ಶ್ರಾವಣದ ಸಂಭ್ರಮಕ್ಕೆ ಭಕ್ತಿಗೀತೆಗಳ ಧ್ವನಿಸುರುಳಿಗಳು
ಶ್ರಾವಣ ಬಂದರೆ ಹಬ್ಬದ ಸಾಲು ಆರಂಭ. ಅದರಲೂ ಸುಮಂಗಲಿಯರಿಗೆ ಸೌಭಾಗ್ಯಪ್ರದವಾಗಿರುವ ವರಮಹಾಲಕ್ಷ್ಮೀ ವ್ರತ ಬರುವುದು ಇದೇ ಮಾಸದಲ್ಲಿ. ಶ್ರಾವಣದ ಸಂಭ್ರಮಕ್ಕಾಗಿ ಜಂಕಾರ್ ಧ್ವನಿಸುರುಳಿ ಸಂಸ್ಥೆಯವರು ಗೊರವನಹಳ್ಳಿ ಮಹಾಲಕ್ಷ್ಮೀಯನ್ನು ಕುರಿತ ಕಂಕಣಭಾಗ್ಯ ದೇವತೆ ಹಾಗೂ ಮಲ್ಲಿಗೆ ಮಾಲೆ ಶ್ರೀಮಹಾಲಕ್ಷ್ಮೀಗೆ ಎಂಬ ಎರಡು ಭಕ್ತಿಗೀತೆಗಳ ಧ್ವನಿಸುರುಳಿಗಳನ್ನು ಈ ವಾರ ಬಿಡುಗಡೆ ಮಾಡಿದ್ದಾರೆ.
ಕಂಕಣಭಾಗ್ಯ ದೇವತೆ
ಗೊರವನಹಳ್ಳಿಯ ಮಹಾಲಕ್ಷ್ಮೀಯನ್ನು ಕುರಿತ ಈ ಭಕ್ತಿ ಸಂಪುಟ ಯುವರಾಜ್ ಹಾಡಿರುವ ಎಂಟು ದಿಕ್ಕಿನಲ್ಲಿ ಗೀತೆಯೊಂದಿಗೆ ಆರಂಭವಾಗುತ್ತದೆ. ಎಂಟು ಗೀತೆಗಳ ಈ ಸಂಪುಟದ ಯಾವಪೂಜೆಗೆ, ಸಿರಿಗಂಧ ಮಹಾತಾಯಿ, ಬೇಡೋಣ ಬೇಡೋಣ, ಹೂವೇ ಹೂವೇ ಗೀತೆಗಳನ್ನು ಯುವರಾಜ್ ಅವರೇ ಹಾಡಿದ್ದಾರೆ. ಸಿರಿಯ ಕೊಡುವನ್ನು, ಕಂಕಣ ಭಾಗ್ಯ ಹಾಗೂ ಶ್ರೀ ಲಕ್ಷ್ಮೀ ಮಾತೆಗೆ ಗೀತೆಗಳನ್ನು ಮಹಾಲಕ್ಷ್ಮೀ ಹಾಡಿದ್ದಾರೆ. ಜೆಮ್ಶಿವು ರಚಿಸಿರುವ ಈ ಭಕ್ತಿಸಾಹಿತ್ಯಕ್ಕೆ ಯುವರಾಜ್ ಸಂಗೀತ ಸಂಯೋಜಿಸಿದ್ದಾರೆ. ಗೊರವನಹಳ್ಳಿಯ ಕಮಲಮ್ಮನವರ ಭಾವಚಿತ್ರದೊಂದಿಗೆ ಮಹಾಲಕ್ಷ್ಮಿಯ ಸುಂದರ ಚಿತ್ರವಿರುವ ಕ್ಯಾಸೆಟ್ನ ಹೊದಿಕೆ ಆಕರ್ಷಕವಾಗಿದೆ.
ಈ ಕ್ಯಾಸೆಟ್ನ ಬಿಡಿ ಮಾರಾಟದರ - 35ರೂ
*********
ಮಲ್ಲಿಗೆಮಾಲೆ ಶ್ರೀಮಹಾಲಕ್ಷ್ಮಿಗೆ
ಮಹಾಲಕ್ಷ್ಮೀದೇವಿಯನ್ನು ಕುರಿತಾದ ಈ ಭಕ್ತಿಸಂಪುಟದಲ್ಲಿ ಒಟ್ಟು ಹನ್ನೊಂದು ಗೀತೆಗಳಿವೆ. ಘಲ್ಲುಘಲ್ಎನುತಾ ಎಂದು ಬಿ.ಆರ್.ಛಾಯಾ ಹಾಡಿರುವ ಗೀತೆಯೊಂದಿಗೆ ಸುರಳಿ ಬಿಚ್ಚಿಕೊಳ್ಳುವ ಈ ಧ್ವನಿಸುರುಳಿ ಚಿನ್ನದ ತೇರಿನಲಿ ಎಂಬ ಸಮೂಹಗೀತೆಯೊಂದಿಗೆ ಮುಕ್ತಾಯವಾಗುತ್ತದೆ.
ಉಳಿದಂತೆ ಮಹಾಲಕ್ಷ್ಮಿ ಹಾಡಿರುವ ಸಿರಿಗಂಧ ಹಚ್ಚಿರಿ, ಗೋವಿಂದನರಸಿ, ಅಜೇಯ್ ಹಾಡಿರುವ ಅಬ್ಬಯ್ಯನಿಗೆ, ಸಿರಿಯ ಹೊಳೆ ಉಕ್ಕಿ ಎಲ್ಲಾ ಗಾಯಕರು ಹಾಡಿರುವ ಹೋಗೋಣ ಬನ್ನಿರಿ, ಬಿ.ಆರ್.ಛಾಯಾ ಹಾಡಿರುವ ಚುಕ್ಕಿಯ ತೋಟದ, ಕೋಲುಕೋಲಣ್ಣ ಹಾಗೂ ಎಲ್.ಎನ್.ಶಾಸ್ತ್ರಿ ಹಾಡಿರುವ ಮುಂಜಾನೆದ್ದು, ಸುಮನಸ ವಂದಿತ ಗೀತೆಗಳು ಈ ಸಂಪುಟದಲ್ಲಿದೆ. ಪುರುಷೋತ್ತಮ್ ರಚಿಸಿರುವ ಹಾಡುಗಳಿಗೆ ಯುವರಾಜ್ ಸಂಗೀತ ಸಂಯೋಜಿಸಿದ್ದಾರೆ.
ಈ ಕ್ಯಾಸೆಟ್ನ ಬಿಡಿ ಮಾರಾಟದರ - 35ರೂ
(ದಟ್ಸ್ ಕನ್ನಡ ಸಂಗೀತ ವಾರ್ತೆ)


Click it and Unblock the Notifications











