ಫೆ.16ರಂದು ಕೆ ಜೆ ಯೇಸುದಾಸ್ ಹೃದಯರಾಗ
ಜನಪ್ರಿಯ ಹಿನ್ನೆಲೆ ಗಾಯಕ ಡಾ.ಕೆ.ಜೆ.ಯೇಸುದಾಸ್ ಅವರ 71ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ 'ಹೃದಯರಾಗ' ಕಾರ್ಯಕ್ರಮ ಫೆಬ್ರವರಿ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಪಿ ಸುಶೀಲಾ, ಚಿತ್ರಾ, ಎಸ್ ಜಾನಕಿ, ಮಂಜುಳಾ ಗುರುರಾಜ್ ಅವರುಜನಪ್ರಿಯ ಗೀತೆಗಳನ್ನು ಹಾಡಿ ಕೇಳುಗರನ್ನು ರಂಜಿಸಲಿದ್ದಾರೆ.ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3190 ಸಂಸ್ಥೆಯ ಜಿಲ್ಲಾ ನಿರ್ದೇಶಕ ಮತ್ತು ಯೋಜನಾ ಅಧ್ಯಕ್ಷ ರೊಟೇರಿಯನ್ ಹೆಚ್ ಆರ್ ಅನಂತ್ ಮತ್ತು ಹಿರಿಯ ನಟ ಶಿವರಾಂ ಬುಧವಾರ (ಜ.12) ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
'ಹೃದಯರಾಗ' ಕಾರ್ಯಕ್ರಮದಲ್ಲಿ ಯೇಸುದಾಸ್ ಕೂಡ ಹಾಡಲಿದ್ದಾರೆ. ಕಳೆದ ವರ್ಷ ಕೇರಳದಲ್ಲಿ ನಡೆದ 70ನೇ ಹುಟ್ಟುಹಬ್ಬದ ಪ್ರಯುಕ್ತ 200ಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿತ್ತು. ಈ ಬಾರಿ ನಡೆಯಲಿರುವ ಕಾರ್ಯಕ್ರಮ ಮೂಲಕ ರೋಟರಿ ಸಂಸ್ಥೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದೆ.
'ಹೃದಯರಾಗ' ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣದಿಂದ 'ಸಮರ್ಪಣ 71' ಯೋಜನೆಯಡಿ ರೋಟರಿ ಸಂಸ್ಥೆಗಳ ಮೂಲಕ 71ಹೃದಯ ಶಸ್ತ್ರ ಚಿಕಿತ್ಸೆ, 71 ಡಯಾಲಿಸಿಸ್, 71 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ, 71 ಉಚಿತ ನೇತ್ರ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಸುಮಾರು ರು.300 ಲಕ್ಷಗಳಿಗಿಂತಲೂ ಹೆಚ್ಚಿನ ಮೊತ್ತದ ಈ ಯೋಜನೆಯಿಂದ ರಾಜ್ಯದ ಬಡಜನರು ಪ್ರಯೋಜನ ಪಡೆಯಲಿದ್ದಾರೆ. ಕಾರ್ಯಕ್ರಮದಲ್ಲಿ ಕೆ ಜೆ ಯೇಸುದಾಸ್, ಹಿರಿಯನಟ ಶಿವರಾಂ ಹಾಗೂ ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ ಉಪಸ್ಥಿತರಿದ್ದರು. [ಎಸ್ಪಿಬಿ]


Click it and Unblock the Notifications











