ಜೀ ಕನ್ನಡ 'ಸರಿಗಮಪ' ಫೈನಲ್ಸ್ ಗೆ ವರ್ಣರಂಜಿತ ತೆರೆ

By Staff

ಬೆಂಗಳೂರು, ಏ.10: ಜೀ ಕನ್ನಡವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್‌ನ ಫೈನಲ್‌ನಲ್ಲಿ ಅತ್ಯುತ್ತಮ ಗಾಯಕನಾಗಿ ಅಜಯ್ ಹಾಗೂ ಅತ್ಯುತ್ತಮ ಗಾಯಕಿಯಾಗಿ ಓಹಿಲೇಶ್ವರಿ ಆಯ್ಕೆಯಾದರು. ಫೈನಲ್‌ನಲ್ಲಿ ಗೆದ್ದ ಗಾಯಕ ಹಾಗೂ ಗಾಯಕಿಗೆ ತಲಾ 2.5 ಲಕ್ಷ ರು. ವೆಚ್ಚದ ಶಿಕ್ಷಣವೇತನ ದೊರೆಯಲಿದೆ. ರನ್ನರ್ ಅಪ್ ಆದ ಸಹನಾ ಹೆಗಡೆ ಹಾಗೂ ಆದರ್ಶ್ ಇಬ್ಬರು ಪುಟಾಣಿಗಳಿಗೂ ಕೂಡ ತಲಾ 1.5 ಲಕ್ಷ ರು. ಮೊತ್ತದ ಶಿಕ್ಷಣ ವೇತನವನ್ನು ಜೀಕನ್ನಡದ ಪರವಾಗಿ ಅನೂಪ್ ಶ್ರೀಧರ್ ಹಾಗೂ ದೀಪಕ್ ಮಾಚಯ್ಯ ವಿತರಿಸಿದರು.

ಏಪ್ರಿಲ್ 6ರಂದು ಸಂಜೆ 6 ಗಂಟೆಗೆ ಪ್ರಸಾರವಾದ ಫೈನಲ್‌ನಲ್ಲಿ ನಿರ್ಣಾಯಕರಾಗಿ ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿ ಹಾಗೂ ರಾಜೇಶ್ ಕೃಷ್ಣನ್ ಭಾಗವಹಿಸಿದ್ದರು. ಉತ್ತಮ ಪೈಪೋಟಿಯಿಂದ ಕೂಡಿದ್ದ ಸರ್ಧೆಯ ವಿಜೇತರನ್ನು ಆರಿಸಲು ತೀರ್ಪುಗಾರರಿಗೆ ಕಷ್ಟವೆನಿಸಿತು. ಫೈನಲ್ ಹಂತದಿಂದ ಸ್ವಲ್ಪ ಅಂತರದಲ್ಲಿ ಅವಕಾಶ ವಂಚಿತನಾದ ಸಿದ್ದಾರ್ಥ್ ವೇದಿಕೆಯಲ್ಲಿ ನಿಂತು ಘಂಟಸಾಲ ಹಾಡಿದ 'ಶಿವ ಶಂಕರಿ ಶಿವಾನಂದ ಲಹರಿ ..ಚಂದ್ರಕಳಾಧರೀ ಈಶ್ವರೀ. ಹಾಡಿ ಮುಗಿಸಿದಾಗ ಒಂದು ಕ್ಷಣ ಸಭಾಂಗಣದಲ್ಲಿ ಮೌನ, ನಂತರ ಕಿವಿಗಡಚಿಕ್ಕುವ ಚಪ್ಪಾಳೆಯ ಸುರಿಮಳೆ. ಎಲ್ಲೂ ಸ್ವರ, ಉಚ್ಚಾರಣೆಯಲ್ಲಿ ಲೋಪವಿಲ್ಲದೆ ಹಾಡಿದ ಸಿದ್ದಾರ್ಥ್‌ನ ಸಾಧನೆ ಮೆಚ್ಚಿದ ರಾಜೇಶ್ ಕೃಷ್ಣನ್ ಅವರು, ನನಗೆ ಅವಕಾಶ ಕೊಟ್ಟರೆ ಇಂದಿನ ವಿಜೇತರ ಪಟ್ಟಿಗೆ ಈತನ ಹೆಸರು ಮೊದಲು ಸೂಚಿಸುವೆ ಎಂದಾಗ ಸಿದ್ದಾರ್ಥನ ಪೋಷಕರ ಕಣ್ಣು ತುಂಬಿಬಂದಿತ್ತು.

