'ದಿ ಕೇರಳ ಸ್ಟೋರಿ' ವಿವಾದ: ಎಲ್ಲದಕ್ಕೂ ಸಾಕ್ಷಿ ಇದೆ ಎಂದ ಶಾ
'ದಿ ಕಶ್ಮೀರ್ ಫೈಲ್ಸ್' ಸಿನಿಮಾದ ಬಳಿಕ ಅದೇ ಮಾದರಿಯ ಧಾರ್ಮಿಕ ವಿಷಯಗಳ ಬಗೆಗಿನ ಸಿನಿಮಾಗಳ ಹೆಚ್ಚಾಗುತ್ತಿವೆ. ಇದೇ ಸಾಲಿಗೆ ಸೇರಿದೆ 'ದಿ ಕೇರಳ ಸ್ಟೋರಿ'.
ಕೇರಳದಿಂದ ವಿದೇಶಕ್ಕೆ ಹೋಗಿ ಐಸಿಸ್ ಸೇರಿದ ಮುಸ್ಲಿಂ ಮಹಿಳೆಯರ ಕತೆಯನ್ನು ಈ ಸಿನಿಮಾ ಹೇಳುತ್ತದೆ ಎಂದು ಚಿತ್ರತಂಡ ಮೊದಲೇ ತಿಳಿಸಿತ್ತು. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ದೊಡ್ಡ ಮಟ್ಟದ ವಿವಾದ ಹುಟ್ಟು ಹಾಕಿದೆ.
ವಿವಾದಕ್ಕೀಡಾಗಿರುವ ಟೀಸರ್ನಲ್ಲಿ, ''ಮಹಿಳೆಯೊಬ್ಬಾಕೆ (ಅದಾ ಶರ್ಮಾ) ಬುರ್ಖಾ ಧರಿಸಿ, ನಾನು ಶಾಲಿನಿ ಉನ್ನಿಕೃಷ್ಣನ್, ನಾನು ನರ್ಸ್ ಆಗಿ ಜನರ ಸೇವೆ ಮಾಡಲು ಬಯಸಿದ್ದೆ. ಆದರೆ ನಾನೀಗ ಫಾತಿಮಾ ಬಾ, ನಾನೀಗ ಐಸಿಎಸ್ ಭಯೋತ್ಪಾದಕಿ. ನಾನೀಗ ಅಫ್ಗನಿಸ್ತಾನದ ಜೈಲಿನಲ್ಲಿದ್ದೀನಿ. ಇಲ್ಲಿ ನಾನೊಬ್ಬಳೇ ಇಲ್ಲ. ನನ್ನಂಥಹಾ 32,000 ಯುವತಿಯರಿದ್ದಾರೆ. ಅವರನ್ನೆಲ್ಲ ಧರ್ಮಾಂತರಗೊಳಿಸಿ ಸಿರಿಯಾ ಹಾಗೂ ಯೆಮನ್ನ ಮರಳುಗಾಡಿನಲ್ಲಿ ಹೂತುಹಾಕಲಾಗಿದೆ'' ಎನ್ನುತ್ತಾರೆ.

ಮುಂದುವರೆದು, ''ಸಾಮಾನ್ಯ ಹೆಣ್ಣುಮಕ್ಕಳನ್ನು ಧರ್ಮಾಂತರಗೊಳಿಸಿ, ಅಪಾಯಕಾರಿ ಟೆರರಿಸ್ಟ್ ಅನ್ನಾಗಿ ಮಾರ್ಪಡಿಸುವ ದೊಡ್ಡ ಕಾರ್ಖಾನೆಯೇ ಕೇರಳದಲ್ಲಿದೆ. ಅದೂ ಬಹಿರಂಗವಾಗಿ. ಇದನ್ನು ತಡೆಯಲು ಯಾರೂ ಇಲ್ಲವೆ? ಇದು ನನ್ನೊಬ್ಬಳ ಕತೆಯಲ್ಲ 32,000 ಹೆಣ್ಣುಮಕ್ಕಳ ಕತೆಯೂ ಅಲ್ಲ. ಇದು ಕೇರಳದ ಕತೆ'' ಎಂದಿದ್ದಾಳೆ ಆ ಬುರ್ಖಾ ಧರಿಸಿದ ಮಹಿಳೆ. ಈ ಟೀಸರ್ ಈಗ ವಿವಾದಕ್ಕೆ ಕಾರಣವಾಗಿದೆ. ಕೆಲವು ರಾಜಕಾರಣಿಗಳು ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪತ್ರಕರ್ತರು ಸಹ ಈ ಬಗ್ಗೆ ತನಿಖೆ ನಡೆಯಬೇಕೆಂದು ಸಿಎಂಗೆ ಪತ್ರ ಬರೆದಿದ್ದಾರೆ.
ಇದೀಗ ಈ ಸಿನಿಮಾದ ನಿರ್ಮಾಪಕ ವಿಪುಲ್ ಶಾ ಈ ಬಗ್ಗೆ ಮಾತನಾಡಿದ್ದು, ''ನಮ್ಮನ್ನು ಕೇಳಲಾಗುವ ಎಲ್ಲ ಪ್ರಶ್ನೆಗಳಿಗೂ ಶೀಘ್ರದಲ್ಲಿಯೇ ಉತ್ತರಿಸುತ್ತೇವೆ. ಸಾಕ್ಷ್ಯವಿಲ್ಲದೆ ಯಾವುದನ್ನೂ ನಾವು ಮಾಡುತ್ತಿಲ್ಲ. ನಾವು ಸಾಕ್ಷ್ಯಗಳನ್ನು ಒದಗಿಸಿದಾಗ ನಾವು ಹೇಳುತ್ತಿರುವ ಸತ್ಯ ಜನರಿಗೆ ಅರಿವಾಗಲಿದೆ. ಅದನ್ನು ಅವರು ಒಪ್ಪುತ್ತಾರೊ ಇಲ್ಲವೊ ಎಂಬುದು ಅವರಿಗೆ ಬಿಟ್ಟಿದ್ದು. ಸಿನಿಮಾ ಮಾಡುವ ಮುನ್ನ ನಿರ್ದೇಶಕ ಸುದಿಬ್ತೊ ಸೇನ್ ಇದಕ್ಕಾಗಿಯೇ ನಾಲ್ಕು ವರ್ಷ ಸಂಶೋಧನೆ ನಡೆಸಿ ಸಿನಿಮಾ ಮಾಡಿದ್ದಾರೆ'' ಎಂದಿದ್ದಾರೆ.
''ನಾವು ದೊಡ್ಡ ದುರಂತದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ಈ ಬಗ್ಗೆ ನಾವು ಮೊದಲೇ ಮಾತುಕತೆ ನಡೆಸಿ, ಚರ್ಚೆ ನಡೆಸಿಯೇ ಸಿನಿಮಾ ಮಾಡಿದ್ದೇವೆ. ನಿರ್ಮಾಪಕನಾಗಿ ಯಾವ ಕತೆ ನನ್ನ ಹೃದಯಕ್ಕೆ ತಾಕುತ್ತದೆಯೋ ಅದನ್ನು ಮಾತ್ರವೇ ಸಿನಿಮಾ ಮಾಡುತ್ತೇನೆ'' ಎಂದಿದ್ದಾರೆ.


Click it and Unblock the Notifications











