14 ವರ್ಷದ ನಂತರ ರೀಮೇಕ್ ಚಿತ್ರದಲ್ಲಿ ಶಿವಣ್ಣ!
,
ಸ್ಯಾಂಡಲ್ ವುಡ್ ನಲ್ಲಿ ಸದ್ಯ ರೀಮೇಕ್ ಚಿತ್ರಗಳಿಂದ ದೂರವಿರುವ ಏಕೈಕ ನಟ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಆದ್ರೀಗ ಶಿವರಾಜ್ ಕುಮಾರ್ ಕೂಡ ರೀಮೇಕ್ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.
ಈ ಮೂಲಕ ತಮ್ಮ ಹದಿನಾಲ್ಕು ವರ್ಷಗಳ ಶಪತವನ್ನ ಶಿವಣ್ಣ ಮುರಿಯಲು ನಿರ್ಧರಿಸಿದ್ದಾರ ಎಂಬ ಚರ್ಚೆಗಳು ಈಗ ಎಲ್ಲಡೆ ಕೇಳಿ ಬರುತ್ತಿದೆ.
ಅಷ್ಟಕ್ಕೂ, ಧಿಡೀರ್ ಅಂತ ಶಿವರಾಜ್ ಕುಮಾರ್ ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದು ಸದ್ಯದ ಕುತೂಹಲ. ಮೂಲಗಳ ಪ್ರಕಾರ ಸೆಂಚುರಿ ಸ್ಟಾರ್ ಗೆ ಮಲಯಾಳಂ ಚಿತ್ರದ ಪಾತ್ರವೊಂದು ಕಾಡುತ್ತಿದೆಯಂತೆ. ಹೀಗಾಗಿ ರೀಮೇಕ್ ಚಿತ್ರವಾದರೂ ಪರವಾಗಿಲ್ಲ, ಆ ಸಿನಿಮಾ ಮಾಡಲೇಬೇಕು ಎಂಬ ಯೋಚನೆಯಲ್ಲಿದ್ದಾರಂತೆ.[ಮೋಹನ್ ಲಾಲ್ 'ಒಪ್ಪಂ' ಕನ್ನಡಕ್ಕೆ ರಿಮೇಕ್: ಹೀರೋ ಯಾರು ಗೊತ್ತಾ ? ]

ಮತ್ತೆ ರೀಮೇಕ್ ಕಡೆ ಶಿವಣ್ಣ!
ಶಿವರಾಜ್ ಕುಮಾರ್ ಕಡೆಯದಾಗಿ ರೀಮೇಕ್ ಸಿನಿಮಾ ಮಾಡಿದ್ದು 2002ರಲ್ಲಿ. ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಒಟ್ಟಾಗಿ ಅಭಿನಯಿಸಿದ್ದ 'ಕೋದಂಡರಾಮ' ಚಿತ್ರ. ಇದು ಮಲಯಾಳಂನ 'ತೆಂಕಾಶಿಪಟ್ಟಣಂ' ಚಿತ್ರದ ಕನ್ನಡ ರೀಮೇಕ್ ಆಗಿತ್ತು.

ರೀಮೇಕ್ ಮಾಡಲ್ಲ ಎಂದಿದ್ದ ಶಿವಣ್ಣ
'ಕೋದಂಡರಾಮ' ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಯಾವ ರೀಮೇಕ್ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ. ಇನ್ಮುಂದೆ ಯಾವ ರೀಮೇಕ್ ಸಿನಿಮಾವನ್ನ ಮಾಡಲ್ಲ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು.

14 ವರ್ಷದ ನಂತರ ರೀಮೇಕ್ ನಲ್ಲಿ ಸೆಂಚುರಿಸ್ಟಾರ್ !
ಸುಮಾರು 14 ವರ್ಷದ ನಂತರ ಮತ್ತೆ ರೀಮೇಕ್ ಚಿತ್ರದ ಕಡೆ ಸೆಂಚುರಿಸ್ಟಾರ್ ಒಲವು ತೋರಿದ್ದಾರೆ ಎಂಬ ಮಾತುಗಳು ಶಿವಣ್ಣನ ಆಪ್ತ ವಲಯದಿಂದ ಕೇಳಿಬರುತ್ತಿದೆ. ಅಷ್ಟಕ್ಕೂ, ಶಿವಣ್ಣನ ಮನಸ್ಸು ತುಡಿಯುತ್ತಿರುವ ಆ ಚಿತ್ರ ಮೋಹನ್ ಲಾಲ್ ಅಭಿನಯಿಸಿದ್ದ 'ಒಪ್ಪಂ'.