ಅಂತಿಮ ಸ್ಪರ್ಧೆಯಲ್ಲಿ ತೇಲಿಬಂದ ಮಾಧುರ್ಯ

ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ...... ನಗುವ ನಯನ ಮದುರ ಮೌನ ಮಿಡಿವ ಹೃದಯ ಇರೆ ಮಾತೇಕೆ..... ಈ ಹಸಿರು ಸಿರಿಯಲಿ ಮನಸು ಮರೆಯಲಿ ನವಿಲೇ.... ಕರುನಾಡ ತಾಯಿ ಸದಾ ಚಿನ್ಮಯಿ.... ಎಂದು ಒಂದರ ನಂತರ ಒಂದು ರಾಗವಾಗಿ ಕೇಳಿ ಬರುವ ಹಾಡಿಗೆ ತಲೆದೂಗುವ ಎಲ್ಲರ ಮೊಗದಲ್ಲೂ ಖುಷಿಯ ಹೂಮಾಲೆ ! ಆಗಷ್ಟೇ ಸ್ಪಷ್ಟ ಮಾತು ಕಲಿತ ಏಳರಬಾಲೆ ತಪ್ಪಿಲ್ಲದ ಏರಿಳಿತದಲ್ಲಿ ಹಾಡಿದಾಗ ನಿರ್ಣಾಯಕರ, ಪ್ರೇಕ್ಷಕರ ಕಣ್ಣಲ್ಲಿ ಆನಂದ ಭಾಷ್ಪ.

ಈ ಸಮಾರಂಭದಲ್ಲಿ ಪುಟಾಣಿಗಳ ಹಾಡುಗಳನ್ನು ಕೇಳಲು ಕಲಾವಿದ ಅರುಣ್ ಸಾಗರ್, ಜೀ ಕನ್ನಡದ ದೀಪಕ್ ಮಾಚಯ್ಯ, ಅನೂಪ್ ಶ್ರೀಧರ್, ಗಾಯಕಿಯರಾದ ಕಸ್ತೂರಿ ಶಂಕರ್, ಬಿ.ಕೆ.ಸುಮಿತ್ರಾ, ಅರ್ಚನಾ ಉಡುಪ, ನಟ ವಿನಾಯಕ ಜೋಶಿ, ಕರಿಬಸಯ್ಯ, ನಟಿ ಸೋನು ಮುಂತಾದ ಗಣ್ಯರು ಬಂದು, ಪುಟಾಣಿಗಳನ್ನು ಹರಿಸಿದರು.

ಫೈನಲ್ ತಲುಪಿದ ಪುಟಾಣಿಗಳ ಪರಿಚಯ:

ಓಹಿಲೇಶ್ವರಿ : ಫೆ. 27, 1996ರಂದು ಹುಟ್ಟಿದ ಈಕೆಗೆ ಬಾಲ್ಯದಿಂದಲೇ ಸಂಗೀತ ಹಾಗೂ ಕ್ರೀಡೆಯಲ್ಲಿ ಆಸಕ್ತಿ. ಉತ್ತಮ ಈಜುಪಟು ಕೂಡ ಆಗಿರುವ ಈಕೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದಿದ್ದಾಳೆ. ಉಳಿದ ಸ್ಪರ್ಧಿಗಳೊಂದಿಗೆ ಸ್ನೇಹಪರಳಾಗಿದ್ದ ಓಹಿಲಳನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಅಂತಿಮ ಸುತ್ತಿಗೆ ತಲುಪಿದ ಸ್ಪರ್ಧಿಗಳಲ್ಲಿ ಈಕೆಯೇ ಹಿರಿಯಳು. ಮಾಧುರ್ಯಭರಿತ ಗೀತೆಗಳನ್ನು ಹಾಡಲು ಹೆಚ್ಚು ಇಷ್ಟಪಡುತ್ತಾಳೆ. ಉತ್ತಮ ಗ್ರಹಿಕೆ, ಶ್ರದ್ಧೆ ಈಕೆಯ ಹೆಗ್ಗುರುತು.

