ಕೇಂದ್ರವನ್ನು ಟೀಕಿಸಿದ ನಟಿಯ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲು
ಕೇಂದ್ರ ಸರ್ಕಾರವನ್ನು ಟೀಕಿಸಿದ ನಟಿ ಐಶಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ನಟಿ ಹಾಗೂ ಸಿನಿಮಾ ನಿರ್ದೇಶಕಿಯೂ ಆಗಿರುವ ಐಶಾ ಸುಲ್ತಾನಾ 'ಲಕ್ಷದ್ವೀಪ ಉಳಿಸಿ' ಅಭಿಯನಾದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ.
ಲಕ್ಷದ್ವೀಪಕ್ಕೆ ಹೊಸದಾಗಿ ನೇಮಕವಾಗಿರುವ ಬಿಜೆಪಿಯ ಪ್ರಫುಲ್ ಪಟೇಲ್ ಮಾಡಿರುವ ಹೊಸ ಕಾನೂನು ಹಾಗೂ ನಿಯಮಗಳಿಂದಾಗಿ ಲಕ್ಷದ್ವೀಪದ ನಾಗರೀಕರಿಗೆ ಸಮಸ್ಯೆ ಎದುರಾಗಿದ್ದು ಇದರ ವಿರುದ್ಧ ಪ್ರತಿಭಟನೆ, ಅಭಿಯಾನಗಳು ಆರಂಭವಾಗಿವೆ.

ಕೆಲ ತಿಂಗಳುಗಳ ಮೊದಲು ಲಕ್ಷದ್ವೀಪದಲ್ಲಿ ಒಂದೂ ಕೋವಿಡ್ ಪ್ರಕರಣಗಳು ಇರಲಿಲ್ಲ. ಅಲ್ಲಿ ಶಿಸ್ತಿನ ನಿಯಮ ಜಾರಿಯಲ್ಲಿತ್ತು ಆದರೆ ಹೊಸ ಆಡಳಿತಾಧಿಕಾರಿ ಪ್ರಫುಲ್ ನಿಯಮಗಳನ್ನು ಬದಲಾಯಿಸಿದ ಮೇಲೆ ಪ್ರತಿದಿನ ನೂರಾರು ಕೋವಿಡ್ ಪ್ರಕರಣಗಳು ವರದಿ ಆಗುತ್ತಿವೆ. ಸಾವು ಸಹ ಸಂಭಿವಿಸಿದೆ.
ಇದರ ಬಗ್ಗೆ ಟಿವಿ ಚರ್ಚೆಯಲ್ಲಿ ಮಾತನಾಡಿದ್ದ ನಟಿ ಐಶಾ, ಆಡಳಿತಾಧಿಕಾರಿ ಪ್ರಫುಲ್ ಅನ್ನು ಟೀಕಿಸುತ್ತಾ, 'ಈ ಮೊದಲು ಲಕ್ಷದ್ವೀಪದಲ್ಲಿ ಒಂದೂ ಕೋವಿಡ್ ಪ್ರಕರಣ ಇರಲಿಲ್ಲ. ಆದರೆ ನಿಯಮ ಸಡಿಲಿಕೆ ಬಳಿಕ ಪ್ರತಿದಿನ ನೂರಾರು ಪ್ರಕರಣ ದಾಖಲಾಗುತ್ತಿದೆ. ಇದು ಕೇಂದ್ರ ನಮ್ಮ ಮೇಲೆ 'ಜೈವಿಕ ಅಸ್ತ್ರ' ಪ್ರಯೋಗಿಸಿದೆ' ಎಂದಿದ್ದರು. ಇದೇ ಹೇಳಿಕೆ ವಿರುದ್ಧ ಈಗ ಐಶಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.
ಲಕ್ಷದ್ವೀಪದ ಬಿಜೆಪಿ ಮುಖಂಡ ಸಿ ಅಬ್ದುಲ್ ಖಾದೆರ್, ಐಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸರ್ಕಾರದ ದೇಶನಿಷ್ಠೆಯನ್ನು ಐಶಾ ಟೀಕಿಸಿದ್ದಾರೆ ಎಂದಿದ್ದು ದೂರು ದಾಖಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಆಯೆಷಾ ವಿರುದ್ಧ ಪ್ರತಿಭಟನೆ ಸಹ ಮಾಡಿದ್ದಾರೆ.
ಲಕ್ಷದ್ವೀಪದಲ್ಲಿ ಹಲವು ವರ್ಷಗಳ ಕಾಲ ಐಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಪರಿಪಾಟವಿತ್ತು. ಆದರೆ ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ರಾಜಕಾರಣಿ, ಗುಜರಾತ್ ಬಿಜೆಪಿ ಮುಖಂಡ ಪ್ರಫುಲ್ ಪಟೇಲ್ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.
Recommended Video
ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ಪ್ರಫುಲ್ ಪಟೇಲ್ರ ನಿರ್ಧಾರಗಳು ಜನವಿರೋಧಿ, ಲಕ್ಷದ್ವೀಪದ ದ್ವೀಪ ಸಮೂಹಗಳ ನೈಸರ್ಗಿಕ ಸಂಪತ್ತಿಗೆ ಕುತ್ತು ತರುತ್ತಿವೆ ಎಂದು ಆರೋಪಿಸಿ ಈಗಾಗಲೇ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.


Click it and Unblock the Notifications











