ನನ್ನ ಎದೆ ಭಾಗ ಮುಟ್ಟಿದ-ಕಹಿ ಅನುಭವ ನೆನೆದು ಕಣ್ಣೀರಾದ ಮಿಲನಾ ನಾಯಕಿ ಪಾರ್ವತಿ ಮೆನನ್
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋಷಣೆ...
ದೌರ್ಜನ್ಯ ಮಾತ್ರ ಇವತ್ತು ಕೂಡ ಕಡಿಮೆಯಾಗಿಲ್ಲ. ಕೆಲಸ ಮಾಡುವ ಕಛೇರಿಗಳಿಂದ ಹಿಡಿದು ಸಾರ್ವಜನಿಕ ಸ್ಥಳದವರೆಗೆ .. ಪರಿಚಿತರಿಂದಲೇ ದೌರ್ಜನ್ಯ, ಅಪರಿಚಿತರಿಂದ ಲೈಂ*ಗಿಕ ಕಿರುಕುಳ, ಶೋಷಣೆ ನಡೆಯುತ್ತಲೇ ಇವೆ. ಕೇವಲ ಹದಿಹರೆಯದ ಯುವತಿಯರ ಮೇಲೆ..ಮಹಿಳೆಯರ ಮೇಲಷ್ಟೇ ಅಲ್ಲ ಈ ಕಾ*ಮಾಂಧರು ಚಿಕ್ಕ ಬಾಲಕಿಯರ ಮೇಲೆ ಕೂಡ ದೌರ್ಜನ್ಯ ಎಸಗುತ್ತಾರೆ. ಕೆಲ ಒಮ್ಮೆ ಹೀಗೆ ನಡೆದ ದೌರ್ಜನ್ಯ.. ಶೋಷಣೆ.. ಹಲವರಿಗೆ ಜೀವಮಾನವಿಡೀ ಕಾಡುತ್ತೆ. ಉದಾಹರಣೆಗೆ ಪಾರ್ವತಿ ತಿರುವೋತ್ತು.

ಹೌದು, ಪಾರ್ವತಿ ತಿರುವೋತ್ತು ಅಲಿಯಾಸ್ ಪಾರ್ವತಿ ಮೆನನ್.. ಕನ್ನಡಿಗರಿಗೆ ಅಪರಿಚತರೇನಲ್ಲ. ಪುನೀತ್ ರಾಜ್ ಕುಮಾರ್ ಅಭಿನಯದ ''ಮಿಲನ'' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ''ಮಳೆ ಬರಲಿ ಮಂಜೂ ಇರಲಿ''.. ''ಪೃಥ್ವಿ''.. ಮತ್ತು ''ಅಂದರ್ ಬಾಹರ್'' ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು.
ಇನ್ನೂ ಮಾಲಿವುಡ್ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರುವಾಸಿಯಾಗಿಲ್ಲ. ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು ಇವರು.
ಮಲಯಾಳಂನ ಸ್ಟಾರ್ ಮಮ್ಮುಟ್ಟಿ ವಿರುದ್ಧ ನೇರಾನೇರವಾಗಿಯೇ ವಾಗ್ದಾಳಿ ನಡೆಸಿದ್ದ ಪಾರ್ವತಿ ವಿರುದ್ಧ ಮಮ್ಮುಟ್ಟಿ ಅಭಿಮಾನಿಗಳು ಆ ನಂತರ ಸೈಬರ್ ಯುದ್ಧವನ್ನೇ ಸಾರಿದ್ದರು. ಆದರೆ ಪಾರ್ವತಿ ಮಾತ್ರ ಕುಗ್ಗಲಿಲ್ಲ. ಎದೆಗುಂದಲಿಲ್ಲ. 'ಉಯರೆ'ಯಂತಹ ಸಿನಿಮಾ ಮೂಲಕ ಮತ್ತೆ ಮಾಲಿವುಡ್ನಲ್ಲಿ ಪುಟಿದೆದ್ದವರು ಪಾರ್ವತಿ.
ಇಂಥಾ ಪಾರ್ವತಿ ಬಾಲ್ಯದಲ್ಲಿ ತಮಗಾದ ಲೈಂ*ಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ''ಹಾಟರ್ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾರ್ವತಿ ಆಗ ನನಗೆ ಇನ್ನೂ ಚಿಕ್ಕ ವಯಸ್ಸು, ನನ್ನ ತಂದೆ ತಾಯಿ ಜೊತೆ ನಾನು ರೇಲ್ವೇ ನಿಲ್ದಾಣಕ್ಕೆ ಹೋಗಿದ್ದೆ. ಆಗ ಒಬ್ಬ ವ್ಯಕ್ತಿ ಏಕಾಏಕಿ ಬಂದು ನನ್ನ ಎದೆಗೆ ಬಲವಾಗಿ ಹೊಡೆದು ಹೋದ ಎಂದು ಹೇಳಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇ ಎಂದಿದ್ದಾರೆ.

