ಝೇಂಕಾರ್ ಮ್ಯೂಸಿಕ್ ಮಾಲೀಕ ಸುರೇಶ್ ಜೈನ್ ಇನ್ನಿಲ್ಲ

ಬೆಂಗಳೂರು ಕತ್ರಿಗುಪ್ಪೆಯ ನಿವಾಸದಲ್ಲಿ ಬುಧವಾರ ರಾತ್ರಿ 8 ಗಂಟೆಗೆ ಸುರೇಶ್ ಇಹಲೋಹ ತ್ಯಜಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಸುರೇಶ್ ಜೈನ್ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಮ್ಮ ಅನಾರೋಗ್ಯದ ನಡುವೆಯೂ 'ಚಿರು' ಚಿತ್ರವನ್ನು ನಿರ್ಮಿಸಿದ ಖ್ಯಾತಿ ಅವರದು.
ಝೇಂಕಾರ್ ಆಡಿಯೋ ಕಂಪನಿ ಹಾಗೂ ಮಾರ್ಸ್ ರೆಕಾರ್ಡಿಂಗ್ ಸ್ಟುಡಿಯೋಗಳನ್ನು ಕಟ್ಟಿದ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ನೂರಾರು ಕನ್ನಡ ಚಿತ್ರಗಳ ಆಡಿಯೋ ರೈಟ್ಸ್ನನ್ನು ತಮ್ಮದಾಗಿಸಿಕೊಂಡಿದ್ದ ಝೇಂಕಾರ್ ಕಂಪನಿ ಉಳಿದ ಆಡಿಯೋ ಕಂಪನಿಗಳಿಗೆ ಪ್ರಬಲ ಸ್ಪರ್ಧಿಯಾಗಿತ್ತು.
ಮೂರು ದಶಕಗಳಿಂದ ಝೇಂಕಾರ್ ಆಡಿಯೋ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಸುರೇಶ್ ಜೈನ್ ಅವರದು. ಆಡಿಯೋ ಕಂಪನಿಯನ್ನು ಮುನ್ನಡೆಸುವ ಜೊತೆಗೆ ಅವರು ಕೆಲವು ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಪ್ರೀತಿಸಲೇಬೇಕು, ನಿನಗೋಸ್ಕರ, ಮುಸ್ಸಂಜೆ ಮಾತು, ಚಿರು ಅವರ ನಿರ್ಮಾಣದ ಚಿತ್ರಗಳು. ಇಂದು ಬೆಂಗಳೂರಿನಲ್ಲಿ ಜೈನ ವಿಧಿವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











