'ದೃಶ್ಯಂ- 3' ನಿರಾಸೆ ಮೂಡಿಸಲು ಕಾರಣ ಏನು? ನಿರ್ದೇಶಕರು ಎಡವಿದ್ದು ಎಲ್ಲಿ? ಮುಂದೇನು?
ಸೂಪರ್ ಹಿಟ್ ಸರಣಿಯ ಮುಂದುವರೆದ ಭಾಗ ಅಂದಾಕ್ಷಣ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಅದಾಗಲೇ ಒಂದಷ್ಟು ಪ್ರೇಕ್ಷಕರು ಸಿನಿಮಾ ನೋಡ್ಲೇಬೇಕು ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ಸಿನಿಮಾ ಚೆನ್ನಾಗಿದ್ದರೆ ಯಶಸ್ಸು ಕಟ್ಟಿಟ್ಟಬುತ್ತಿ. ಆದರೆ ಅದೇ ನಿರೀಕ್ಷೆ ಕೆಲವೊಮ್ಮೆ ಸಿನಿಮಾ ಹಿನ್ನಡೆಗೂ ಕಾರಣವಾಗಬಹುದು. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬರದಿದ್ದರೆ ಕಷ್ಟ ಕಷ್ಟ.
ಮೋಹನ್ ಲಾಲ್ ನಟನೆಯ 'ದೃಶ್ಯಂ' ಸರಣಿ ಸಿನಿಮಾಗಳ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಒಂದು ಸಣ್ಣ ಘಟನೆ ಸುತ್ತಾ 3 ಭಾಗಗಳಾಗಿ ಸಿನಿಮಾ ತೆರೆಗೆ ಬಂದು ಗೆದ್ದಿದೆ. ಈಗಾಗಲೇ ಪಾರ್ಟ್- 3 ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. 3 ದಿನಕ್ಕೆ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದರೆ ಹಿಂದಿನ ಎರಡು ಸಿನಿಮಾಗಳ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸಿಲ್ಲ. ತೃಪ್ತಿ ನೀಡಿಲ್ಲ. ಸರಣಿಯಲ್ಲೇ ಕೊಂಚ ಹಿಂದೆ ಬಿದ್ದ ಸಿನಿಮಾ ಎನಿಸಿಕೊಂಡಿದೆ. ಅದಕ್ಕೆ ಸಾಕಷ್ಟು ಕಾರಣಗಳಿವೆ.

ಸೀಕ್ವೆಲ್ ಸಿನಿಮಾ ಎನ್ನುವುದು ಈಗ ವ್ಯವಹಾರದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಒಂದು ಸಿನಿಮಾ ಗೆದ್ದಿದೆ, ಹಾಗಾಗಿ ಜನ ಬರ್ತಾರೆ, ಎರಡನೇ ಸಿನಿಮಾವನ್ನು ಮತ್ತಷ್ಟು ದೊಡ್ಡದಾಗಿ ಕಟ್ಟಿಕೊಟ್ಟು ಬಾಕ್ಸಾಫೀಸ್ ಕೊಳ್ಳೆ ಹೊಡೆದು ಬಿಡೋಣ ಎಂದು ನಿರ್ಧರಿಸುತ್ತಾರೆ. 'ದೃಶ್ಯಂ'- 3 ವಿಚಾರದಲ್ಲಿ ನಿರ್ದೇಶಕ ಜೀತು ಜೋಸೆಫ್ ಈ ತಪ್ಪು ಮಾಡಬಾರದಿದತ್ತು. ಏನೇ ಮಾಡಿದ್ರು ಜನ ನೋಡ್ತಾರೆ ಎಂದುಕೊಳ್ಳದೇ ಒಳ್ಳೆ ಸಿನಿಮಾ ಮಾಡುವ ಪ್ರಯತ್ನ ಮಾಡಬೇಕಿತ್ತು.
