ಬೆಂಗಳೂರಿಗರ ಮನಗೆದ್ದ ಪ್ರತಿಭಾವಂತ ಜಾರ್ಜ್
ನಾನು ಮಲ್ಲು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಜತೆಗೆ ನಾನು ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ ಹಾಗಾಗಿ ನಾನು ಬೆಂಗಳೂರಿನ ಹುಡ್ಗ ಎಂದು ಹೇಳಿಕೊಳ್ಳುತ್ತಾರೆ ಪಾಪ್ Rap ಗಾಯಕ ರಿನೋಶ್ ಜಾರ್ಜ್.
ಬೆಂಗಳೂರಿನವನಾದ ನಾನು ಬೆಂಗಳೂರು ಬಗ್ಗೆ ವಿಡಿಯೋ ಮಾಡುತ್ತೇನೆ. ವೈವಿಧ್ಯತೆಯೇ ನಮ್ಮ ತಂಡದ ಹೆಗ್ಗುರುತು, ಸಂಗೀತಗಾರನಾಗಿ ಮುಂದುವರೆಯುವುದೇ ನನ್ನ ಗುರಿ ಎಂದು ಜಾರ್ಜ್ ಪಟಪಟನೇ ಮಾತನಾಡುತ್ತಾರೆ. ಕನ್ನಡ ಅರ್ಥ ಆಗುತ್ತೆ.ಸ್ವಲ್ಪ ಸ್ವಲ್ಪ ಮಾತನಾಡಬಲ್ಲೆ ಎನ್ನುತ್ತಿದ್ದ ಜಾರ್ಜ್ ಹಾಗೂ ಗೆಳೆಯರು ಒನ್ ಇಂಡಿಯಾ ಕಚೇರಿಯಲ್ಲಿ ಕಳೆದ ರಸ ನಿಮಿಷಗಳ ಬಗ್ಗೆ ಒಂದು ವರದಿ ಇಲ್ಲಿದೆ
ರಿನೋಶ್ ಜಾರ್ಜ್(Rinosh George) ಅವರ ಹಾಡುಗಳನ್ನು ಕೇಳಿ ಆನಂದಿಸಿ ದೇಶದ ಪ್ರಮುಖ ಮಾಧ್ಯಮಗಳು ಹಿಂದೆ ಬಿದ್ದು ಸಂದರ್ಶನ ತೆಗೆದುಕೊಂಡಿವೆ. ಆದರೆ, ಕನ್ನಡ ಪತ್ರಿಕೆ, ವೆಬ್ ಸೈಟ್ ಗಳಲ್ಲಿ ಸಂದರ್ಶನ ಬಂದರೆ ನನ್ನ ತಂಡದ ಕನ್ನಡಿಗ ಗೆಳೆಯರಿಗೂ ಹೆಚ್ಚಿನ ಪ್ರಚಾರ ಸಿಗುತ್ತೆ ಎಂದು ಹೇಳಲು ಜಾರ್ಜ್ ಮರೆಯಲಿಲ್ಲ.
I am a Mallu, This is Bengaluru' ಮುಂತಾದ ಗೀತೆಗಳು ಯೂಟ್ಯೂಬ್ ನಲ್ಲಿ ಸಕತ್ ಜನಪ್ರಿಯತೆ ಗಳಿಸಿವೆ. ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಬಳಸಿಕೊಂಡಿದ್ದರು. ಕನ್ನಡದಲ್ಲೂ ಹಾಡುವ ಬಯಕೆ ಇದೆ ಎನ್ನುವ ಜಾರ್ಜ್ ಬಗ್ಗೆ ಮುಂದೆ ಓದಿ

ಬೆಂಗಳೂರಲ್ಲಿ ಪ್ರತ್ಯೇಕ ಮ್ಯೂಸಿಕ್ ಬ್ಯಾಂಡ್ ಗೆ ಬೆಲೆ ಇದೆಯೇ?
ರಿನೋಶ್ ಜಾರ್ಜ್ : ಖಂಡಿತಾ ಇದೆ, ಬೆಂಗಳೂರು ಮೂಲದ ಅನೇಕ ಬ್ಯಾಂಡ್ ಗಳು ಇಂದು ವಿಶ್ವದೆಲ್ಲೆಡೆ ಕಾರ್ಯಕ್ರಮಗಳನ್ನು ನೀಡಿವೆ. ಅನೇಕ ಸಂಗೀತಗಾರರು, ಗಾಯಕರು ಹುಟ್ಟಿಕೊಂಡಿದ್ದಾರೆ. ಸ್ವರಾತ್ಮ ಇರಬಹುದು, ರಘು ದೀಕ್ಷಿತ್ ಅವರದ್ದು ಇರಬಹುದು., ಈಗ ಪಾಪ್, ರಾಕ್ ಅಲ್ಲದೆ ರಾಪರ್ ಗಳಿಗೂ ಬೆಲೆ ಇದೆ. ಎಂಸಿ ಬಿಜು, ಅಲೋಕ್, ಚಂದನ್ ಶೆಟ್ಟಿ ಮುಂತಾದವರನ್ನು ಹೆಸರಿಸಬಹುದು.

