ರಾಷ್ಟ್ರಪ್ರಶಸ್ತಿ ಪುರಸ್ಕೃತ ಬರಹಗಾರ, ನಟ ಮಾಡಂಪು ಕುಂಜುಕುಟ್ಟನ್ ಕೊರೊನಾಗೆ ಬಲಿ
ಮಲಯಾಳಂ ಸಿನಿಮಾರಂಗದ ಖ್ಯಾತ ಚಿತ್ರಕಥೆ ಬರಹಗಾರ ಮತ್ತು ನಟ ಮಾಡಂಪು ಕುಂಜುಕುಟ್ಟನ್ ಕೊರೊನಾಗೆ ಬಲಿಯಾಗಿದ್ದಾರೆ. ಕರುಣಂ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ಬರಹಗಾರ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮಾಡಂಪು ಕುಂಜುಕುಟ್ಟನ್ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಕುಂಜುಕುಟ್ಟನ್ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ.
ಇಂದು ಬೆಳಗ್ಗೆ ತ್ರಿಸ್ಸೂರ್ನ ಖಾಸಗಿ ಆಸ್ಪತ್ರೆಯಲ್ಲಿ ಕುಂಜುಕುಟ್ಟನ್ ಇಹಲೋಕ ತ್ಯಜಿಸಿದ್ದಾರೆ. 81 ವರ್ಷದ ಕುಂಜುಕುಟ್ಟನ್ ಅವರಿಗೆ ಭಾನುವಾರ ರಾತ್ರಿ ತೀವ್ರ ಜ್ವರ ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು, ವೈದ್ಯರು ಪ್ರಯತ್ನ ಪಟ್ಟರು ಖ್ಯಾತ ಬರಹಗಾರನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸಿನಿಮಾರಂಗ ಮಾತ್ರವಲ್ಲದೆ ಕುಂಜುಕುಟ್ಟನ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. 2001ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಂಜುಕುಟ್ಟನ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ ಸೋಲುಂಡಿದ್ದರು. ಸಂಸ್ಕೃತ ಶಿಕ್ಷಕರಾಗಿ ಕೆಲಸ ಪ್ರಾರಂಭ ಮಾಡಿದ ಕುಂಜುಕುಟ್ಟನ್ ಕೆಲವು ದೇವಾಲಯಗಳಲ್ಲಿ ಅರ್ಚಕರಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಬರಹಗಾರರಾಗಿ ಮತ್ತು ನಟನಾಗಿ ಖ್ಯಾತಿ ಗಳಿಸಿದ್ದರು.

ಕುಂಜುಕುಟ್ಟನ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಮತ್ತು ಹಿತೈಶಿಗಳು ಸಂತಾಪ ಸೂಚಿಸಿದ್ದಾರೆ. ಮಲಯಾಳಂ ಚಿತ್ರರಂಗ ಇವತ್ತು (ಮೇ 11) ಇಬ್ಬರು ಪ್ರಮುಖರನ್ನು ಕಳೆದುಕೊಂಡಿದೆ. ಮಲಯಾಳಂನ ಮತ್ತೋರ್ವ ಖ್ಯಾತ ಚಿತ್ರಕಥೆ ಬರಹಗಾರ ಮತ್ತು ನಿರ್ದೇಶಕ ಡೆನಿಸ್ ಜೋಸೆಫ್ ಇಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಡೆನಿಸ್ ಜೋಸೆಫ್ ನಿಧನಕ್ಕೆ ಖ್ಯಾತನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಸಾಮಾಜಿಕ ಜಾಲತಾಣದ ಕಂಬನಿ ಮಿಡಿದಿದ್ದಾರೆ.
ಕೊರೊನಾ ಎರಡನೇ ಅಲೆ ಅನೇಕ ಜನರನ್ನು ಬಲಿ ಪಡೆಯುತ್ತಿದೆ. ಚಿತ್ರರಂಗದಲ್ಲೂ ಅನೇಕರು ಮಹಾಮಾರಿ ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕ ರಾಮು, ನಿರ್ದೇಶಕ ರೇಣುಕಾ ಶರ್ಮಾ, ನಿರ್ಮಾಪಕ ಡಿ ಎಸ್ ಮಂಜುನಾಥ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಸೇರಿದಂತೆ ಇನ್ನು ಅನೇಕರು ಕೊರೊನಾಗೆ ಬಲಿಯಾಗಿದ್ದಾರೆ.


Click it and Unblock the Notifications