2 ಗಂಟೆ 38 ನಿಮಿಷಗಳ 'ದೃಶ್ಯಂ- 3' ಸಿನಿಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಮೊದಲಾರ್ಧ ಬಹಳ ನಿರಾಸೆ ಮೂಡಿಸುತ್ತದೆ. ಕೊನೆ 20 ನಿಮಿಷ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿ ಕುತೂಹಲ ಹೆಚ್ಚಿಸುತ್ತದೆ. ಅದಕ್ಕಾಗಿ ಪ್ರೇಕ್ಷಕರು 2 ಗಂಟೆ ಕಾಯುವಂತೆ ಮಾಡಿಬಿಡುತ್ತದೆ. ಮೋಹನ್ ಲಾಲ್ ನಟನೆ ಮಾತ್ರವೇ ಸಿನಿಮಾವನ್ನು ಸೋಲಿನಿಂದ ಪಾರು ಮಾಡಿದೆ. ಇನ್ನುಳಿದಂತೆ ಸಿನಿಮಾ ಬೇಸರ ಮೂಡಿಸುತ್ತದೆ.

'ದೃಶ್ಯಂ' ಸರಣಿ ಇಷ್ಟವಾಗುವುದೇ ಫ್ಯಾಮಿಲಿ ಡ್ರಾಮಾ, ಭಾವನಾತ್ಮಕ ಪದರ ಹಾಗೂ ಜಾರ್ಜ್ಕುಟ್ಟಿ ಚಾಣಾಕ್ಷತನ, ತಿರುವುಗಳು. ಈ ಚಿತ್ರದಲ್ಲಿ ಇದನ್ನೆಲ್ಲಾ ಕೊಂಚ ಹೆಚ್ಚಾಗಿಯೇ ತೋರಿಸಿದ್ದಾರೆ. ಕಥೆಯನ್ನು ಕೇರಳದಿಂದ ಅಮೆರಿಕಾ, ದುಬೈವರೆಗೂ ಎಳೆದುಕೊಂಡು ಹೋಗುತ್ತಾರೆ. ಅಂತಿಮವಾಗಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುವಲ್ಲಿ ಮಾಡುವಲ್ಲಿ ವಿಫಲವಾಗಿದೆ. ಜಾರ್ಜ್ಕುಟ್ಟಿ ಮಗಳ ಮದುವೆ ಸಮಯದಲ್ಲಿ ಏನಾಗುತ್ತೋ ಎನ್ನುವ ಕುತೂಹಲ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ. ಇನ್ನುಳಿದಂತೆ ಹೆಚ್ಚು ತಿರುವುಗಳು ಸಿಗುವುದಿಲ್ಲ.
ಬರವಣಿಗೆಯಲ್ಲೇ 'ದೃಶ್ಯಂ- 3' ಸಿನಿಮಾ ಹಿಂದೆ ಬಿದ್ದಿದೆ. ಸರಣಿಯ ಹಿಂದಿನ ಎರಡೂ ಸಿನಿಮಾಗಳಿಗಿಂತ ಸಪ್ಪೆ ಎನಿಸುತ್ತದೆ. ಅತಿಯಾದ ನಿರೀಕ್ಷೆ ಕೂಡ ಕೆಲವರಿಗೆ ಈ ರೀತಿ ಭಾಸವಾಗುವಂತೆ ಮಾಡಿರಬಹುದು. 2ನೇ ಭಾಗದಲ್ಲಿ ಕಾದಂಬರಿ ವಿಚಾರವನ್ನು ಕಥೆಗೆ ದೊಡ್ಡ ಟ್ವಿಸ್ಟ್ ಆಗಿ ಬಳಸಿಕೊಳ್ಳಲಾಗಿತ್ತು. 3ನೇ ಭಾಗದಲ್ಲಿ ಅದೇ ಕಾದಂಬರಿ ಸಿನಿಮಾ ರೂಪ ಪಡೆದುಕೊಂಡಿದೆ. ಜಾರ್ಜ್ಕುಟ್ಟಿ ಆ ಸಿನಿಮಾ ನಿರ್ಮಾಣ ಮಾಡಿ ಗೆದ್ದಿದ್ದಾನೆ. ಆದರೆ ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡುತ್ತಾರೆ.
