ವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಮಿಲನ ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಪಾರ್ವತಿ ತಿರುವೊತ್ತು ಈಗ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ 'ಅಂದರ್ ಬಾಹರ್' ಆಡಿ ಹೋಗಿದ್ದ ಪಾರ್ವತಿ ನಂತರ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖಮಾಡಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಪಾರ್ವತಿ ಸದ್ಯ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಪರೂಪಕ್ಕೆ ಎಂಬಂತೆ ಸಿನಿಮಾ ಮಾಡುವ ಪಾರ್ವತಿ, ಸಿನಿಮಾಗಳ ಸಂಖ್ಯೆ ಕಡಿಮೆಯಾದರು ಅವರು ಅಭಿನಯದ ಪ್ರತಿಯೊಂದು ಸಿನಿಮಾಗಳು ವಿಭಿನ್ನವಾಗಿವೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅರ್ಜುನ್ ರೆಡ್ಡಿ ಅಥವ ಕಬೀರ್ ಸಿಂಗ್ ಸಿನಿಮಾಗಿಂತ ಹಾಲಿವುಡ್ ನ 'ಜೋಕರ್' ಸಿನಿಮಾ ಯಾಕೆ ಉತ್ತಮವಾಗಿದೆ ಎಂದು ದೇವರಕೊಂಡ ಮುಂದೆಯೆ ನೀಡಿರುವ ಹೇಳಿಕೆ ವೈರಲ್ ಆಗಿದೆ. ಅರ್ಜುನ್ ರೆಡ್ಡಿ ಸಿನಿಮಾ ಬಗ್ಗೆ ಪಾರ್ವತಿ ಆಡಿರುವ ಮಾತುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಜೋಕರ್' ಮತ್ತು 'ಅರ್ಜುನ್ ರೆಡ್ಡಿ'
'ಅರ್ಜುನ್ ರೆಡ್ಡಿ' ಅಥವ ಕಬೀರ್ ಸಿಂಗ್ ಸಿನಿಮಾಗಿಂತ ಹಾಲಿವುಡ್ ನ 'ಜೋಕರ್' ಸಿನಿಮಾ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಪಾರ್ವತಿಯ ಈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂದರ್ಶನದಲ್ಲಿ ಭಾಗಿಯಾಗಿದ್ದ ಪಾರ್ವತಿ ಅವರಿಗೆ ನಿರೂಪಕಿ ಕಲಾವಿದರ ನೈತಿಕ ಜವಾಬ್ದಾರಿ ಬಗ್ಗೆ ಪ್ರಶ್ನೆ ಕೇಳಿದಾಗ ಪಾರ್ವತಿ ಅರ್ಜುನ್ ರೆಡ್ಡಿ ಮತ್ತು ಜೋಕರ್ ಸಿನಿಮಾಗಳನ್ನು ಹೋಲಿಕೆ ಮಾಡಿ ವಿವರಣೆ ನೀಡಿದ್ದಾರೆ.

ಜೋಕರ್ ನಲ್ಲಿ ಸತ್ಯ ಸಂಗತಿಗಳಿವೆ
"ಅರ್ಜುನ್ ರೆಡ್ಡಿ ಅಥವಾ ಕಬೀರ್ ಸಿಂಗ್ ಚಿತ್ರದಲ್ಲಿ ವೈಭವೀಕರಣ ಹೆಚ್ಚಾಗಿದೆ. ಆದರೆ ಜೋಕರ್ ಚಿತ್ರದಲ್ಲಿ ಹಾಗಿಲ್ಲ. ಜೋಕರ್ ನಲ್ಲಿ ಅಕ್ಷರಶಃ ಸತ್ಯ ಸಂಗತಿಗಳನ್ನು ತೋರಿಸಲಾಗಿದೆ. ನಟ ಜವಾಕ್ವಿನ್ ನಿರ್ವಹಿಸಿದ ಪಾತ್ರ ಎಂದು ಎಲ್ಲಿಯು ಎನಿಸಿಲ್ಲ. ಅಷ್ಟು ನೈಜವಾಗಿದೆ" ಎಂದು ಹೇಳಿದ್ದಾರೆ.

