ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೋಹನ್ ಲಾಲ್
ನಾಲ್ಕು ದಶಕಗಳ ತಮ್ಮ ಸುದೀರ್ಘ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ 400ಕ್ಕೂ ಅಧಿಕ ಚಿತ್ರಗಳನ್ನು ಮಾಡಿರುವ ಹೆಗ್ಗಳಿಕೆ ಮೋಹನ್ ಲಾಲ್ ಅವರದ್ದು. ತಮ್ಮ ಅಭಿನಯದಿಂದ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳ ಹೃದಯವನ್ನು ಗೆದ್ದ ಇವರನ್ನು ಇವರ ಅಭಿಮಾನಿ ಬಳಗ ಮತ್ತು ಭಾರತೀಯ ಚಿತ್ರರಂಗ ''ಲಾಲೆಟ್ಟನ್'' ಎಂಬ ಹೆಸರಿಂದನೇ ಕರೆಯುತ್ತೆ. ಜಯಘೋಷ ಮೊಳಗಿಸುತ್ತೆ.
ಇಂಥಾ ಮೋಹನ್ ಲಾಲ್ ಅವರಿಗೆ ಇತ್ತೀಚಿಗಷ್ಟೇ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಸಿಕ್ಕಿದೆ. ಸೆಪ್ಟೆಂಬರ್ 23ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ನಡೆಯಲಿದೆ. ಹೀಗಿರುವಾಗ ಇದೀಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲಿಯೇ ಮೋಹನ್ ಲಾಲ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದುವೇ ''ದೃಶ್ಯಂ 3''.

ಹೌದು, ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿತ್ರ ''ದೃಶ್ಯಂ''. ಕ್ರೈಂ ಥ್ರಿಲ್ಲರ್ ಜಾನರಿನ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಭಾರೀ ಹಣವನ್ನು ಗಳಿಸುವುದಲ್ಲದೇ ಮೋಹನ್ ಲಾಲ್ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿತ್ತು.
ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ ಆದ ಈ ಚಿತ್ರದ ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು.
ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್, ಮೋಹನ್ ಲಾಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಜೀವ ತುಂಬಿದ್ದರು. ಅದಾದ ನಂತರ ''ದೃಶ್ಯಂ 2'' ಕೂಡ ತೆರೆ ಕಂಡಿತ್ತು. ಮೊದಲ ಭಾಗದಂತೆಯೇ ಎಲ್ಲ ಭಾಷೆಯಲ್ಲಿ ಈ ಚಿತ್ರ ಕೂಡ ರಿಮೇಕ್ ಆಗಿತ್ತು. ಈಗ ಮೂರನೇ ಭಾಗದ ಸರದಿ.
ಹೌದು, ಅಸಲಿಗೆ ''ದೃಶ್ಯಂ 3'' ಬರುತ್ತೆ ಎನ್ನುವ ಮಾತು ಕಳೆದ ಅನೇಕ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಈ ಸುದ್ದಿ ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಈ ಸುದ್ದಿಯ ಮೇಲೆ ಮೋಹನ್ ಲಾಲ್ ಅವರನ್ನೊಳಗೊಂಡು ಚಿತ್ರತಂಡ ಅಧಿಕೃತ ಮುದ್ರೆಯನ್ನು ಒತ್ತಿತ್ತಾದರೂ ಚಿತ್ರದ ಮುಹೂರ್ತ ಸಮಾರಂಭ ಯಾವಾಗ..? ಚಿತ್ರದ ತಾರಾಬಳಗವೇನು..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರ ಇರಲಿಲ್ಲ. ಆದರೆ ಈಗ ಉತ್ತರ ಸಿಕ್ಕಿದೆ. ಚಿತ್ರದ ಮುಹೂರ್ತ ಸಮಾರಂಭ ಇಂದು (ಸೆಪ್ಟೆಂಬರ್ 22) ಸರಳವಾಗಿ ನೆರವೇರಿದೆ.

ಮುಹೂರ್ತ ಸಮಾರಂಭದ ನಂತರ ಮಾತನಾಡಿರುವ ಮೋಹನ್ ಲಾಲ್, ಎಲ್ಲಾ ಚಿತ್ರಗಳು ಕೂಡ ಗೆಲ್ಲಬೇಕು ಎನ್ನುವ ಸದುದ್ದೇಶದೊಂದಿಗೆ ನಾವು ಕೆಲಸ ಮಾಡುತ್ತೇವೆ. ಮುಹೂರ್ತ ಸಮಾರಂಭದಂದು ಪ್ರಾರ್ಥನೆ ಮಾಡುತ್ತೇವೆ. ಈ ಚಿತ್ರ ಕೂಡ ಗೆಲ್ಲುತ್ತೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ. ಮೊದಲ ಮತ್ತು ಎರಡನೇ ಭಾಗವನ್ನು ಮೆಚ್ಚಿಕೊಂಡ ಪ್ರೇಕ್ಷಕರಿಗೆ ಈ ಚಿತ್ರ ಕೂಡ ಇಷ್ಟವಾಗಿಯೇ ಆಗುತ್ತೆ ಎನ್ನುವ ಭರವಸೆ ನನಗೆ ಇದೆ ಎಂದು ಹೇಳಿದ್ದಾರೆ.
ಇನ್ನೂ ಜಾರ್ಜ್ಕುಟ್ಟಿಯ ಜಗತ್ತು ಈ ಬಾರಿ ಹೇಗಿರಲಿದೆ. ಯಾವೆಲ್ಲಾ ಕೌತುಕಗಳು ಇಲ್ಲಿ ಅಡಗಿವೆ ಎನ್ನುವ ಕುತೂಹಲ ಹಲವರಲ್ಲಿದೆ. ಇದಕ್ಕೆ ಉತ್ತರ ನೀಡಿರುವ ನಿರ್ದೇಶಕ ಜೀತು ಜೋಸೆಫ್ ''ದೃಶ್ಯಂ 2'' ಚಿತ್ರದ ಕಥೆ ಎಲ್ಲಿ ಮುಕ್ತಾಯವಾಗಿತ್ತೋ ಅಲ್ಲಿಂದ ನಾಲ್ಕೂವರೆ ವರ್ಷಗಳ ನಂತರ ''ದೃಶ್ಯಂ-3'' ಕಥೆ ಆರಂಭವಾಗುತ್ತೆ ಎಂದು ಹೇಳಿದ್ದಾರೆ. ಹಿಂದಿನ ಎರಡು ಚಿತ್ರಗಳಂತೆ ಈ ಚಿತ್ರ ಕೂಡ ನಿಮ್ಮನ್ನು ಅಚ್ಚರಿಗೆ ದೂಡುವ ವಿಶ್ವಾಸ ನನಗೆ ಇದೆ ಎಂದು ಹೇಳಿದ್ದಾರೆ.
ಹಿಂದಿನ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಆಂಟೋನಿ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೋಹನ್ ಲಾಲ್ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದ ಮೀನಾ ಇಲ್ಲಿಯೂ ಮುಂದುವರೆಯಲಿದ್ದು ಜಾರ್ಜ್ ಕುಟ್ಟಿಯ ಮಕ್ಕಳ ಪಾತ್ರಗಳು ಕೂಡ ಮುಂದುವರೆಯಲಿವೆ. ಇವರ ಹೊರತಾಗಿ ಚಿತ್ರದಲ್ಲಿ ಮತ್ತೆ ಯಾರೆಲ್ಲಾ ಇದ್ದಾರೆ ಎನ್ನುವುದಕ್ಕೆ ಇನ್ನೂ ಉತ್ತರ ಸಿಗಬೇಕಿದೆ. ಮುಂದಿನ ಎರಡು ತಿಂಗಳ ಕಾಲ ಕೇರಳದ ಸುತ್ತ ಮುತ್ತ ''ದೃಶ್ಯಂ 3'' ಚಿತ್ರದ ಚಿತ್ರೀಕರಣ ನಡೆಯಲಿದೆ.


Click it and Unblock the Notifications











