ಹೃದಯಸ್ಪರ್ಶಿ ಕಥೆಗಾರ, ನಿರ್ದೇಶಕ ಸಚ್ಚಿದಾನಂದ ಇನ್ನು ನೆನಪು ಮಾತ್ರ
ಸೇತುನಾಥ್- ಸಚ್ಚಿ ಜೋಡಿ ಇದ್ದರೆ ಸಾಕು, ಸಿನಿಮಾ ಸೂಪರ್ ಹಿಟ್ ಎನ್ನುವುದು ಕೇವಲ ಉತ್ಪ್ರೇಕ್ಷೆ ಮಾತಾಗಿರಲಿಲ್ಲ. ಮಲಯಾಳಂ ಚಿತ್ರಗಳಲ್ಲಿ ಸೇತುನಾಥ್ ಕಥೆ ಕೆ. ಆರ್ ಸಚ್ಚಿದಾನಂದ ಅಲಿಯಾಸ್ ಸಚ್ಚಿ ನಿರ್ದೇಶನ ಪ್ರೇಕ್ಷಕರನ್ನು ಸೆಳೆಯುತ್ತಿತ್ತು. ಚಿತ್ರಕಥೆಗಳನ್ನು ಹೆಣೆಯುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಚ್ಚಿ, ನಿರ್ಮಾಪಕ, ನಿರ್ದೇಶಕರಾಗಿ ಬೆಳೆದವರು. 48 ವರ್ಷ ವಯಸ್ಸಿನ ಸಚ್ಚಿ ಜೂನ್ 18ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.
Recommended Video
ಅಯ್ಯಪ್ಪನುಂ-ಕೋಶಿಯುಂ ನಂಥ ಹಿಟ್ ಮಲಯಾಳಂ ಸಿನಿಮಾ ನೀಡಿದ ನಿರ್ದೇಶಕರಿಗೆ ಜೂನ್ 16ರಂದು ಹೃದಯಾಘಾತವಾಗಿತ್ತು. ತ್ರಿಶೂರ್ನ ಜೂಬ್ಲಿ ಮಿಷನ್ ಮೆಡಿಕಲ್ ಕಾಲೇಜ್ಗೆ ದಾಖಲು ಮಾಡಲಾಗಿತ್ತು. ನಂತರ ಸೊಂಟದ ಭಾಗ ಬದಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದಾದ ಬಳಿಕ ಕೆ.ಸಚ್ಚಿದಾನಂದ್ ಚೇತರಿಸಿಕೊಳ್ಳಲೇ ಇಲ್ಲ, ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದ ಸಚ್ಚಿ, ಜೂನ್ 18ರಂದು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ವಕೀಲ, ಕವಿ, ರಂಗಭೂಮಿ ಕಲಾವಿದ, ಕಥೆಗಾರ, ಸಂಭಾಷಣೆಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸಚ್ಚಿ ಬಹುಮುಖ ಪ್ರತಿಭೆಯಾಗಿದ್ದರು.
ನಟ ಬಿಜು ಮೆನನ್, ಸಾಜೂನ್ ಕಾರ್ಯಲ್, ಪಿ ಸುಕುಮಾರ್, ಸುರೇಶ್ ಕೃಷ್ಣನ್ ಜತೆಗೂಡಿ ತಕ್ಕಳಿ ಫಿಲ್ಮಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಸಾಹಸಕ್ಕೆ ಕೈ ಹಾಕಿ ಗೆಲುವು ಸಾಧಿಸಿದ್ದರು. 2011ರ ನಂತರ ಸೇತು ಜೋಡಿ ಬಿಟ್ಟು ಸ್ವಂತವಾಗಿ ಚಿತ್ರಕಥೆ ನಿರ್ದೇಶನ ಮಾಡಿ ಕೂಡಾ ಯಶಸ್ಸು ಗಳಿಸಿದ್ದರು.

ತ್ರಿಶೂರ್ ಮೂಲದ ಪ್ರತಿಭೆ
ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಳ್ಳೂರ್ ಮೂಲದ ಸಚ್ಚಿ ಅವರು ಮಲೈಂನಕರದಲ್ಲಿ ಕಾಲೇಜು, ಎರ್ನಾಕುಲಂನಲ್ಲಿ ಎಲ್ ಎಲ್ ಬಿ ಮುಗಿಸಿ ವಕೀಲ ವೃತ್ತಿ ಆರಂಭಿಸಿದರು, ಕ್ರಿಮಿನಲ್ ಲಾಯರ್ ಆಗಿ ಕೇರಳ ಹೈಕೋರ್ಟಿನಲ್ಲಿ 8ವರ್ಷಗಳ ಕಾಲ ದುಡಿದಿದ್ದರು. ಆದರೆ, ಕಾಲೇಜು ದಿನಗಳಲ್ಲಿ ಅಂಟಿಕೊಂಡಿದ್ದ ರಂಗಭೂಮಿಯ ನಂಟು ನಂತರ ಸಚ್ಚಿಯನ್ನು ಚಿತ್ರರಂಗಕ್ಕೆ ಕರೆತಂದಿತ್ತು.

