ಕನ್ನಡ, ತೆಲುಗಿನಲ್ಲಿ 'ದೃಶ್ಯಂ- 3' ಯಾಕೆ ರೀಮೆಕ್ ಮಾಡ್ಲಿಲ್ಲ? ಜೀತು ಜೋಸೆಫ್ ಹೇಳಿದ್ದಿಷ್ಟು
ಮೋಹನ್ ಲಾಲ್ ನಟನೆಯ 'ದೃಶ್ಯಂ'-3 ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಮೇ 21ರಂದು ತೆರೆಗೆ ಬಂದಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಕುಟುಂಬದ ರಕ್ಷಣೆಗಾಗಿ ಜಾರ್ಜ್ಕುಟ್ಟಿಯ ಮತ್ತೊಂದು ಹೋರಾಟ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದರೆ ಹಿಂದಿನ ಎರಡೂ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಕೊಂಚ ಸಪ್ಪೆ ಎನಿಸಿದೆ.
'ದೃಶ್ಯಂ' ಹಾಗೂ 'ದೃಶ್ಯಂ- 2' ಸಿನಿಮಾಗಳು ಕನ್ನಡ, ತೆಲುಗು, ಹಿಂದಿ ಭಾಷೆಗೆ ರೀಮೆಕ್ ಆಗಿತ್ತು. ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ವೆಂಕಟೇಶ್ ಹಾಗೂ ತಮಿಳಿನಲ್ಲಿ ಕಮಲ್ ಹಾಸನ್ ಹೀರೊ ಆಗಿ ನಟಿಸಿದ್ದರು. ಆದರೆ 3ನೇ ಭಾಗ ರೀಮೆಕ್ ಮಾಡದೇ ಮಲಯಾಳಂ ಚಿತ್ರವನ್ನೇ 3 ಭಾಷೆಗಳಿಗೆ ಡಬ್ ಆಗಿ ರಿಲೀಸ್ ಮಾಡಿದ್ದಾರೆ. ಹಿಂದಿಗೆ ಮಾತ್ರ ಸಿನಿಮಾ ರೀಮೆಕ್ ಆಗ್ತಿದೆ.

'ದೃಶ್ಯಂ'- 3 ಚಿತ್ರವನ್ನು ದಕ್ಷಿಣದ ಭಾಷೆಗಳಿಗೆ ಯಾಕೆ ರೀಮೆಕ್ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಇದೀಗ ನಿರ್ದೇಶಕ ಜೀತು ಜೋಸೆಫ್ ಉತ್ತರ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಈಗ ಬಗ್ಗೆ ಮಾತನಾಡಿದ್ದಾರೆ. "ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರು ಇತರ ಭಾಷೆಗಳಲ್ಲಿ ಒಪ್ಪದೇ ಇರಬಹುದು. ಆಯಾ ಭಾಷೆಗಳಲ್ಲಿ ಅಲ್ಲಿನ ಸ್ಟಾರ್ ನಟರು ಪಾತ್ರ ಮಾಡಿದಾಗ ಪ್ರೇಕ್ಷಕರು ಆ ನಾಯಕರಿಂದ ಅದನ್ನು ನಿರೀಕ್ಷಿಸದಿರಬಹುದು. ಅದೇ ಕಾರಣಕ್ಕೆ ರಿಮೇಕ್ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಕೆಲ ಬದಲಾವಣೆ ಮಾಡಿಕೊಂಡು ಹಿಂದಿಯಲ್ಲಿ ಸಿನಿಮಾ ರೀಮೆಕ್ ಮಾಡುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಹಿಂದಿ 'ದೃಶ್ಯಂ' ಸರಣಿಯಲ್ಲಿ ಅಜಯ್ ದೇವಗನ್ ನಟಿಸಿ ಗೆದ್ದಿದ್ದಾರೆ. 3ನೇ ಭಾಗ ರೈಟ್ಸ್ ಕೂಡ ಮಾರಾಟವಾಗಿದೆ. ಅವರು ತಮಗಿಷ್ಟ ಬಂದಂತೆ ಬದಲಿಸಿಕೊಳ್ಳಬಹುದು. ಆದರೆ ಅವರು ಈ ಬಗ್ಗೆ ನಮ್ಮ ಬಳಿ ಚರ್ಚಿಸಿದ್ದಾರೆ. ಒಂದಷ್ಟು ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ನಾವು ಅದಕ್ಕೆ ಒಪ್ಪಿದ್ದೇವೆ ಎಂದು ಜೀತು ಜೋಸೆಫ್ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳುತ್ತಿರುವ ಕ್ಲೈಮ್ಯಾಕ್ಸ್ ವಿಚಾರ ಏನು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.
