'ಚಪಲ ಚೆನ್ನಿಗರಾಯ' ಕಾಶಿನಾಥ್ ಪತ್ನಿಯಾಗಿ ನಟಿಸಿದ್ದ ನಟಿ ಇನ್ನಿಲ್ಲ
ಕಲ್ಪನಾ ಎಂದೇ ಖ್ಯಾತರಾಗಿದ್ದ ಮಲೆಯಾಳಂ ಮೂಲದ ಬಹುಭಾಷಾ ನಟಿ ಕಲ್ಪನಾ ರಂಜನಿ ಅವರು ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೈದರಾಬಾದಿನಲ್ಲಿ ದ್ವಿಭಾಷಾ ಚಿತ್ರವೊಂದರ ಚಿತ್ರೀಕರಣದಲ್ಲಿ ತೊಡಗಿದ್ದ ಕಲ್ಪನಾ ಅವರು ಹೋಟೆಲ್ ನಲ್ಲಿ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಕ್ಷಣವೇ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಕಲ್ಪನಾ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದವರು. ಪುತ್ರಿ ಶ್ರೀಮಯಿ, ತಾಯಿ ವಿಜಯಲಕ್ಷ್ಮಿ, ಸೋದರಿಯರಾದ ನಟಿ ಊರ್ವಶಿ, ಕಲಾರಂಜಿನಿ ಅವರು ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಇತ್ತೀಚೆಗೆ ಮಲೆಯಾಳಂನಲ್ಲಿ ಸೂಪರ್ ಹಿಟ್ ಆಗಿರುವ ಮಮ್ಮೂಟಿ ಅವರ ಮಗ ದುಲ್ಕರ್ ಸಲ್ಮಾನ್ ಹಾಗೂ ಪಾರ್ವತಿ ಅಭಿನಯದ 'ಚಾರ್ಲಿ' ಇವರ ಕೊನೆಯ ಚಿತ್ರವಾಗಿದೆ.
ಕನ್ನಡದಲ್ಲಿ ಕಾಶಿನಾಥ್ ಅಭಿನಯದ ಚಪಲ ಚನ್ನಿಗರಾಯ ಚಿತ್ರದಲ್ಲಿ ಕಾಶಿನಾಥ್ ಪತ್ನಿಯಾಗಿ ನಟಿಸಿದ್ದರು. ರಮೇಶ್ ಅರವಿಂದ್ ಅಭಿನಯದ ತಮಿಳು ಚಿತ್ರ 'ಸತಿ ಲೀಲಾವತಿ' ಯಲ್ಲಿ ರಮೇಶ್ ಪತ್ನಿಯಾಗಿ ನಟಿಸಿದ್ದರು. ಇದೇ ಚಿತ್ರ ಕನ್ನಡಕ್ಕೆ ರಿಮೇಕ್ ಆಗಿ 'ರಾಮಾ ಭಾಮಾ ಶಾಮಾ' ಆಗಿ ಯಶಸ್ಸು ಗಳಿಸಿತು. ಕನ್ನಡ ಆವೃತ್ತಿಯಲ್ಲಿ ಕಲ್ಪನಾ ಅವರ ಸೋದರಿ ನಟಿ ಊರ್ವಶಿ ಅವರು ರಮೇಶ್ ಪತ್ನಿ ಪಾತ್ರ ನಿರ್ವಹಿಸಿದರು.
ಚವರಾ ವಿಪಿ ನಾಯರ್ ಹಾಗೂ ವಿಜಯಲಕ್ಷ್ಮಿ ದಂಪತಿ ಪುತ್ರಿಯಾಗಿ ಜನಿಸಿದ ಕಲ್ಪನಾ ಅವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಕಾದಂಬರಿಕಾರ ಎಂಟಿ ವಾಸುದೇವನ್ ನಾಯರ್ ಅವರ ಮಂಜು ಚಿತ್ರದ ಮೂಲಕ ನಟಿಯಾಗಿ ಬೆಳಕಿಗೆ ಬಂದರು.
ಸತಿ ಲೀಲಾವತಿ, ಇಂಡಿಯನ್ ರುಪಿ, ಕೇರಳ ಕೆಫೆ, ಸ್ಪಿರಿಟಿ ಮುಂತಾದವರು ಅವರ ಜನಪ್ರಿಯ ಚಿತ್ರಗಳು, ಥನಿಚಲ್ಲಾ ನ್ಯಾನ್ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ನಿರ್ದೇಶಕ ಅನಿಲ್ ಕುಮಾರ್ ಅವರನ್ನು ವರಿಸಿದ್ದ ಕಲ್ಪನಾ ಅವರು 2012ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ನಾಯಕಿಯಾಗಿ, ಕಾಮಿಡಿ ಸ್ಟಾರ್ ಆಗಿ, ರಿಯಾಲಿಟಿ ಶೋ ನಿರೂಪಕಿಯಾಗಿ ಕಲ್ಪನಾ ಜನಪ್ರಿಯರಾಗಿದ್ದಾರೆ.


Click it and Unblock the Notifications











