ಬಿಡುಗಡೆಗೆ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಬಂತು 'ಉದ್ಘರ್ಷ'
ಕನ್ನಡದ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಸಿನಿಮಾ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು, ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ.
ಕನ್ನಡ, ತೆಲುಗು ಭಾಷೆಯಲ್ಲಿ ತಯಾರಾಗಿರುವ ಉದ್ಘರ್ಷ ಸಿನಿಮಾ ತಮಿಳಿನಲ್ಲೂ ಡಬ್ ಆಗಿ ತೆರೆಕಾಣಲಿದೆ. ಈ ಮಧ್ಯೆ ಮಲಯಾಳಂ ಭಾಷೆಯಿಂದಲೂ ಈ ಚಿತ್ರಕ್ಕೆ ಬೇಡಿಕೆ ಬಂದಿದ್ದು, ಮಾಲಿವುಡ್ ಪ್ರೇಕ್ಷಕರು ಈ ಥ್ರಿಲ್ಲಿಂಗ್ ಚಿತ್ರವನ್ನ ನೋಡಬಹುದು.

ದೇಸಾಯಿ ಚಿತ್ರಗಳು ಈ ಹಿಂದೆಯೂ ಮಲಯಾಳಂಗೆ ಡಬ್ ಆಗಿದ್ದವು ಈ ಮಾತನಾಡಿದ ದೇಸಾಯಿ, ''ನನ್ನ ತರ್ಕ, ನಿಷ್ಕರ್ಷ, ಮರ್ಮ ಚಿತ್ರ ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೇ ಹಿನ್ನೆಲೆಯಲ್ಲಿ ಮಲಯಾಳಂ ಇಂಡಸ್ಟ್ರೀಯಿಂದ ಉದ್ಘರ್ಷಕ್ಕೂ ಬೇಡಿಕೆ ಬಂದ ಹಿನ್ನೆಲೆ, ನಾವೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ'' ಎಂದು ಸಂತಸ ಹಂಚಿಕೊಂಡರು.

ಈಗಾಗಲೇ ಕನ್ನಡ, ತೆಲುಗು, ತಮಿಳು ಡಬ್ಬಿಂಗ್ ಮುಗಿದಿದ್ದು ಮಲಯಾಳಂ ಭಾಷೆಯ ಡಬ್ಬಿಂಗ್ ಕಾರ್ಯವೂ ಭರದಿಂದ ಸಾಗಿದೆ. ಸ್ವತಃ ನಿರ್ದೇಶಕರೇ ತಿಳಿಸಿದಂತೆ ಉದ್ಘರ್ಷ ಚಿತ್ರದ ಟ್ರೈಲರ್ ನಾಲ್ಕೂ ಭಾಷೆಯಲ್ಲಿ ಸದ್ಯದಲ್ಲೇ ಬಿಡುಗಡೆಮಾಡಲಾಗುವುದಂತೆ.
ಉದ್ಘರ್ಷ ತಾರಬಳಗ
ಮಿಸ್ಟರ್ ವರ್ಲ್ಡ್ ಸಿಂಗಮ್ -3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, 'ಕಬಾಲಿ' ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕಿಶೋರ್, ವಂಶಿಕೃಷ್ಣ, ಶ್ರವಣ್ ರಾಘವೇಂದ್ರ, ಶ್ರದ್ಧಾ ದಾಸ್, ಮತ್ತು ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಬಹುದೊಡ್ಡ ತಾರಾಗಣವನ್ನ ಒಳಗೊಂಡಿದೆ.

ಇನ್ನು ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ .R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.


Click it and Unblock the Notifications











