'ರಾಜಧಾನಿ' ಎಕ್ಸ್ಪ್ರೆಸ್ನಂತೆ ಮುನ್ನುಗ್ಗಲಿ: ಗೃಹಸಚಿವ
ಕೇರಳದಂತಹ ಸಣ್ಣ ರಾಜ್ಯದಲ್ಲಿ ಪ್ರತಿವರ್ಷ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮಲ್ಲೂ ಆ ರೀತಿಯ ಚಿತ್ರಗಳನ್ನು ನಿರ್ಮಿಸಬೇಕಾಗಿದೆ ಎಂದು ಗೃಹಸಚಿವ ಆರ್ ಅಶೋಕ್ ಅಭಿಪ್ರಾಯಪಟ್ಟರು. ಅವರು 'ರಾಜಧಾನಿ' ಚಿತ್ರದ ಧ್ವನಿಸುರುಳಿ ಸಮಾರಂಭದಲ್ಲಿ ಮಾತನಾಡುತ್ತ್ತಿದ್ದರು. ರಾಜಧಾನಿ ಎಕ್ಸ್ಪ್ರೆಸ್ನಂತೆ ಚಿತ್ರ ಮುನ್ನುಗ್ಗಲಿ ಎಂದು ಅಶೋಕ್ ಚಿತ್ರತಂಡವನ್ನು ಹಾರೈಸಿದರು.
ಕನ್ನಡ ಚಿತ್ರಗಳು ಇನ್ನೂ ಹೆಚ್ಚಿನ ಗುಣಮಟ್ಟದೊಂದಿಗೆ ನಿರ್ಮಾಣವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂಬುದು ಆರ್ ಅಶೋಕ್ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಚಿತ್ರದ ನಾಯಕ ನಟ ಯಶ್ ಮಾತನಾಡುತ್ತಾ, ಅರ್ಜುನ್ ಸಂಗೀತ ಸಂಯೋಜಿಸಿರುವ ಹಾಡುಗಳು ಕುಣಿದು ಕುಪ್ಪಳಿಸುವಂತಿವೆ. ಎಚ್ ಸಿ ವೇಣು ಅವರ ಛಾಯಾಗ್ರಹಣವೂ ಅದ್ಭುತವಾಗಿ ಮೂಡಿಬಂದಿದೆ ಎಂದರು.
ಈ ಚಿತ್ರದಲ್ಲಿ ಯಶ್ ಡ್ಯೂಪ್ ಕಲಾವಿದರನ್ನು ಬಳದೆ ಸ್ವತಃ ತಾವೇ ಸಾಹಸ ಸನ್ನಿವೇಶವನ್ನು ಮಾಡಿದ್ದಾರೆ. 24 ಅಂತಸ್ತಿನ ಮಹಡಿ ಮೇಲಿಂದ ಧುಮುಕುವ ಸನ್ನಿವೇಶವನ್ನು ಯಶ್ ಮಾಡಿರುವುದು ವಿಶೇಷ. ಈ ಬಗ್ಗೆ ಸಮಾರಂಭದಲ್ಲಿದ್ದ ಸುದೀಪ್ ಮಾತನಾಡುತ್ತಾ, ಈ ರೀತಿಯ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಯಶ್ಗೆ ಕಿವಿ ಮಾತು ಹೇಳಿದರು.
'ರಾಜಧಾನಿ' ಚಿತ್ರವನ್ನು ಕೆ ವಿ ರಾಜು ನಿರ್ದೇಶಿಸಿದ್ದು ಸೌಮ್ಯ ಸತ್ಯನ್ ನಿರ್ಮಿಸಿದ್ದಾರೆ. ಚಿತ್ರದ ನಾಯಕಿ ಶೀನಾ. ಈ ಚಿತ್ರವನ್ನು ಬೆಂಗಳೂರು, ಕೇರಳ, ಗೋವಾದಲ್ಲಿ ಚಿತ್ರೀಕರಿಸಲಾಗಿದೆ. 'ರಾಜಧಾನಿ' ಚಿತ್ರದ ಬಹುತೇಕ ಹಾಡುಗಳು ಕೇರಳ ಹಾಗೂ ಗೊವಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವುದು ವಿಶೇಷ.


Click it and Unblock the Notifications