'ಅರ್ಜುನ ರೆಡ್ಡಿ'ಯಲ್ಲಿ ಹಿಂಸಾಚಾರದ ವೈಭವೀಕರಣ
"ಅರ್ಜುನ್ ರೆಡ್ಡಿ ಚಿತ್ರದಲ್ಲಿ, ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆಯದೆ ಹೋದರೆ ಸಂಬಂಧದಲ್ಲಿ ಉತ್ಸಾಹವೆ ಇಲ್ಲ ಎನ್ನುವ ಹಾಗೆ ತೋರಿಸಲಾಗಿದೆ. ಅಲ್ಲದೆ ಯೂಟ್ಯೂಬ್ ಕಮೆಂಟ್ಸ್ ಗಳನ್ನು ನೋಡಿದರೆ ಅಲ್ಲಿ ಹೆಚ್ಚು ಜನರು ಅಂದರೆ ಒಂದು ಬೃಹತ್ ಜನ ಸಮೂಹವೆ ಸೇರಿಕೊಂಡಿದೆ. ಇಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ರೀತಿಯಲ್ಲಿ ತೋರಿಸಲಾಗಿದೆ" ಎಂದು ಹೇಳಿದ್ದಾರೆ.

ಕಲಾವಿದೆಯಾಗಿ ಅಂತಹ ಸಿನಿಮಾಗಳಲ್ಲಿ ಭಾಗಿಯಾಗಲ್ಲ
"ಅದನ್ನು ಹೇಗೆ ಸರಿಪಡಿಸುವುದು ಎನ್ನುವುದರ ಬಗ್ಗೆ ನಾನು ಜಡ್ಜ್ ಮಾಡಲು ಸಾಧ್ಯವಿಲ್ಲ. ಆದರೆ ತುಂಬಾ ಭಯವಾಗುತ್ತೆ. ಯಾಕಂದ್ರೆ ದಿನದಿಂದ ದಿನಕ್ಕೆ ಜನರು ಇದರಿಂದ ಪ್ರಭಾವಿತರಾಗುತ್ತಾರೆ. ಹಾಗಾಗಿ ನಾವು ಕಲಾವಿದರು ಸ್ವಲ್ಪ ಜಾವಾಬ್ದಾರರಾಗಬೇಕು ಎಂದು ಭಾವಿಸುತ್ತೇನೆ. ಒಬ್ಬ ನಟಿಯಾಗಿ ನಾನು ನಿರ್ದೇಶಕರು ಹಾಗೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅಂತಹ ಸಿನಿಮಾದ ಭಾಗವಾಗದಂತೆ ನಾನು ಆಯ್ಕೆ ಮಾಡಿಕೊಳ್ಳಬಹುದು" ಎಂದು ಹೇಳುತ್ತ ಕಲಾವಿದರ ನೈತಿಕ ಜವಾಬ್ದಾರಿ ಬಗ್ಗೆ ಹೇಳಿದ್ದಾರೆ.

ಸಂದರ್ಶನದಲ್ಲಿ ಖ್ಯಾತ ಕಲಾವಿದರು
ಈ ಸಂದರ್ಶನದಲ್ಲಿ ಅರ್ಜುನ್ ಖ್ಯಾತಿಯ ನಟ ವಿಜಯ್ ದೇವರಕೊಂಡ ಕೂಡ ಇದ್ದರು. ಇನ್ನು ಖ್ಯಾತ ಕಲಾವಿದರಾದ ದೀಪಿಕಾ ಪಡುಕೋಣೆ, ಅಲಿಯಾ ಭಟ್, ರಣ್ವೀರ್ ಸಿಂಗ್, ಮನೋಜ್ ಬಜಪಾಯಿ, ವಿಜಯ್ ಸೇತುಪತಿ ಭಾಗಿಯಾಗಿದ್ದರು.


Click it and Unblock the Notifications