'ದೃಶ್ಯಂ'-3 ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ತನ್ನ ಕುಟುಂಬವನ್ನು ರಕ್ಷಿಸಲು, ತಾನು ತಪ್ಪಿಸಿಕೊಳ್ಳಲು ಜಾರ್ಜ್ಕುಟ್ಟಿ ಹೊಸ ನಾಟಕ ಆಡುತ್ತಾನೆ. ತನ್ನ ಮಗಳ ಮೇಲೆ ಹಲ್ಲೆ ಮಾಡಿ ಅದನ್ನು ಸಹದೇವನ್ ಮಾಡಿದಂತೆ ಬಿಂಬಿಸುತ್ತಾನೆ. ಇದೇ ವಿಚಾರದ ಬಗ್ಗೆ ಜೀತು ಜೋಸೆಫ್ ಹೇಳಿದಂತೆ ಕಾಣ್ತಿದೆ. ಕನ್ನಡ, ತೆಲುಗು, ತಮಿಳು ಪ್ರೇಕ್ಷಕರು ತಮ್ಮ ಹೀರೊ ಹೀಗೆ ಮಗಳ ಮೇಲೆ ಹಲ್ಲೆ ಮಾಡುವಂತಹ ಸನ್ನಿವೇಶದಲ್ಲಿ ನಟಿಸಿದರೆ ಒಪ್ಪುವುದಿಲ್ಲ ಎಂದು ಅವರು ಹೇಳಲು ಪ್ರಯತ್ನಿಸಿದಂತೆ ಕಾಣ್ತಿದೆ.
ಅಂದಹಾಗೆ 'ದೃಶ್ಯಂ' ಸಿನಿಮಾ ಕನ್ನಡಕ್ಕೆ ರೀಮೆಕ್ ಆಗಿ ಸಕ್ಸಸ್ ಕಂಡಿತ್ತು. ಆದರೆ ಪಾರ್ಟ್- 2 ಹೀನಾಯವಾಗಿ ಸೋತಿತ್ತು. ಹಾಗಾಗಿ ಕನ್ನಡ ಮೇಕರ್ಸ್ ಪಾರ್ಟ್-3 ರೀಮೆಕ್ ಮಾಡುವ ಪ್ರಯತ್ನ ಮಾಡಲಿಲ್ಲ. ಪಿ. ವಾಸು ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಹಿಂದೆ ಮಾತನಾಡಿದ್ದರು. ನಿರ್ಮಾಪಕರು ಮಾಡೋಣ ಎಂದು ಮುಂದೆ ಬಂದರೆ ಮಾಡ್ತೀನಿ. ಇಲ್ಲದಿದ್ದರೆ ಏನು ಮಾಡೋಕೆ ಸಾಧ್ಯ ಎಂದಿದ್ದರು.
ಇದೇ ವೇಳೆ 'ದೃಶ್ಯಂ- 4' ಯಾವಾಗ ಎನ್ನುವ ಪ್ರಶ್ನೆಗೂ ಅವರು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ 'ದೃಶ್ಯಂ- 4' ಸಿನಿಮಾ ಮಾಡಲು ಆಲೋಚನೆ ಇಲ್ಲ. ಅದಕ್ಕಾಗಿ ಸೂಕ್ತವಾದ ಕಥೆ ಕೂಡ ಸಿಕ್ಕಿಲ್ಲ. ಹಾಗಾಗಿ ಮತ್ತೊಂದು ಸೀಕ್ವೆಲ್ ಬಗ್ಗೆ ಈಗ ಏನನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಸಾಕಷ್ಟು ಜನ 'ದೃಶ್ಯಂ'-4 ಬೇಡ. ಸುಖಾಸುಮ್ಮನೆ ಹಣಕ್ಕಾಗಿ ಕಥೆ ಎಳೆದು ಹಿಟ್ ಸರಣಿಯನ್ನು ಹಾಳು ಮಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications