ನರೇಂದ್ರ ಬಾಬು ಶರ್ಮ ಭವಿಷ್ಯ ನಿಜವಾಗುತ್ತದೆಯೇ?
ಇದು 'ಶ್ರೀನಾಗಶಕ್ತಿ'ಯ ಮಹಿಮೆಯೋ ಏನೋ ಗೊತ್ತಿಲ್ಲ. ಓಂ ಸಾಯಿಪ್ರಕಾಶ್ ನಿರ್ದೇಶಿಸುತ್ತಿರುವ ಭಕ್ತಿ ಪ್ರಧಾನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ನಿಜವಾದ ನಾಗಪ್ಪ ಬಂದಿದ್ದ! ಇದೇ ಸಂದರ್ಭದಲ್ಲಿ ಖ್ಯಾತ ಜ್ಯೋತಿಷಿ ನರೇಂದ್ರ ಬಾಬು ಶರ್ಮ ಕನ್ನಡ ಚಿತ್ರೋದ್ಯಮದ ಬಗ್ಗೆ ಒಂದು ಭವಿಷ್ಯ ನುಡಿದರು.
ಶ್ರೀನಾಗಶಕ್ತಿ ಚಿತ್ರದ ನಿಜವಾದ ಹೀರೋ ನಾಗಪ್ಪ! ಆಡಿಯೋ ಬಿಡುಗಡೆಗೆ ಅವನೇ ಇಲ್ಲ ಎಂದರೆ ಹೇಗೆ? ಅದಕ್ಕಾಗಿ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ನಿಜವಾದ ನಾಗಪ್ಪನನ್ನೇ ಕರೆತಂದಿದ್ದರು. ಎಲ್ಲರನ್ನೂ ನಾಗಪ್ಪ ಹೆಡೆ ಎತ್ತಿ ನೋಡುತ್ತಾ ಶ್ರೀ ನಾಗಶಕ್ತಿ ತಂಡವನ್ನು ಆಶೀರ್ವಾದ ಮಾಡಿದಂತಿತ್ತು.
ಟಿವಿ ವಾಹಿನಿಯೊಂದರಲ್ಲಿ 'ಬ್ರಹ್ಮಾಂಡ' ಕಾರ್ಯಕ್ರಮ ನಡೆಸುತ್ತಿರುವ ನರೇಂದ್ರ ಬಾಬು ಅವರು ಮಾತನಾಡುತ್ತಾ, 2011ರ ವೇಳೆಗೆ ಕನ್ನಡ ಚಿತ್ರೋದ್ಯಮಕ್ಕೆ ವಿದೇಶಿ ಬಂಡವಾಳ ಹರಿದು ಬರಲಿದೆ ಎಂದು ಭವಿಷ್ಯ ನುಡಿದರು. ಬೆಂಗಳೂರು ಹೊರವಲಯದಲ್ಲಿರುವ ರಾಮೋಹಳ್ಳಿಯಲ್ಲಿ ಶ್ರೀ ನಾಗಶಕ್ತಿ ಧ್ವ್ವನಿಸುರುಳಿ ಲೋಕಾರ್ಪಣೆಗೊಂಡಿತು.
ಶ್ರೀ ನಾಗಶಕ್ತಿ ಚಿತ್ರದಲ್ಲಿ ನರೇಂದ್ರ ಬಾಬು ಅವರು ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. ಹರಿದು ಬರಲಿರುವ ವಿದೇಶಿ ಬಂಡವಾಳವನ್ನು ನಮ್ಮ ನಿರ್ದೇಶಕರು, ತಂತ್ರಜ್ಞರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮುಂಬರು ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಉತ್ತಮ ಭವಿಷ್ಯವಿದೆ ಎಂದರು.
ಚಂದ್ರಿಕಾ ಅವರು ನಿರ್ಮಿಸುತ್ತಿರುವ ಈ ಚೊಚ್ಚಲ ಚಿತ್ರವಿದು. ಕಾರ್ಯಕ್ರಮದಲ್ಲಿ ಶ್ರೀ ಋಷಿಕುಮಾರ ಸ್ವಾಮೀಜಿ, ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಸ್ವಾಮಿಜಿ ಸಹ ಉಪಸ್ಥಿತರಿದ್ದರು. ಸಾವಿನ ಕದತಟ್ಟ್ಟಿ ಹೊರಬಂದ ಬಳಿಕ ಸಾಯಿಪ್ರಕಾಶ್ ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದೆ. ಎಪ್ಪತ್ತು ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಚಿತ್ರದ ನಾಯಕಿ ಶ್ರುತಿ ಮಾತನಾಡುತ್ತಾ, ಗಣೇಶ್ ಅವರ ಸಂಗೀತ ನಿರ್ದೇಶನವನ್ನು ಕೊಂಡಾಡಿದರು. ಭಕ್ತಿ ಪ್ರಧಾನ ಚಿತ್ರದ ಸಂಗೀತದಲ್ಲಿ ಯಶಸ್ವಿಯಾಗುವುದು ಬಹಳ ಕಷ್ಟದ ಕೆಲಸ. ಶ್ರೀ ನಾಗಶಕ್ತಿ ಚಿತ್ರದ ಮೂಲಕ ಗಣೇಶ್ ಅವರು ಗೆದ್ದಿದ್ದಾರೆ ಎಂದರು. ಅಂದಹಾಗೆ ಚಿತ್ರದ ನಾಯಕ ನಟ ರಾಮ್ ಕುಮಾರ್. ಬಹಳ ಸುದೀರ್ಘ ಸಮಯದ ಬಳಿಕ ಅವರು ನಟಿಸುತ್ತಿರುವ ಚಿತ್ರವಿದು.


Click it and Unblock the Notifications











