನೆಗೆ ವಾರದ ಹಿಂದೆ ಸಂದರ್ಶನವೊಂದರಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಪ್ರತಿಕ್ರಿಯಿಸಿದ್ದರು. "ಪ್ರಶಸ್ತಿ ಒಂದೇ ನನ್ನ ಗುರಿಯಲ್ಲ. ಆ ಚಿತ್ರದಿಂದ ಈಗಾಗಲೇ ನಾನು ಬಯಸಿದ್ದೆಲ್ಲಾ ಸಿಕ್ಕಿದೆ. ಸಿನಿಮಾ ಗೆಲ್ಲಬೇಕು, ನನ್ನ ನಟನೆಯನ್ನು ಜನ ಒಪ್ಪಿಕೊಳ್ಳಬೇಕು ಎಂದು ಬಯಸಿದ್ದೆ. ಮುಖ್ಯವಾಗಿ ಆ ವ್ಯಕ್ತಿಯ ಕಥೆಯನ್ನು ಜನರು ಇಷ್ಟಪಡಬೇಕೆಂದುಕೊಂಡಿದ್ದೆ. ಅದೆಲ್ಲವೂ ಆಯಿತು. ಅಷ್ಟು ಸಾಕು. ಪ್ರಶಸ್ತಿ ಸಿಕ್ಕರೆ ಅದು ಅದ್ಭುತ, ಸಿಗದಿದ್ದರೆ ಸಿಕ್ಕವರಿಗೆ ನನ್ನ ಅಭಿನಂದನೆಗಳು" ಎಂದಿದ್ದರು.
ಕೆಲಸ ಹುಡುಕಿ ಸೌದಿ ಅರೇಬಿಯಾಗೆ ಹೋಗಿ ಮರುಭೂಮಿಯಲ್ಲಿ ಸಿಕ್ಕಿಬಿಳ್ಳುವ ಮಲಯಾಳಿ ವಲಸೆ ಕಾರ್ಮಿಕ ನಜೀಬ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದರು. ನಜೀಬ್ ಎಂಬ ವ್ಯಕ್ತಿಯ ನಿಜಜೀವನದ ಕಥೆಯನ್ನು ಆಧರಿಸಿ ಬರೆದ 'ಆಡುಜೀವಿತಂ' ಕಾದಂಬರಿ ಆಧರಿಸಿ ಚಿತ್ರ ನಿರ್ಮಾಣವಾಗಿತ್ತು. ಸಿನಿಮಾ ನೋಡಿದಾಗ್ಲೇ ಪೃಥ್ವಿರಾಜ್ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಖಂಡಿತ ಸಿಗುತ್ತದೆ ಎಂದು ಪ್ರೇಕ್ಷಕರು ಭಾವಿಸಿದ್ದರು. ಈಗ ಅದು ಸುಳ್ಳಾಗಿದೆ.


Click it and Unblock the Notifications