ಹೆಚ್ಚು ನಿರೀಕ್ಷೆ ಇಟ್ಟುಕೊಂಡು 'ದೃಶ್ಯಂ- 3' ಸಿನಿಮಾ ನೋಡಲು ಬರಬೇಡಿ ಎಂದು ಜೀತು ಜೋಸೆಫ್ ಇತ್ತೀಚೆಗೆ ಹೇಳಿದ್ದರು. ಈ ಫಲಿತಾಂಶವನ್ನು ಮನಗಂಡು ಅವರು ಆ ಮಾತು ಹೇಳಿರಬಹುದು ಎನ್ನುವ ಚರ್ಚೆ ನಡೀತಿದೆ. ಪ್ರೇಕ್ಷಕರು ಇವತ್ತು ದೇಶ ವಿದೇಶದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇದಕ್ಕಿಂತಲೂ ರೋಚಕ ಟ್ವಿಸ್ಟ್ಗಳಿರುವ ಸಿನಿಮಾ ಬಂದು ಹೋಗಿವೆ. ಹಾಗಾಗಿ ನಿರ್ದೇಶಕರು ಆತುರಪಡದೇ ಪಾರ್ಟ್-3 ಮಾಡಬೇಕಿತ್ತು. ಅದಕ್ಕಾಗಿ ಇನ್ನು ಉತ್ತಮ ಬರವಣಿಗೆ ಬೇಕಿತ್ತು. ಇವತ್ತು ತಂತ್ರಜ್ಞಾನ ಬಹಳ ಮುಂದುವರೆದಿದೆ. ಹಾಗಿದ್ದು 20 ವರ್ಷಗಳ ಹಿಂದೆ ಕಥೆ ಹೇಳುವಂತೆ ಈ ಕಥೆ ಹೇಳಿರುವುದು ವಿಪರ್ಯಾಸ.
ಉದಾಹರಣೆಗೆ ಸಹದೇವನ್ ಪಾತ್ರ ಜಾರ್ಜ್ಕುಟ್ಟಿ ವಿರುದ್ಧ ಸಾಕಷ್ಟು ಕಡೆಗಳಿಗೆ ಹೋಗಿ ಬೆದರಿಸಿ ಮಾಹಿತಿ ಕಲೆ ಹಾಕುತ್ತಾನೆ, ಸಾಕ್ಷ್ಯ ತಿರುಚುತ್ತಾನೆ. ಸಿಸಿಟಿವಿ ಇರುವ ಕಾಲಘಟ್ಟದಲ್ಲಿ ಅದಕ್ಕೆ ಸಂಬಂಧಿಸಿದ ಆಧಾರವನ್ನು ಜಾರ್ಜ್ಕುಟ್ಟಿ ನ್ಯಾಯಾಲಯದ ಮುಂದಿಟ್ಟಿದ್ದರೆ ಕ್ಲೈಮ್ಯಾಕ್ಸ್ನಲ್ಲಿ ಮಜಾ ಇರ್ತಿತ್ತು. ಸಾಕಷ್ಟು ಕಡೆಗಳಲ್ಲಿ ಲಾಜಿಕ್ ಮಿಸ್ ಆಗುತ್ತದೆ. ಅದನೆಲ್ಲಾ ಹೊರತುಪಡಿಸಿ ಮತ್ತಷ್ಟು ಒಳ್ಳೆ ಸಿನಿಮಾವನನ್ನು ಜೀತು ಜೋಸೆಫ್ ಕಟ್ಟಿಕೊಡುವ ಸಾಧ್ಯತೆಯಿತ್ತು. 4ನೇ ಭಾಗದಲ್ಲಿ ಅಂತಹ ಪ್ರಯತ್ನ ಮಾಡಲಿ ಎಂದು ಆಶಿಸೋಣ.


Click it and Unblock the Notifications