ಚಾಕಲೇಟ್ ತಿನಿಸಿ ಗೆದ್ದ ಸಚ್ಚಿ ಸೇತು ಜೋಡಿ
ಚೊಕಲೇಟ್ ಚಿತ್ರದ ಮೂಲಕ ಲೇಖಕ ಸೇತುನಾಥ್ ಜತೆಗೂಡಿ ನಿರ್ದೇಶನಕ್ಕೆ ಸಚ್ಚಿ ಮುಂದಾಗಿದ್ದು ಫಲ ನೀಡಿತ್ತು. ಇವರಿಬ್ಬರು ಸೇರಿ ಬರೆದ ಕಥೆ ಸೂಪರ್ ಹಿಟ್ ಎನಿಸಿಕೊಂಡವು. ರಾಬಿನ್ ವುಡ್, ಮೇಕಪ್ ಮ್ಯಾನ್, ಸೀನಿಯರ್ಸ್, ಡಬಲ್ಸ್ ಜನಪ್ರಿಯ ಚಿತ್ರಗಳಾಗಿವೆ. 2011ರಲ್ಲಿ ಸೇತು ಜೋಡಿ ಬಿಟ್ಟ ಬಳಿಕ ಲೇಖಕರಾಗಿ ಸಚ್ಚಿ ಮುಂದುವರೆದರು.

2011ರಲ್ಲಿ ಮೋಹನ್ ಲಾಲ್ ಚಿತ್ರಕ್ಕೆ ಕಥೆ
2011ರಲ್ಲಿ ಮೋಹನ್ ಲಾಲ್ ಚಿತ್ರ ರನ್ ಬೇಬಿ ರನ್ ಗೆ ಕಥೆ ಒದಗಿಸಿದ ಸಚ್ಚಿ ಹಿಂತಿರುಗಿ ನೋಡಲಿಲ್ಲ, ಅನಾರ್ಕಲಿ ಕಥೆ ಬರೆದು ನಿರ್ದೇಶಿಸಿದರು, ರಾಮ್ ಲೀಲಾ, ಶೆರ್ಲಾಕ್ ಟಾಮ್ಸ್,ಡ್ರೈವಿಂಗ್ ಲೈಸನ್ಸ್, ಅಯ್ಯಪ್ಪನುಂ ಕೋಶಿಯಂ(ನಿರ್ದೇಶನ ಕೂಡಾ) ಚಿತ್ರಕ್ಕೆ ಕಥೆ ಬರೆದರು. ಪೃಥ್ವಿರಾಜ್ ಸುಕುಮಾರನ್, ದಿಲೀಪ್, ಬಿಜು ಮೆನನ್ ಸೂಪರ್ ಹಿಟ್ ಚಿತ್ರಗಳ ಲೇಖಕ ಎನಿಸಿಕೊಂಡರು.

ಎರಡೇ ಚಿತ್ರಗಳನ್ನು ನಿರ್ದೇಶಿಸಿದ್ದು ವಿಶೇಷ
ಸೂಪರ್ ಹಿಟ್ ಕಥೆಗಳನ್ನು ಒದಗಿಸಿದರೂ ಸಚ್ಚಿ ನಿರ್ದೇಶಿಸಿದ್ದು ಅನಾರ್ಕಲಿ ಹಾಗೂ ಅಯ್ಯಪ್ಪನುಂ ಕೋಶಿಯಂ ಎಂಬ ವಿಭಿನ್ನ ಚಿತ್ರಗಳನ್ನು ಮಾತ್ರ. ಎರಡರಲ್ಲೂ ಪೃಥ್ವಿರಾಜ್ ಸುಕುಮಾರನ್ ಹಾಗೂ ಬಿಜು ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ಅನಾರ್ಕಲಿ ನೌಕಾಪಡೆ ಅಧಿಕಾರಿಯ ಪ್ರೇಮಕಥೆಯಾದರೆ, ಅಯ್ಯಪ್ಪನುಂ ಕೋಶಿಯುಂ ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷದ ಕಥೆಯಾಗಿದೆ. ಜಯನ್ ನಂಬಿಯಾರ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವ ಉತ್ಸಾಹದಲ್ಲಿದ್ದ ಸಚ್ಚಿಗೆ ಆರೋಗ್ಯ ಕೈಕೊಟ್ಟಿತ್ತು. ಶಸ್ತ್ರಚಿಕಿತ್ಸೆ, ಹೃದಯಾಘಾತ ಸಚ್ಚಿಯನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.


Click it and Unblock the Notifications











