"ನನ್ನ ಮಕ್ಕಳು ಐಸಿಸ್ಗೆ ಸೇರ್ತಾರೆ ಅಂತೆಲ್ಲಾ ಹೇಳ್ತಾರೆ"; ನೋವು ತೋಡಿಕೊಂಡ ಪ್ರಿಯಾಮಣಿ
ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ನೇರಾನೇರ ಮಾತುಗಳಿಂದ ಸುದ್ದಿ ಆಗುತ್ತಾರೆ. ಯಾವುದೇ ವಿಚಾರದ ಬಗ್ಗೆ ಧೈರ್ಯವಾಗಿ ಮಾತನಾಡ್ತಾರೆ. ತಾವು ಮುಸ್ತಾಫಾ ರಾಜ ಅವರನ್ನು ಪ್ರೀತಿಸಿ ಮದುವೆಯಾದಾಗ ಎದುರಿಸಿದ ಟ್ರೋಲ್ಸ್ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎದುರಾಗುವ ಟೀಕೆಗಳ ಬಗ್ಗೆ ಮತ್ತೊಮ್ಮೆ ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ. ಆಕೆ ನಟಿಸಿರುವ 'ಆಫೀಸರ್ ಆನ್ ಡ್ಯೂಟಿ' ಮಲಯಾಳಂ ಸಿನಿಮಾ ಬಿಡುಗಡೆಯಾಗಿದೆ. ಪ್ರಚಾರದ ಭಾಗವಾಗಿ ಕೆಲ ಸಂದರ್ಶನಗಳಲ್ಲಿ ಆಕೆ ಮಾತನಾಡಿದ್ದಾರೆ. ಫಿಲ್ಮ್ಫೇರ್ ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ಮನದಾಳ ತೆರೆದಿಟ್ಟಿದ್ದಾರೆ. ಟ್ರೋಲ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ಮುಸ್ತಾಫಾ ರಾಜ ಅವರನ್ನು ಪ್ರಿಯಾಮಣಿ ಪ್ರೀತಿಸಿ ಮದುವೆ ಆಗಿದ್ದರು. ಬೆಂಗಳೂರಿನಲ್ಲೇ ರಿಜಿಸ್ಟರ್ ಮ್ಯಾರೇಜ್ ಆಗಿತ್ತು. ಬಳಿಕ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಏರ್ಪಡಿಸಿದ್ದರು. ಮುಸ್ಲಿಂ ಧರ್ಮದ ಮುಸ್ತಾಫಾ ರಾಜ ಅವರನ್ನು ಪ್ರೀತಿಸಿ ಮದುವೆ ಆಗಿದ್ದಕ್ಕೆ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಅದರಲ್ಲೂ ಕೆಲ ಕಾಮೆಂಟ್ಸ್ ಮರೆಯೋಕೆ ಸಾಧ್ಯವಿಲ್ಲ. ಇವತ್ತಿಗೂ ನಮ್ಮ ಪತಿ ಜೊತೆಗಿನ ಫೋಟೊ ಪೋಸ್ಟ್ ಮಾಡಿದರೆ ಬಹುತೇಕ ಇಂತಹ ಕಾಮೆಂಟ್ಸ್ ಬರುತ್ತದೆ ಎಂದು ಪ್ರಿಯಾಮಣಿ ಹೇಳಿದ್ದಾರೆ.
ಆರಂಭದಲ್ಲಿ ಇಂತಹ ಕೆಟ್ಟ ಕಾಮೆಂಟ್ಸ್ ಮಾನಸಿಕನಾಗಿ ನೋವು ಕೊಡುತ್ತಿತ್ತು. ನನ್ನ ಎಂಗೇಜ್ಮೆಂಟ್ ಖುಷಿ ವಿಚಾರವನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. ನನ್ನ ಆಪ್ತರು ಎಲ್ಲರೂ ನನ್ನ ನಿರ್ಧಾರ ಒಪ್ಪಿಕೊಂಡರು. ಆದರೆ ಯಾಕೋ ಗೊತ್ತಿಲ್ಲ, ಸುಖಾಸುಮ್ಮನೆ ದ್ವೇಷ ಶುರುವಾಯಿತು. ಲವ್ ಜಿಹಾದ್ ಅಂದ್ರು, ಕೆಲವರು ಮಿತಿಮೀರಿ ನಾಳೆ ನಿಮ್ಮ ಮಕ್ಕಳು ಐಸಿಸ್ಗೆ ಸೇರ್ತಾರೆ ಅಂತೆಲ್ಲಾ ಕಾಮೆಂಟ್ ಹಾಕಿದರು. ಇದು ಬಹಳ ನೋವು ತಂದಿತ್ತು" ಎಂದು ಪ್ರಿಯಾಮಣಿ ಬೇಸರ ಹೊರ ಹಾಕಿದ್ದಾರೆ.
ಮಾತು ಮುಂದುವರೆಸಿರುವ ಪ್ರಿಯಾಮಣಿ "ನನ್ನ ಬಗ್ಗೆ ಏನಾದರೂ ಹೇಳಿ. ಆದರೆ ಸಂಬಂಧವೇ ಇಲ್ಲದ ವ್ಯಕ್ತಿ ಬಗ್ಗೆ ಯಾಕೆ ಏನೇನೋ ಹೇಳ್ತಿರಾ? ನಾನು ಆ ವ್ಯಕ್ತಿಯನ್ನು ಮದುವೆ ಆಗುತ್ತಿದ್ದೇನೆ ಎಂದು ಪರಿಚಯಿಸುತ್ತಿದ್ದೇನೆ. ಅಷ್ಟರಲ್ಲೇ ಇಷ್ಟೆಲ್ಲಾ ಯಾಕೆ ಎನಿಸಿತು. ಇದರಿಂದ ಹೊರಬರಲು ಮೂರ್ನಾಲ್ಕು ದಿನ ಬೇಕಾಯ್ತು. ಇವತ್ತಿಗೂ ಅಂತಹ ಕಾಮೆಂಟ್ಸ್ ಬರುತ್ತದೆ. ಜಾತಿ, ಧರ್ಮಕ್ಕೆ ಲಿಂಕ್ ಮಾಡಿ ಮಾತನಾಡುತ್ತಾರೆ. ನನಗೂ ನೋಡಿ ನೋಡಿ ಸಾಕಾಯ್ತು" ಎಂದಿದ್ದಾರೆ.

"ನಾನು ಮಾತನಾಡದೇ ಇರುವುದೇ ಒಳ್ಳೆಯದು ಎನಿಸಿತು. ಆರಂಭದಲ್ಲಿ ಅಂತಹ ಕಾಮೆಂಟ್ಸ್ಗೆ ರಿಪ್ಲೇ ಮಾಡುತ್ತಿದ್ದೆ. ಬಳಿಕ ಗೊತ್ತಾಯಿತು ಸುಖಾಸುಮ್ಮನೆ ತುಪ್ಪ ಸುರಿಯಬೇಕು, ಯಾರೋ ಏನೋ ಮಾತನಾಡುತ್ತಾರೆ ಎಂದು ನಾನು ರಿಪ್ಲೇ ಮಾಡುತ್ತಾ ಕೂರುವುದು ಬೇಡ ಎಂದು ಸುಮ್ಮನಾದೆ. ಅವರವರ ಅಭಿಪ್ರಾಯ ಅವರದ್ದು, ಆದರೆ ಅದನ್ನು ಹೇಳಿ ಯಾಕೆ ಮತ್ತೊಬ್ಬ ವ್ಯಕ್ತಿಗೆ ನೋವು ಕೊಡುತ್ತೀರಾ" ಎಂದು ಪ್ರಿಯಾಮಣಿ ಪ್ರಶ್ನಿಸಿದ್ದಾರೆ.
ತಮಿಳು ಪಾಲಕ್ಕಡ್ ಅಯ್ಯರ್ ಕುಟುಂಬದಲ್ಲಿ ಬೆಂಗಳೂರಿನಲ್ಲಿ ಪ್ರಿಯಾಮಣಿ ಹುಟ್ಟಿದ್ದವರು. ಬೆಂಗಳೂರಿನಲ್ಲೇ ಓದಿ ಬೆಳೆದರು. 22 ವರ್ಷಗಳ ಹಿಂದೆ 'ಎವರೇ ಅತಗಾಡು' ತೆಲುಗು ಚಿತ್ರದ ಮೂಲಕ ಪ್ರಿಯಾಮಣಿ ಚಿತ್ರರಂಗಕ್ಕೆ ಬಂದರು. ಬಳಿಕ ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಗೆದ್ದರು. ವೆಬ್ ಸೀರಿಸ್ಗಳಲ್ಲಿ ಮಿಂಚಿದರು. ಡ್ಯಾನ್ಸ್ ಶೋ ತೀರ್ಪುಗಾರ್ತಿಯಾಗಿಯೂ ಜನರಿಗೆ ಹತ್ತಿರವಾದರು.


Click it and Unblock the Notifications