ಸಹನಾ ಎಸ್ ಹೆಗಡೆ: ಸದಾ ಹಸನ್ಮುಖಿಯಾದ ಈಕೆ ,ತನ್ನ ಕೆನ್ನೆಯ ಗುಳಿಗಳಿಂದಲೇ ಎಲ್ಲರನ್ನು ಸೆಳೆದಿದ್ದಾಳೆ. ಹಾಡಿನ ಜತೆಗೆ ಕವಿಯತ್ರಿ ಕೂಡ. ಕ್ರೀಡೆ, ರಸಪ್ರಶ್ನೆ, ಚಿತ್ರಕಲೆಯಲ್ಲಿ ಅನೇಕ ಪ್ರಶಸ್ತಿಯನ್ನು ಗಳಿಸಿದ್ದಾಳೆ. 'ಸೋತರೂ ಗೆದ್ದರೂ ನಾನು ಅಳಲ್ಲ. ಎಲ್ಲರೂ ತಿಳಿದ ಹಾಗೆ ನಾನು emotional ಏನಲ್ಲ' ಇದು ಈಕೆಯ ಪಂಚ್ ಡೈಲಾಗ್. ಹಾಡಿನ ಜತೆಗೆ ಭಾವಾಭಿನಯ ನೀಡಿ ರಾಜೇಶ್ ಅವರ ಅಚ್ಚುಮೆಚ್ಚಾಗಿದ್ದಳು. ಈ ಪುಟಾಣಿ ಕೋಗಿಲೆ ಜನಿಸಿದ್ದು 1997ರ ಆಗಸ್ಟ್ 6ರಂದು.

ಅಜಯ್ ಭಾರಧ್ವಾಜ್ : ಉತ್ತಮ ಕೀ ಬೋರ್ಡ್ ವಾದಕನಾಗಿರುವ ಈ ಹುಡುಗ ಹುಟ್ಟಿದ್ದು 1996 ಡಿಸೆಂಬರ್ 8ರಂದು. ಗಾಯನ ಅಭ್ಯಾಸದ ಜತೆಗೆ ಪ್ರತಿನಿತ್ಯ ಯೋಗಭ್ಯಾಸ ಕಡ್ಡಾಯ. ಈತನ ಅಜ್ಜಿ ವಿದುಷಿ ಮಾಲಿನಿ ಸಂಪತ್ ಅವರೇ ಈತನಿಗೆ ಸಂಗೀತ ಪಾಠದ ಮೊದಲಗುರು. ಕೆಂಪು ಬಣ್ಣವನ್ನು ಇಷ್ಟಪಡುವ ಅಜಯ್‌ಗೆ ಸುಂದರ ವಿನ್ಯಾಸದ ಫ್ಯಾಷನ್ ಉಡುಪು ಧರಿಸುವುದು ಇಷ್ಟವಂತೆ. ಮೊದಲ ಸುತ್ತಿನಿಂದ ಕೊನೆ ಸುತ್ತಿನವರೆಗೂ ಫಲಿತಾಂಶ ಏನಾದರೂ ಹೆದರದೇ ಶಾಂತವಾಗಿ ಇರುತ್ತಿದ್ದ ರೀತಿ ನೋಡಿ ತೀರ್ಪುಗಾರರೇ ಅಚ್ಚರಿಯೋ ಅಚ್ಚರಿ.

ಆದರ್ಶ್ : 1996ರ ಜೂನ್ 5ರಂದು ಜನಿಸಿದ ಆದರ್ಶ್ ಎಲ್ಲ ಬಗೆಯ ಹಾಡುಗಳನ್ನು ಹಾಡುವ ಸಾಮರ್ಥ್ಯವುಳ್ಳವನು. ದಿನದ ಇಪ್ಪನಾಲ್ಕು ಗಂಟೆ ಆಟೋಟದಲ್ಲಿ ತೊಡಗಿರಲು ಇಷ್ಟಪಡುವ ಈತನಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಕ್ರೀಡೆ ಬಿಟ್ಟರೆ, ಹಾಡುಗಾರಿಕೆ ಇವನನ್ನು ಆವರಿಸಿದೆ. ಫೈನಲ್‌ವರೆಗೂ ಹಲವು ಆತಂಕದ ಕ್ಷಣಗಳನ್ನು ಎದುರಿಸಿ, ಅದ್ಭುತ ಪ್ರದರ್ಶನ ನೀಡಿದ ಕೀರ್ತಿ ಆದರ್ಶ್‌ಗೆ ಸಲ್ಲುತ್ತದೆ.

(ದಟ್ಸ್ ಕನ್ನಡ ಟಿವಿ ವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X