ಕೇವಲ ಇದೊಂದೇ ಘಟನೆ ಮಾತ್ರವಲ್ಲ ಬಾಲ್ಯದಲ್ಲಿ ಬೆಳೆಯುವ ಹಂತದಲ್ಲಿ ಹಲವು ಬಾರಿ ಲೈಂಗಿಕ ಕಿರುಕುಳಕ್ಕೆ ನಾನು ಒಳಗಾಗಿದ್ದೇನೆ ಎಂದು ಹೇಳಿರುವ ಪಾರ್ವತಿ ಕೆಲವು ಪುರುಷರು ಖಾಸಗಿ ಅಂಗಗಳನ್ನು ಪ್ರದರ್ಶಿಸಿ ಅಸಭ್ಯವಾಗಿ ಸನ್ನೆ ಮಾಡಿ ನನಗೆ ಮಾತನಾಡಿದ ಉದಾಹರಣೆಗಳು ಕೂಡ ಇವೆ ಎಂದು ಹೇಳಿದ್ದಾರೆ.
ಮತ್ತೊಮ್ಮೆ ಲಿಫ್ಟ್ನಲ್ಲಿ ಒಬ್ಬ ವ್ಯಕ್ತಿ ತಮ್ಮ ಖಾಸಗಿ ಅಂಗ ನನಗೆ ತಾಗುವಂತೆ ನಿಂತಿದ್ದ, ಆಗ ನಾನು ಕಪಾಳಕ್ಕೆ ಹೊಡೆದಿದ್ದೆ ಎಂದು ಹೇಳಿರುವ ಪಾರ್ವತಿ ಆತನ ಪರಿಸ್ಥಿತಿ ಕಂಡು ಆಮೇಲೆ ಪೊಲೀಸರನ್ನು ಕರೆಯಲು ನಾನು ಹೋಗಲಿಲ್ಲ ಎಂದು ಹೇಳಿದ್ದಾರೆ. ನನ್ನ ತಾಯಿ ಬೀದಿಗಳಲ್ಲಿ ಹೇಗೆ ನಡೆಯಬೇಕೆಂದು ನನಗೆ ಕಲಿಸುತ್ತಿದ್ದರು. ಅಂಗಡಿಗಳನ್ನು ನೋಡುತ್ತಾ ಹೋಗಬೇಡ. ಪುರುಷರ ಕೈಗಳನ್ನು ಗಮನಿಸು ಎಂದು ಹೇಳುತ್ತಿದ್ದರು ಎಂದು ಹೇಳಿರುವ ಪಾರ್ವತಿ ಒಬ್ಬ ತಾಯಿ ತನ್ನ ಮಗುವಿಗೆ ಇವೆಲ್ಲವನ್ನೂ ಕಲಿಸಬೇಕಾದ ಪರಿಸ್ಥಿತಿ ಬಂದಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.
ಮುಂದುವರೆದು ಶಾಲೆಯಲ್ಲಿ ಓದುವಾಗ ನಾನು ಪ್ರೀತಿಸುತ್ತಿದ್ದ ವ್ಯಕ್ತಿ ಜನಸಂದಣಿ ಇಲ್ಲದ ಸ್ಥಳಕ್ಕೆ ಒಂದು ದಿನ ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಕೋರಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು ಎಂದು ಹೇಳಿರುವ ಪಾರ್ವತಿ ಎಷ್ಟೇ ಪ್ರೀತಿ ಇದ್ದರೂ ನನಗೆ ಸಮ್ಮತಿ ಇಲ್ಲದ ಕೆಲಸವನ್ನು ನಾನ್ಯಾಕೇ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲ ಘಟನೆಗಳು ನನ್ನ ದೇಹದ ಮೇಲೆ, ಮನದ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು ಎಂದಿದ್ದಾರೆ. ಆ ಮಾನಸಿಕ ನೋವು ಇನ್ನೂ ಮಾಸಿಲ್ಲ ಎಂದಿದ್ದಾರೆ.


Click it and Unblock the Notifications











