ಆಟೋರಿಕ್ಷಾ ಓಡಿಸಿ, ಹಾಡುಗಳ ಸಿಡಿ ಹಂಚಿದ ದರ್ಶನ್
ಆಟೋ ರಿಕ್ಷಾ ಚಾಲಕರ ಕುರಿತು ಸಾಕಷ್ಟೂ ಸಿನಿಮಾಗಳು ಬಂದರೂ ಕ್ಲಿಕ್ ಆಗಿದ್ದು ಮಾತ್ರ ತುಂಬಾ ಕಮ್ಮಿ. ಇಂದಿಗೂ ಆಟೋ ರಾಜ ಎಂದರೆ ಶಂಕರ್ ನಾಗ್ ಹೆಸರನ್ನೇ ಎಲ್ಲರೂ ಹೇಳುವುದು ಇದಕ್ಕೆ ಕಾರಣ. ಶಂಕರ್ ಅವರ ಪಾತ್ರ, ಚಾಲಕರಿಗೆ ಆಪ್ತವಾಗಿತ್ತು, ಪಾತ್ರದೊಡನೆ ತಮ್ಮನ್ನು ಹೋಲಿಸಿಕೊಳ್ಳುತ್ತಿದ್ದರು. ಈಗ ಇದೇ ನಿಟ್ಟಿನಲ್ಲಿ ಚಾಲಕರೊಡನೆ ಕಲೆತು, ಆಡಿ ನಲಿದು ಅವರ ಮನಗೆಲ್ಲಲು ದರ್ಶನ್ ನಿರ್ಧರಿಸಿದ್ದಾರೆ.
ಕೆಸಿಎನ್ ಚಂದ್ರಶೇಖರ್ ನಿರ್ಮಾಣದ, ದಿನಕರ್ ತೂಗುದೀಪ್ ನಿರ್ದೇಶನದ , ಚಾಲೆಂಜಿಗ್ ಸ್ಟಾರ್ ದರ್ಶನ್ ನಾಯಕನಾಗಿರುವ , ದೀಪಾ ಸನ್ನಿಧಿ ನಾಯಕಿಯಾಗಿರುವ ಸಾರಥಿ ಚಿತ್ರದ ಧ್ವನಿಸುರುಳಿಗಳು ಇಂದು ಆಟೋ ಚಾಲಕರ ಸಮ್ಮುಖದಲ್ಲಿ ಬಿಡುಗಡೆಗೊಂಡಿದೆ. ಇದೇ ಖುಷಿಯಲ್ಲಿ ಆಟೋ ಚಾಲನೆ ಮಾಡಿದ ದರ್ಶನ್, ಅಲ್ಲಿದ್ದ ನೂರಾರು ಡ್ರೈವರ್ ಗಳ ಮನಗೆದ್ದರು.
ಸಾರಥಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ವಿಭಿನ್ನವಾಗಿ, ವಿಶೇಷವಾಗಿ ನಗರದ ರಾಜಾಜಿನಗರದ ಮೈದಾನದಲ್ಲಿ ಆಟೋ ಡ್ರೈವರ್ಗಳ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ನಂತರ ಸಾರಥಿ ಸವಾರಿ ಮಲ್ಲೇಶ್ವರಂ, ಮೆಜೆಸ್ಟಿಕ್, ಚಿಕ್ಕಪೇಟೆ ಮುಂತಾದ ಆಟೋ ಸ್ಟಾಂಡ್ಗಳತ್ತ ಸಾಗಿದೆ.
ಆನಂದ್ ಆಡಿಯೋ ಸಂಸ್ಥೆಯಿಂದ ಹೊರಬಂದಿರುವ ಆಡಿಯೋಗೆ ವಿ ಹರಿಕೃಷ್ಣರ ಸಂಗೀತ ನೀಡಿದ್ದಾರೆ. ಆಟೋ ಡ್ರೈವರ್ ಗಳು ಮುಗಿ ಬಿದ್ದು ಚಿತ್ರದ ಹಾಡುಗಳನ್ನು ಕೇಳುತ್ತಿದ್ದಾರಂತೆ. ಆಟೋಚಾಲಕನ ಪಾತ್ರಧಾರಿಯಾಗಿ ದರ್ಶನ್ ಗೆಲ್ಲುತ್ತಾರೋ ಇಲ್ಲವೋ ನೆಚ್ಚಿನ ಸ್ಟಾರ್ ಒಬ್ಬ ತಮ್ಮ ಆಟೋ ಓಡಿಸಿದ ಎಂಬ ಖುಷಿಯಲ್ಲಿ ಡ್ರೈವರ್ ಗಳು ಮುಳುಗಿದ್ದಂತೂ ಸುಳ್ಳಲ್ಲ.


Click it and Unblock the Notifications