ನಿಮ್ಮ ಹಾಡುಗಳಿಗೆ ಸಾಹಿತ್ಯ ಯಾರು ಒದಗಿಸುತ್ತಾರೆ?
ಇಂಗ್ಲೀಷ್ ವರ್ಷನ್ ನಾನೇ ಬರೆಯುತ್ತೇನೆ. ಕನ್ನಡ ಸಾಹಿತ್ಯ ಬೇಕಾದರೆ ಗೆಳೆಯ ಭರತ್ ಬರೆದುಕೊಡುತ್ತಾನೆ. ಕೊನೆಗೆ ಇಡೀ ತಂಡ ಕುಳಿತು ಚರ್ಚೆ ಮಾಡಿ ಫೈನಲ್ ಮಾಡುತ್ತೇವೆ. ಕಾಲೇಜು ದಿನಗಳಿಂದ ಒಂದು ನಾಲ್ಕು ಜನ ಗೆಳೆಯರು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಸರಳ ಸಾಹಿತ್ಯ ಇದ್ದರೆ ಹಾಡುಗಳಿಗೆ ಬೆಲೆ ಜಾಸ್ತಿ,

ನಿಮ್ಮ ರೀತಿ Rapper ಗಳಿಗೆ ಪ್ರಚಾರ ಹೇಗೆ ಸಿಗುತ್ತೆ?
ಸಾಮಾಜಿಕ ಜಾಲ ತಾಣಗಳು ತುಂಬಾ ಪ್ರಭಾವಶಾಲಿಯಾಗಿದ್ದು, ನಿಮ್ಮ ಹಾಡು ಮೆಚ್ಚುಗೆಯಾದರೆ ಸಾರ್ವಜನಿಕರೇ ನಿಮ್ಮ ಮಾರುಕಟ್ಟೆ ವಿಸ್ತರಿಸುತ್ತಾರೆ. ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಸಾಮಾಜಿಕ ಜಾಲ ತಾಣಗಳು ಸ್ಟಾರ್ ಗಳನ್ನು ಸೃಷ್ಟಿಸಲು ಸಹಕಾರಿ. ನಿಮ್ಮ ಹಾಡು ಚೆನ್ನಾಗಿದೆ ಇಲ್ಲ ಎಂಬುದು ತಕ್ಷಣಕ್ಕೆ ತಿಳಿದು ಬಿಡುತ್ತದೆ.

ನಿಮ್ಮ ಮುಂದಿನ ಗುರಿ?
ನಾನು ದುಬೈನಲ್ಲಿ ರೇಡಿಯೋ ಜಾಕಿಯಾಗಿದ್ದೆ. ಇಲ್ಲಿ ಡಿಜೆ ಆಗಿ ಕಾರ್ಯನಿರ್ವಹಿಸಿದೆ, ಮ್ಯೂಸಿಕ್, ಸಾಂಗ್, ಪ್ರತ್ಯೇಕ ಬ್ಯಾಂಡ್, rap ಎಲ್ಲವೂ ನನಗೆ ಉತ್ತಮ ಫಲಿತಾಂಶ ನೀಡಿವೆ. ಮುಂದೆ ನಟನೆಯಲ್ಲೂ ನನ್ನ ಅದೃಷ್ಟ ಪರೀಕ್ಷೆ ಮಾಡುವ ಆಸೆಯಿದೆ. ಕನ್ನಡ ಚಿತ್ರರಂಗ ಅಥವಾ ಹಿಂದಿ ಚಿತ್ರರಂಗ, ಮಲೆಯಾಳಮ್ ಸಿನಿಮಾದಲ್ಲಿ ಎಲ್ಲಿಯಾದರೂ ಅವಕಾಶ ಸಿಕ್ಕರೆ ನಾನು ಪೂರ್ಣವಾಗಿ ನನ್ನ ಕೊಡುಗೆ ನೀಡುತ್ತೇನೆ.

ಗಾಯನದ ಹೊರತಾಗಿ ಬೇರೆ ಏನು ಮಾಡುತ್ತೀರಿ?
ಆಡ್ ಫಿಲಮ್, ಕಾರ್ಪೊರೇಟ್ ಅಡ್ ಮಾಡುತ್ತೇವೆ, ಬಜೆಟ್ ಗೆ ತಕ್ಕಂತೆ ವಿಡಿಯೋ ರೂಪಿಸುತ್ತೇವೆ, ಛಾಯಾಗ್ರಾಹಕ ಕರಮ್ ಚಾವ್ಲಾರ ಬಳಿ ಸಹಾಯಕರಾಗಿ ಕಾರ್ಯನಿರ್ವಹಿಸಿದವರು ನಮ್ಮ ಜತೆಗಿದ್ದಾರೆ. ಎಲ್ಲರಿಗೂ ಇಲ್ಲಿ ಅವಕಾಶ ಸಿಗುವಂತೆ ಮಾಡುವುದು ನಮ್ಮ ಉದ್ದೇಶ.

ಹೊಸಬರಿಗೆ ನಿಮ್ಮ ಸಲಹೆ?
ಪ್ರತಿಭೆ ಇದ್ದರೆ ಸಾಲದು, ಅದನ್ನು ಸರಿಯಾದ ರೀತಿಯಲ್ಲಿ ಸೂಕ್ತ ಸಮಯದಲ್ಲಿ ಬಳಸಿಕೊಳ್ಳಬೇಕು. ಸಿಕ್ಕ ಅವಕಾಶ ಬಳಸಿಕೊಂಡು ನಿಮ್ಮದೇ ಪ್ರತ್ಯೇಕ ಆಲ್ಬಂ ಮಾಡಲು ಯತ್ನಿಸಿ, ಒಳ್ಳೆ ಪ್ರಯತ್ನವನ್ನು ಬೆಂಗಳೂರು ಜನ ಎಂದಿಗೂ ಪ್ರೋತ್ಸಾಹಿಸುತ್ತಾರೆ.


Click it and Unblock the Notifications











