ಗೀತಸಾಹಿತಿ ಗೀತಪ್ರಿಯ ಚಿಕಿತ್ಸೆಗೆ ಸಿಎಂ ಪರಿಹಾರ
ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ, ನಮ್ಮೂರ್ನಾಗ್ ನಾನೊಬ್ಬನೆ ಜಾಣ, ಇದೇನು ಸಭ್ಯತೆ ಇದೇನ ಸಂಸ್ಕೃತಿ, ಹಕ್ಕಿಯು ಹಾರುತಿದೆ, ವೀಣಾ ನಿನಗೇಕೋ ಈ ಕಂಪನ...ಹಾಡುಗಳನ್ನು ಕೇಳಿದಾಗಲೆಲ್ಲಾ ಅವರು ಕೇವಲ ಗೀತಪ್ರಿಯ (81)ರಷ್ಟೆ ಅಲ್ಲ ಸಂಗೀತ ಪ್ರಿಯರು ಎಂಬುದು ಮನದಟ್ಟಾಗುತ್ತದೆ. ಒಂದೇ ಬಳ್ಳಿಯ ಹೂಗಳು, ಬೆಟ್ಟದ ಹುಲಿ, ಹೊಂಬಿಸಿಲು ಸೇರಿದಂತೆ ಮುವ್ವತ್ತು ಅರ್ಥಪೂರ್ಣ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಗೀತಪ್ರಿಯ.
ಈಗವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ದೇಹಸ್ಥಿತಿ ಗಂಭೀರವಾಗಿರುವ ವಿಷಯ ಗೊತ್ತೇ ಇದೆ. ಗಂಟಲಲ್ಲಿ ಕಾಣಿಸಿಕೊಂಡಿದ್ದ ಗಂಟಿನ ಆಪರೇಷನ್ ಆದನಂತರ ಬೆಂಗಳೂರಿನ ಮಹಾಲಕ್ಷ್ಮಿಪುರಂ ಮನೆಯಲ್ಲಿ ಲಕ್ಷ್ಮಣರಾವ್ ಮೋಹಿತೆ (ಗೀತಪ್ರಿಯ) ಹಾಸಿಗೆ ಹಿಡಿದಿದ್ದಾರೆ. ಆಪರೇಷನ್ ಕಾರಣದಿಂದಾಗಿ ಮಾತಾಡಲು ಬಾಯಿ ತೆಗೆದರೂ ಮಾತೇ ಹೊರಡುತ್ತಿಲ್ಲ.
ಈಗಾಗಲೆ ಚಿತ್ರೋದ್ಯಮದ ಹಲವು ಗಣ್ಯರು ಗೀತಪ್ರಿಯ ಅವರಿಗೆ ಆರ್ಥಿಕ ಸಹಾಯ ಮಾಡಿ ಅವರ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸದಾನಂದಗೌಡರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಗೀತಪ್ರಿಯರಿಗೆ ರು.1.50 ಪರಿಹಾರವನ್ನು ನೀಡಿದ್ದಾರೆ. ಈ ಹಣ ಶೀಘ್ರದಲ್ಲೇ ಗೀತಪ್ರಿಯ ಅವರ ಕೈ ಸೇರಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಚಿತ್ರೋದ್ಯಮದ ಹಲವರು ಗಣ್ಯರು, ಫಿಲಂ ಚೇಂಬರ್, ಶರವಣ ಸಾಯಿ ಗೋಲ್ಡ್, ರಮೇಶ್ ಅರವಿಂದ್, ಶ್ರೀನಿವಾಸಮೂರ್ತಿ ಹೀಗೆ ದೊಡ್ಡಬಳಗವೇ ಗೀತಪ್ರಿಯ ಅವರ ಬೆನ್ನಿಗೆ ನಿಂತಿದ್ದು ಅವರ ಆರ್ಥಿಕ ನೆರವು ನೀಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