'ಒಪ್ಪಂ' ಸೂಪರ್ ಹಿಟ್
ಮೋಹನ್ ಲಾಲ್ ನಟಿಸಿದ್ದ 'ಒಪ್ಪಂ' ಸೆಪ್ಟಂಬರ್ ನಲ್ಲಷ್ಟೇ ತೆರೆಕಂಡಿತ್ತು. ಪ್ರಿಯದರ್ಶನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಭಾವನಾತ್ಮಕ ಕಥಾಹಂದರವನ್ನ ಹೊಂದಿತ್ತು. ಮೋಹನ್ ಲಾಲ್ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ ಬಂದಿತ್ತು. 'ಇದಕ್ಕೆ ಭಾಷೆಯ ಮಿತಿಯಿಲ್ಲ. ಎಲ್ಲರೂ ನೊಡಲೇಬೇಕಾದ ಸಿನಿಮಾ' ಅಂತ ವಿಮರ್ಶಕರಿಂದ ಶಬ್ಬಾಶ್ ಎನಿಸಿಕೊಂಡಿತ್ತು. ಮೋಹನ್ ಲಾಲ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಸಮುದ್ರಕಣಿ, ವಿಮಲ ರಾಮನ್, ಪುಟಾಣಿ ಮೀನಾಕ್ಷಿ ಸೇರಿದಂತೆ ಹಲವರು ಅಭಿನಯಿಸಿದ್ದರು.

ಕುರುಡನ ಪಾತ್ರದಲ್ಲಿ ಶಿವಣ್ಣ!
ಚಿತ್ರದಲ್ಲಿ ನಾಯಕ ಅಂಧನಾಗಿರುತ್ತಾನೆ. ಆದರೆ, ತನ್ನ ಶ್ರವಣ, ತೀಕ್ಷ್ಣತೆ, ಹಾಗೂ ಗ್ರಹಣ ಶಕ್ತಿಯಿಂದ ಎಲ್ಲವನ್ನೂ ಗುರುತಿಸುವ ವಿಶೇಷ ಶಕ್ತಿ ಹೊಂದಿರುತ್ತಾನೆ. ಈ ಪಾತ್ರದಲ್ಲಿ ಮೋಹನ್ ಲಾಲ್ ಅತ್ಯಾದ್ಬುತವಾದ ನಟನೆ ಮಾಡಿದ್ರು. ಹೀಗಾಗಿ, ಈ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

'ಹಯಗ್ರೀವ' ಸಂಸ್ಥೆಯಡಿ ನಿರ್ಮಾಣ
'ಒಪ್ಪಂ' ಚಿತ್ರದ ರಿಮೇಕ್ ಹಕ್ಕನ್ನ 'ಹಯಗ್ರೀವ ಸಂಸ್ಥೆ' ಕೊಂಡುಕೊಂಡಿದೆ ಸಂಪತ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ. 'ಹಯಗ್ರೀವ' ಕನ್ನಡದಲ್ಲಿ ಸಿನಿಮಾ ಮಾಡುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಕನ್ನಡದ ಚಿತ್ರವೊಂದಕ್ಕೆ ಬಂಡವಾಳ ಹೂಡಿದ್ದು, ತೆಲುಗಿನ 'ಕುಮಾರಿ21F' ಚಿತ್ರವನ್ನ ಕನ್ನಡದಲ್ಲಿ ನಿರ್ಮಾಣ ಮಾಡುತಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಅವರ ಎರಡನೇ ಪುತ್ರ ಪ್ರಣಾಮ್ ನಾಯಕನಾಗಿದ್ದಾರೆ.

ಶಿವಣ್ಣ ನಟಿಸುವುದು ಖಚಿತವಾಗಿಲ್ಲ
ಹೀಗೆ ಸುದ್ದಿಗಳು ಸ್ಯಾಂಡಲ್ ವುಡ್ ಬೀದಿ ಬೀದಿಯಲ್ಲಿ ಹರಿದಾಡುತ್ತಿದೆ. ಇದುವರೆಗೂ ಶಿವರಾಜ್ ಕುಮಾರ್ 'ಒಪ್ಪಂ' ರಿಮೇಕ್ ಚಿತ್ರಕ್ಕೆ ಯಾವುದೇ ರೀತಿಯ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗುತ್ತಿದೆ. ಆದ್ರೆ, ಈ ಎಲ್ಲಾ ಅಂತೆ ಕಂತೆಗಳಿಗೆ ಸ್ವತಃ ಹ್ಯಾಟ್ರಿಕ್ ಹೀರೋನೇ ತೆರೆ ಎಳೆಯಬೇಕಿದೆ.


Click it and Unblock the Notifications











